
ವಿಜಯಪುರ/ಬೆಂಗಳೂರು (ಮಾ.07): ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಅವಮಾನಕಾರಿಯಾಗಿ ವರದಿ ಪ್ರಸಾರ ಮಾಡುವುದಕ್ಕೆ ಬೆಂಗಳೂರಿನ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಆಧಾರರಹಿತ ಸುದ್ದಿಗಳ ವಿರುದ್ಧ ಸ್ವಾಮೀಜಿ ಕಾನೂನು ಹೋರಾಟ ಆರಂಭಿಸಿದ್ದು, ಈಗ ಅವರಿಗೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ.
ಕಳೆದ ಫೆಬ್ರವರಿ 12 ರಂದು ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಬಳಿ ಸ್ವಾಮೀಜಿ ಅವರ ಮೇಲೆ ಹಲ್ಲೆ ನಡೆದಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರ ವಿಚಾರವಾಗಿ ಹಲ್ಲೆಯಾಗಿದೆ ಎಂಬ ಆಧಾರರಹಿತ ಮಾತುಗಳು ಹರಿದಾಡಿದ್ದವು. ಓರ್ವ ಮಹಿಳೆ ಮತ್ತು ಆಕೆಯ ಜೊತೆಗಿದ್ದ ಕೆಲವರು ಶ್ರೀಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿ ಮಾಡಲಾಗಿತ್ತು. ಈ ವರದಿಗಳಲ್ಲಿ ಸ್ವಾಮೀಜಿಯವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಪರೋಕ್ಷವಾಗಿ ಅವರ ನಡವಳಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿತ್ತು.
ಈ ಹಲ್ಲೆಯ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದ ಸ್ವಾಮೀಜಿ, ನೇರವಾಗಿ ಕಾನೂನಿನ ಮೊರೆ ಹೋಗಿದ್ದರು. "ನಾನು ಪಂಚಮಸಾಲಿ ಸಮಾಜದ ಆಧ್ಯಾತ್ಮಿಕ ಗುರು ಹಾಗೂ ಪೀಠಾಧಿಪತಿಯಾಗಿದ್ದೇನೆ. ಸಮಾಜದಲ್ಲಿ ನನಗೊಂದು ಗೌರವವಿದೆ. ಆದರೆ ಕೆಲವು ಮಾಧ್ಯಮಗಳು ಯಾವುದೇ ವಿಷಯವನ್ನು ದೃಢೀಕರಣ ಮಾಡದೆ ನನ್ನ ವಿರುದ್ಧ ಮಾನಹಾನಿಕರ ವರದಿಗಳನ್ನು ಪ್ರಕಟಿಸಿವೆ. ನಾನು ಅನೈತಿಕ ಹಾಗೂ ಅಕ್ರಮ ನಡವಳಿಕೆಯಲ್ಲಿ ಭಾಗಿಯಾಗಿದ್ದೇನೆ ಎಂಬಂತೆ ಬಿಂಬಿಸಲಾಗಿದೆ" ಎಂದು ಬೆಂಗಳೂರಿನ 30 ನೇ ಹೆಚ್ಚುವರಿ ಸಿಸಿ ಹಾಗೂ ಎಸ್ಜೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಸ್ವಾಮೀಜಿಯವರು ಸಲ್ಲಿಸಿದ ಅರ್ಜಿ, ಅಫಿಡವಿಟ್ ಮತ್ತು ಲಭ್ಯವಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಧೀಶರು, ಸ್ವಾಮೀಜಿಯವರ ವಿರುದ್ಧ ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಯಾವುದೇ ರೀತಿಯ ಅವಮಾನಕಾರಿ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ವಿತರಿಸುವುದಕ್ಕೆ ಮಧ್ಯಂತರ-ಏಕಪಕ್ಷೀಯ ತಾತ್ಕಾಲಿಕ ತಡೆಯಾಜ್ಞೆ ನೀಡಿ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯವು ಈ ತಡೆಯಾಜ್ಞೆಯನ್ನು ನೀಡುವ ಸಂದರ್ಭದಲ್ಲಿ ಒಂದು ಪ್ರಮುಖ ಷರತ್ತನ್ನು ವಿಧಿಸಿದೆ. ತಡೆಯಾಜ್ಞೆ ನೀಡಿದ ಮುಂದಿನ 7 ದಿನಗಳ ಒಳಗಾಗಿ ಸ್ವಾಮೀಜಿಯವರು ಈ ಪ್ರಕರಣಕ್ಕೆ ಸಂಬಂಧಿಸಿದ ಸಮನ್ಸ್ ಜಾರಿಗೆ ಪೂರಕವಾದ ದೂರುಗಳು, ಸಾಕ್ಷಿಗಳು ಮತ್ತು ಹೆಚ್ಚಿನ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಒಂದು ವೇಳೆ ಈ ದಾಖಲೆಗಳನ್ನು ನೀಡಲು ವಿಫಲರಾದಲ್ಲಿ, ತಾತ್ಕಾಲಿಕವಾಗಿ ನೀಡಲಾಗಿರುವ ಈ ತಡೆಯಾಜ್ಞೆಯು ತನ್ನಿಂದ ತಾನೇ ರದ್ದಾಗುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸದ್ಯಕ್ಕೆ ಈ ತಡೆಯಾಜ್ಞೆಯಿಂದಾಗಿ ಸ್ವಾಮೀಜಿಯವರಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಮಾಧ್ಯಮಗಳು ಹಾಗೂ ವ್ಯಕ್ತಿಗಳು ಇನ್ನು ಮುಂದೆ ಸ್ವಾಮೀಜಿಯವರ ವಿರುದ್ಧ ಆಧಾರರಹಿತ ಮತ್ತು ಮಾನಹಾನಿಕರ ಪೋಸ್ಟ್ಗಳನ್ನು ಹಾಕುವಂತಿಲ್ಲ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ