ಬೆಂಗಳೂರು (ಮೇ.10): ಕೊರೋನಾ ಸೋಂಕು ತಡೆಗೆ ಸರ್ಕಾರ ಸೆಮಿಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಿಂದ ಭಾನುವಾರನೂ ಅಪಾರ ಸಂಖ್ಯೆಯ ಉದ್ಯೋಗಿಗಳು, ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಸ್ವಂತ ವಾಹನಗಳಲ್ಲಿ ವಲಸೆ ಹೋಗಿದ್ದರಿಂದ ರಾಜ್ಯದ ಮುಖ್ಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಏರ್ಪಟ್ಟಿತ್ತು.
ಬೆಂಗಳೂರಿನಿಂದ ಆಂಧ್ರ ಮತ್ತು ತಮಿಳುನಾಡಿನ ವಿವಿಧ ಊರುಗಳತ್ತ ಜನ ವಲಸೆ ಹೊರಟಿದ್ದರಿಂದ ಬೆಂಗಳೂರನ್ನು ಕೋಲಾರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ನಲ್ಲಿ ನಿರಂತರ ವಾಹನ ಸಂಚಾರವಿತ್ತು.
ಸುಮ್ಮನೆ ಹೊರ ಬಂದರೆ ಹುಷಾರ್: ವಾಹನದಲ್ಲಿ ಹೋಗುವಂತಿಲ್ಲ, ನಡೆದೇ ಹೋಗಬೇಕು! ..
ಕೋಲಾರದಲ್ಲಿ ರೈಲು ಹಾಗೂ ಖಾಸಗಿ ವಾಹನಗಳು ಕಾರ್ಮಿಕರಿಂದ ತುಂಬಿ ಹೋಗಿದ್ದವು. ಬೆಂಗಳೂರಿನಿಂದ ರಾಮನಗರ ಮಾತ್ರವಲ್ಲದೆ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳತ್ತಲೂ ಕೂಲಿ ಕಾರ್ಮಿಕರು ಬಾಡಿಗೆ ವಾಹನಗಳು, ಉದ್ಯೋಗಿಗಳು ಸ್ವಂತ ವಾಹನಗಳಲ್ಲಿ ಗುಳೆ ಹೊರಟಿದ್ದರು. ಇದರಿಂದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ವಿಪರೀತ ಹೆಚ್ಚಾಗಿತ್ತು.
ರೈಲಿನಲ್ಲೂ ಪ್ರಯಾಣ: ಇನ್ನು ತಮ್ಮ ಸ್ವಂತ ರಾಜ್ಯ, ಜಿಲ್ಲೆ, ಊರುಗಳಿಗೆ ಹೊಗಲು ಮೈಸೂರು ರೈಲ್ವೆ ನಿಲ್ದಾಣದಲ್ಲಿ ನೂರಾರು ಮಂದಿ ಗಂಟು ಮೂಟೆ ಕಟ್ಟಿಕೊಂಡು, ಕುಟುಂಬ ಸಮೇತ ಧಾವಿಸಿದ್ದರು. ಕೆಲವು ರೈಲಿನ ಟಿಕೆಟ್ ಸಿಗದೆ, ಟಿಕೆಟ್ಗಾಗಿ ಪರದಾಡುತ್ತಿದ್ದರು. ಇನ್ನೂ ಕೆಲವರು ತಮ್ಮ ಊರಿಗೆ ಹೊಗುವ ರೈಲು ಬರುವುದಕ್ಕಾಗಿ ಕಾದು ಕುಳಿತ್ತಿದ್ದರು. ಬಿಹಾರ, ರಾಜಸ್ಥಾನ, ಸೊಲ್ಲಾಪುರ, ಖಾನಪುರ ಸೇರಿದಂತೆ ಉತ್ತರ ಭಾರತದಿಂದ ಮೈಸೂರಿಗೆ ಆಗಮಿಸಿದ್ದವರ ಸಂಖ್ಯೆಯೇ ಹೆಚ್ಚಾಗಿತ್ತು. ರೈಲು ನಿಲ್ದಾಣದಲ್ಲಿ ರೈಲಿಗೆ ಕಾದು ಕುಳಿ ತ್ತಿದ್ದವರಿಗೆ ಕೆಲವು ಸ್ವಯಂ ಸೇವಾ ಸಂಸ್ಥೆಯವರು ಆಹಾರ, ನೀರು ವಿತರಿಸುವ ಮೂಲಕ ಮಾನವೀಯತೆ ಮೆರೆದರು.