
ಬೆಂಗಳೂರು (ಮಾ.30): ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಕೇಳಿದ್ದೆವು. ಆದರೆ ಇತರೆ ಸಮುದಾಯಗಳಿಗೆ ಅನ್ಯಾಯವಾಗದಂತೆ ಪ್ರತ್ಯೇಕವಾಗಿ 2ಡಿ ಮೀಸಲಾತಿ ರಚಿಸಿ ಸರ್ಕಾರ ನ್ಯಾಯ ಒದಗಿಸಿದೆ. ಸರ್ಕಾರ ನಮಗೆ 2ಡಿ ಮೀಸಲಾತಿ ಆದೇಶ ಪತ್ರವನ್ನು ನೀಡಿದ್ದು, ಎಲ್ಲರೂ ಇಂದು ವಿಜಯೋತ್ಸವದ ಹಬ್ಬವನ್ನು ಆಚರಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮೀಸಲಾತಿ ಹೋರಾಟವನ್ನು ಮಾಡಲಾಗುತ್ತಿದೆ. ಆದರೆ, ಸರ್ಕಾರ 2ಡಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಸರ್ಕಾರದ ಆದೇಶ ಪತ್ರ ಸಿಗುವವರೆಗೂ ವಿಜಯೋತ್ಸವ ಮಾಡದಂತೆ ಕರೆ ನೀಡಲಾಗಿತ್ತು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೇವೆ. ಈಗ ನಮ್ಮ ಕೈಗೆ ಎಲ್ಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಆದೇಶ ಪತ್ರವು ಸಿಕ್ಕಿದೆ. ಲಿಂಗಾಯತ ಪಂಚಮಸಾಲಿ, ಮಲೇಗೌಡ, ಮರಾಠ ಸಮುದಾಯ 2ಡಿ ಮೀಸಲಾತಿ ಅಡಿಯಲ್ಲಿ ಬಂದಿದ್ದು, ಎಲ್ಲರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಆದ್ದರಿಂದ ಇಂದು ರಾಜ್ಯಾದ್ಯಂತ ನಮ್ಮ ಸಮುದಾಯದ ಎಲ್ಲಗೂ ತಮ್ಮ ಗ್ರಾಮಗಳಲ್ಲಿ ವಿಜಯೋತ್ಸವ ಆಚರಣೆ ಮಾಡಲು ಕರೆ ನೀಡಿದ್ದೇನೆ ಎಂದರು.
ಪಂಚಮಸಾಲಿ ಲಿಂಗಾಯತಕ್ಕೆ 7% ಮೀಸಲಾತಿ ಘೋಷಣೆ, ಮುಸ್ಲಿಂ ಮೀಸಲಾತಿಗೆ ಕೋಕ್!
ಇದು ಮೀಸಲಾತಿ ಕ್ರಾಂತಿಗೆ ಲಭ್ಯವಾದ ಜಯ: ಲಿಂಗಾಯತ ಪಂಚಮಸಾಲಿ, ಮಲೇಗೌಡ ಎಲ್ಲಾ ಲಿಂಗಾಯತ ಸಮುದಾಯ ಓಬಿಸಿ ಪಟ್ಟಿಗೆ ಸೇರಿಸಬೇಕು ಅಂತ ಹೋರಾಟ ಮಾಡಿದ್ದೆವು. ಐತಿಹಾಸಿಕ ಪಾದಯಾತ್ರೆ ಮಾಡಿದ್ದೆವು. ನಿರಂತರ ಹೋರಾಟ ಮಾಡಿದ ಪರಿಣಾಮ ಪ್ರಧಾನಮಂತ್ರಿಗಳು ನಮಗೆ ನ್ಯಾಯ ಕೊಡಿಸುವ ನಿರ್ದೇಶನ ನೀಡಿದ್ದರು. ನಾವು 2a ಮೀಸಲಾತಿ ಕೇಳಿದ್ದೆವು. ಆದ್ರೆ ಇತರೆ ಸಮುದಾಯಗಳಿಗೆ ಅನ್ಯಾಯ ಆಗಬಾರದು ಅಂತ 2d ಮಾಡಿ ಲಿಂಗಾಯತ ಎಲ್ಲಾ ಸಮುದಾಯ ಜೊತೆ ಮರಾಠ ಎಲ್ಲಾ ಸಮುದಾಯ ಸೇರಿಸಲಾಗಿದೆ. ಲಿಂಗಾಯತ ಸಮುದಾಯ ಮೀಸಲಾತಿ ಕ್ರಾಂತಿ ಮಾಡಿದ್ದು ಈಗ ಜಯ ಸಿಕ್ಕಿದೆ ಎಂದರು.
ಪ್ರಧಾನಿ ಮೋದಿ, ಅಮಿತ್ ಶಾ, ಶೋಭಾ ಕರಂದ್ಲಾಜೆಗೆ ಅಭಿನಂದನೆ: ಸಚಿವ ಸಂಪುಟ ಸಭೆಯ ಬಳಿಕ ರಾಜ್ಯ ಪತ್ರಕ್ಕೆ ಕಾಯುತ್ತಿದ್ದೆವು. ರಾಜ್ಯಪತ್ರ ಕೊಡುವುದರ ಮೂಲಕ ಆದೇಶ ಪ್ರತಿ ನಮಗೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ದುಡಿಯುವ ವರ್ಗಕ್ಕೆ ಸಹಾಯ ಮಾಡಿದ್ದರು. ಈಗ ಪ್ರಧನಾಮಂತ್ರಿಗಳು, ಅಮಿತ್ ಶಾ ಮಧ್ಯಪ್ರದೇಶದಿಂದ ಸಮಸ್ಯೆ ಬಗೆಹರಿದಿದೆ. ಕೇಂದ್ರ ಮತ್ತು ನಮ್ಮ ನಡುವೆ ಸೇತುವೆ ಆದ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ಯತ್ನಾಳ್, ಈರಣ್ಣ ಕಡಾಡಿ, ಬೆಲ್ಲದ್, ಸಿದ್ದುಸವದಿ ಎಲ್ಲರ ಸಹಕಾರ ಸಿಕ್ಕಿದ್ದು ಅಭಿನಂದನೆ. ಜೊತೆಗೆ, ನಿರಂತರವಾಗಿ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಇದರ ಶ್ರೇಯಸ್ಸು ಸಿಗಬೇಕು. ವಿಧಾನಸೌಧ ಮುಂದಿರುವ ಅಂಬೇಡ್ಕರ್ ಹಾಗೂ ಬಸವಣ್ಣಗೆ ಮಾಲಾರ್ಪಣೆ ಮಾಡಿ ತೆರಳುತ್ತೇನೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಒಬಿಸಿಗೆ ಸೇರಿಸಲು ಹೋರಾಟ: ಇದು ನಮ್ಮ ಸಮುದಾಯಕ್ಕೆ ಸಿಕ್ಕಿರುವ ಮೊದಲ ಜಯವಾಗಿದೆ. ರಾಜ್ಯದಲ್ಲಿ ಮಾತ್ರ ನಮಗೆ ಒಬಿಸಿಯಡಿ 2dಗೆ ಸೇರಿಸಿದ್ದಾರೆ. ಇನ್ನು ಚುನಾವಣೆ ಮುಗಿದ ಬಳಿಕ ಕೇಂದ್ರ ಸರ್ಕಾರದಲ್ಲಿ ಸಾಮಾಜಿಕ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ನೀಡುವಂತೆ ಹೋರಾಟ ಮಾಡಲಾಗುತ್ತದೆ. ಕೇಂದ್ರದಲ್ಲಿಯೂ ನಮಗೆ ಒಬಿಸಿ ಮೀಸಲಾತಿ ಸಿಕ್ಕಲ್ಲಿ ತೀವ್ರ ಅನುಕೂಲ ಆಗಲಿದೆ. ಅಲ್ಲಿಗೆ ನಮ್ಮ ಮೀಸಲಾತಿ ಹೋರಾಟವನ್ನು ನಾವು ಪರಿಸಮಾಪ್ತಿ ಮಾಡಬಹುದು ಎಂದು ತಿಳಿಸಿದರು.
ಯಾವ ಎಸ್ಸಿ ಜಾತಿಯನ್ನೂ ಮೀಸಲಿನಿಂದ ತೆಗೆದಿಲ್ಲ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ನಿಂದ ಮೀಸಲಾತಿ ತೆಗೆದು ಹಾಕೋದು ಸರಿಯಲ್ಲ: ಇನ್ನು ರಾಜ್ಯದಲ್ಲಿ ಕೆಲವು ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಈಗ ಲಿಂಗಾಯತರು ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನೀಡಲಾಗಿರುವ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ. ಆದರೆ, ಮೀಸಲಾತಿ ತಗೆದು ಹಾಕ್ತೀವಿ ಅಂತ ಹೇಳೋದು ಸರಿಯಲ್ಲ. ಕಾಂಗ್ರೆಸ್ ನವರು ಹೆಳಿದ್ದು ತಪ್ಪು, ಅವರು ಈ ರೀತಿ ಹೇಳಬಾರದಿತ್ತು. ಈಗ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಅದನ್ನು ಕಿತ್ತು ಹಾಕುವುದು ಸರಿಯಲ್ಲ. ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ