₹1 ಕೋಟಿ ಬೆಳೆ ತೆಗೆವ ಉಡುಪಿ ರೈತ ರಮೇಶ್ ನಾಯಕ್‌ಗೆ ಮೋದಿ ಪ್ರಶಸ್ತಿ: ಏನಿವರ ಸಾಧನೆ?

By Kannadaprabha NewsFirst Published Dec 5, 2023, 3:30 AM IST
Highlights

ಕೃಷಿಯಿಂದಲೇ ವಾರ್ಷಿಕ 1 ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೆಕ್ಕೆಟೆ ಗ್ರಾಮದ ಪ್ರಗತಿಪರ ಕೃಷಿಕ, ಹೈನೋದ್ಯಮಿ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರ ನೀಡುವ ‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 

ಕುಂದಾಪುರ (ಡಿ.05): ಕೃಷಿಯಿಂದಲೇ ವಾರ್ಷಿಕ 1 ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೆಕ್ಕೆಟೆ ಗ್ರಾಮದ ಪ್ರಗತಿಪರ ಕೃಷಿಕ, ಹೈನೋದ್ಯಮಿ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರ ನೀಡುವ ‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಡಿ.7ರ ಗುರುವಾರ ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಗತಿಪರ ಕೃಷಿಕ ಹಾಗೂ ಉದ್ಯಮಿಯಾಗಿರುವ ರಮೇಶ್‌ ನಾಯಕ್‌, ವೈವಿಧ್ಯಮಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿರುವ ತಮ್ಮ 13 ಎಕರೆ ಜಾಗದಲ್ಲಿ ಅವರು ವೈವಿಧ್ಯಮಯ ಕೃಷಿ ಮಾಡುತ್ತಿದ್ದಾರೆ. 11 ವಿವಿಧ ಜಾತಿಯ, ಸುಮಾರು 1,634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ನೈಸರ್ಗಿಕ ಕೃಷಿಯ ಮೂಲಕ ಉತ್ತಮ ಫಸಲು ಬೆಳೆಯುತ್ತಿದ್ದಾರೆ. ಸಾವಯವ, ನೈಸರ್ಗಿಕ ಕೃಷಿಯ ಮೂಲಕ ಹಣ್ಣುಗಳನ್ನು ಬೆಳೆದು, ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ. ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಉಪಯೋಗಿಸಿ 30 ಸಾವಿರ ಅನಾನಸ್ ಗಿಡಗಳನ್ನು ನಾಟಿ ಮಾಡಿದ್ದಾರೆ. 2 ಗಿಡಗಳ ಮಧ್ಯದಲ್ಲಿ ಪಪ್ಪಾಯಿ ಗಿಡಗಳನ್ನು ಅಂತರದ ಬೆಳೆಯಾಗಿ ಬೆಳೆಸಿದ್ದಾರೆ.

ಕಾಂಗ್ರೆಸ್‌ಗೆ ಪ್ರತ್ಯುತ್ತರ ಕೊಡೊ ಶಕ್ತಿ ಜೆಡಿಎಸ್‌-ಬಿಜೆಪಿ ಮೈತ್ರಿಗಿದೆ: ಎಚ್.ಡಿ.ದೇವೇಗೌಡ

ಈ ನಡುವೆ, ಡೆಂಗ್ ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ ಸೂಪರ್ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರ್ಯಾಗನ್ ಫ್ರೂಟ್ ಸೇರಿದಂತೆ ಒಟ್ಟು 1,634 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ವಾರ್ಷಿಕವಾಗಿ ಸುಮಾರು 1 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುತ್ತಿದ್ದಾರೆ. ತಮ್ಮ ಹೊಲದಲ್ಲಿ ಇಂಗು ಗುಂಡಿಗಳನ್ನು ತೋಡಿ, ಮಳೆ ನೀರನ್ನು ಇಂಗುವಂತೆ ಮಾಡುವ ಮೂಲಕ ಅಂತರ್ಜಲದ ಮಟ್ಟ ಹೆಚ್ಚಲು ಕಾರಣರಾಗಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ಆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ, ತೆಕ್ಕಟ್ಟೆಯಲ್ಲಿ ಅವರು ರೈಸ್ ಮಿಲ್ ಕೂಡ ಹೊಂದಿದ್ದಾರೆ.

ಏನಿವರ ಸಾಧನೆ?
- ಕುಂದಾಪುರ ತಾಲೂಕಿನಲ್ಲಿ 13 ಎಕರೆ ಜಮೀನು ಹೊಂದಿರುವ ರಮೇಶ್‌ ನಾಯಕ್‌
- ವೈವಿಧ್ಯಮಯ ಕೃಷಿ ಪದ್ಧತಿ ಅಳವಡಿಸಿ 1634 ತಳಿಯ ಹಣ್ಣಿನ ಗಿಡ ನೆಟ್ಟಿರುವ ರೈತ
- 30 ಸಾವಿರ ಅನಾನಸ್‌ ಗಿಡ ನಾಟಿ. 2 ಗಿಡಗಳ ಮಧ್ಯ ಪಪ್ಪಾಯಿ ಅಂತರ ಬೆಳೆ
- ಸಾವಯವ ಪದ್ಧತಿಯ ಮೂಲಕ ಕೃಷಿ ಮಾಡಿ ಇತರೆ ರೈತರಿಗೆ ಮಾದರಿ
- ಜಮೀನಿನಲ್ಲಿ ಇಂಗುಗುಂಡಿ ನಿರ್ಮಿಸಿ ಮಳೆ ನೀರು ಇಂಗಿಸುತ್ತಿರುವ ರಮೇಶ್‌
- ಹೈನುಗಾರಿಕೆ ಜತೆಗೆ ರೈಸ್‌ಮಿಲ್‌ ಕೂಡ ನಡೆಸುತ್ತಿರುವ ಪ್ರಗತಿ ಪರ ರೈತ

ತೆಲಂಗಾಣ ಸರ್ಕಾರದ ವಿರುದ್ಧ ಜನಾಕ್ರೋಶ: ಸಚಿವ ಪ್ರಿಯಾಂಕ್ ಖರ್ಗೆ

‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಕ್ಕೆ ತುಂಬಾ ಖುಷಿಯಾಗಿದೆ. ಕೃಷಿ‌ ಉದ್ದೇಶಕ್ಕಾಗಿ ಜಾಗ ಖರೀದಿ ಮಾಡಿರಲಿಲ್ಲ. ಕೃಷಿಯನ್ನು ಉದ್ಯಮವನ್ನಾಗಿ‌ ಮಾಡಬೇಕು ಎನ್ನುವ ಆಸೆ ಇತ್ತು. ಹೀಗಾಗಿ, ಮೊದಲೇ‌ ಖರೀದಿಸಿದ್ದ 13 ಎಕರೆ ಜಾಗದಲ್ಲಿ ಕೃಷಿ‌ ಮಾಡಿದ್ದೇನೆ. ಆರು ತಿಂಗಳು ಅಲೆದಾಟ ನಡೆಸಿ, ಪ್ರಗತಿಪರ ಕೃಷಿಕರ ಬಳಿ ತೆರಳಿ ಅವರಿಂದ ಮಾಹಿತಿ ಪಡೆದುಕೊಂಡು ಕೃಷಿ ಮಾಡುತ್ತಿದ್ದೇನೆ. ನಾನೇನು ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ. ಬ್ರಹ್ಮಾವರ ಕೃಷಿ ಕೇಂದ್ರದವರು ಶಿಫಾರಸು ಮಾಡಿದ್ದರು.
- ರಮೇಶ್‌ ನಾಯಕ್‌, ಪ್ರಗತಿಪರ ರೈತ

click me!