
ಶಿವಮೊಗ್ಗ(ಜು.20): ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ್ ಕಾರ್ಯಕ್ರಮದಡಿ ಭಾರತೀಯರಿಗೆ ಸ್ವಾಭಿಮಾನದಿಂದ ಬದುಕುವ ವಾತಾವರಣ ಕಲ್ಪಿಸುವುದರ ಜೊತೆಗೆ ವಿಶ್ವಮಾನ್ಯತೆಯನ್ನು ದೇಶಕ್ಕೆ ಗಳಿಸಿಕೊಟ್ಟಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಉದ್ಘಾಟಿಸಿ, ಜಗತ್ತಿನಾದ್ಯಂತ ಕೊರೋನಾ ಹಲವು ರೀತಿಯಲ್ಲಿ ಸಂಕಷ್ಟತಂದೊಡ್ಡಿದೆ. ಇದಕ್ಕೆ ಭಾರತ ಹೊರತಾಗಿಲ್ಲ. ಒಂದೆಡೆ ಸ್ವಾಭಿಮಾನದ ಪ್ರಶ್ನೆ. ಇನ್ನೊಂದೆಡೆ ದೇಶದ ಪ್ರಜೆಗಳು ಹಸಿವಿನಿಂದ ಇರಬಾರದು, ಪ್ರತಿ ವ್ಯಕ್ತಿಗೂ ಅನ್ನ ದೊರಕಬೇಕೆಂದು ಸಂಕಷ್ಟಸಮಯದಲ್ಲೂ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಿ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದಾರೆ ಎಂದರು.
ನೆರೆ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ಭಾರತದ ವಿರುದ್ಧ ಇನ್ನಿಲ್ಲದ ಮಸಲತ್ತು ನಡೆಸುತ್ತಿವೆ. ಆದರೆ ಭಾರತ ಹಿಂದಿನಂತಿಲ್ಲ. ದೇಶ ಇಂದು ಸಾಕಷ್ಟುಬಲಿಷ್ಠವಾಗಿದೆ. ತಂಟೆಗೆ ಬಂದ ಎರಡು ದೇಶಕ್ಕೂ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡಿದ್ದಾರೆ. ಗಡಿ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದರು.
ಪಾಕಿಸ್ತಾನ ಮತ್ತು ಚೀನಾಕ್ಕೆ ಒಂದಿಚ್ಚು ಭಾರತದ ಜಾಗವನ್ನು ಬಿಟ್ಟುಕೊಡದೆ ಗಡಿ ರಕ್ಷಣೆ ವಿಚಾರದಲ್ಲಿ ಪ್ರಧಾನಿ ಮೋದಿ ಕೈಗೊಂಡ ನಿರ್ಧಾರದ ಕುರಿತು ಇಡೀ ವಿಶ್ವವೇ ಕೊಂಡಾಡುತ್ತಿದೆ. ಜಗತ್ತು ನಿಬ್ಬೆರಗಾಗಿ ಭಾರತ ಅಭಿವೃದ್ಧಿ ನೋಡುತ್ತಿದೆ ಎಂದು ಹೇಳಿದರು.
ಚುನಾವಣೆ ದಿನಾಂಕ ನಿಗದಿ: ಬಿಜೆಪಿಯಿಂದ ರಾಜಕೀಯ ಲೆಕ್ಕಾಚಾರ ಆರಂಭ..!
ಪ್ರತಿಯೊಬ್ಬ ಕಾರ್ಯಕರ್ತನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಬೇಕು. ಬೂತ್ ಮಟ್ಟದಲ್ಲಿ ರೈತರು ಸೇರಿ ಎಲ್ಲ ವರ್ಗದವರನ್ನು ಜೋಡಿಸಿಕೊಂಡು ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದರು. ದೇಶದ ಗೌರವ ಕಾಪಾಡುವ ಜೊತೆಗೆ ಬಡವರ್ಗದ ಹಿತ ಕಾಯಬೇಕು. ವಿರೋಧಿಗಳು ಇರುವುದೇ ವಿರೋಧ ಮಾಡುವುದಕ್ಕೆ. ರಾಜಕಾರಣ ಬಿಟ್ಟು ದೇಶದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲೆಯ ಇತರ ಶಾಸಕರು ಮತ್ತು ಸಂಸದರು, ಹಿರಿಯ ಪದಾಧಿಕಾರಿಗಳು ಆನ್ಲೈನ್ ಮೂಲಕವೇ ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಎಸ್. ದತ್ತಾತ್ರಿ, ಸುವರ್ಣ ಶಂಕರ್, ಶಿವರಾಜ್, ನಟರಾಜ್ ಇನ್ನಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ