
ಬೆಂಗಳೂರು(ಮೇ.09): ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಕ್ಕಲಿಗ ಸಮುದಾ ಯವನ್ನು ಎಳೆದು ತರುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ನ ಒಕ್ಕಲಿಗ ಸಚಿವರು ಮತ್ತು ಶಾಸಕರು, ಒಕ್ಕಲಿಗ ಸಮುದಾಯಕ್ಕೂ, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಸಮುದಾಯವನ್ನು ಮುಗಿಸಲಾಗುತ್ತಿದೆ ಎಂದು ತಮ್ಮ ಸ್ವಾರ್ಥಕ್ಕಾಗಿ ಹೇಳಿಕೆ ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಚಿವರಾದ ಎನ್.ಚೆಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಡಾ. ಎಂ.ಸಿ.ಸುಧಾಕರ್ ಸೇರಿದಂತೆ ಕಾಂಗ್ರೆಸ್ನ ಪ್ರಮುಖ ಒಕ್ಕಲಿಗ ನಾಯಕರು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ದಿಢೀರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಪ್ರಜ್ವಲ್ ರೇವಣ್ಣ ಪ್ರಕರಣದ ಪ್ರಸ್ತುತ ಬೆಳವಣಿಗೆಗಳ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್ನವ್ರು ಹಿಡನ್ ಕ್ಯಾಮೆರಾ ಇಟ್ಟು ರೆರ್ಕಾಡ್ ಮಾಡಿಸಿದ್ದಿವಾ?: ಎಚ್ಡಿಕೆಗೆ ಪ್ರಿಯಾಂಕ್ ಪ್ರಶ್ನೆ
ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ದಾರಿ ತಪ್ಪಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್ ಅವರು ವಿನಾಕಾರಣ ಇಡೀ ಪ್ರಕರಣವನ್ನು ಒಕ್ಕಲಿಗ ಸಮುದಾಯದೊಂದಿಗೆ ತಳಕು ಹಾಕುವ ಕೆಲಸ ಮಾಡುತ್ತಿದ್ದಾರೆ. ನಾಡಪ್ರಭು ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು ಅವರಂತಹವರು ಒಕ್ಕಲಿಗರು ಸಮಾಜಕ್ಕೆ ಸೇವೆ ಮಾಡಿದ್ದಾರೆ. ಎಲ್ಲ ಸಮಾಜವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಒಕ್ಕಲಿಗ ಸಮಯದಾಯದವರದ್ದು. ಈ ರೀತಿಯ ಕೃತ್ಯ ಎಸಗುವುದು ನಮ್ಮ ಗುಣವಲ್ಲ ಎಂದರು.
ಕುಮಾರಸ್ವಾಮಿ ಬ್ಲಾಕ್ಮೇಲರ್ಗಳ ಕಿಂಗ್: ಡಿ.ಕೆ.ಶಿವಕುಮಾರ್ ಕಿಡಿ
ಒಕ್ಕಲಿಗರು ನಿಮ್ಮ ಹಿಡಿತದಲ್ಲಿಲ್ಲ: ಕುಮಾರಸ್ವಾಮಿ ಅವರಿಗೆ ಒಕ್ಕಲಿಗರೆಲ್ಲರೂ ತಮ್ಮ ಹಿಡಿತದಲ್ಲಿದ್ದಾರೆ ಎಂಬ ಭಾವನೆಯಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ಒಕ್ಕಲಿಗ ಸಮುದಾಯಕ್ಕೆ, ನಿಮ್ಮ ಕುಟುಂಬಕ್ಕೆ ಕಳಂಕವಲ್ಲ ಎಂದಿದ್ದರೆ ಅವರು ಹೇಳಲಿ. ಕಾನೂನು ತುಂಬಾ ಕಠಿಣವಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಕುಮಾರಸ್ವಾಮಿ ಏನೇ ಮಾಡಿದರೂ ಒಕ್ಕಲಿಗರು ಬೆಂಬಲಿಸುತ್ತಾರೆ ಎಂದು ತಿಳಿದಿದ್ದರೆ ಅದು ಅವರ ಭ್ರಮೆ. ಒಕ್ಕಲಿಗ ಸಮುದಾಯ
ನಿಮ್ಮನ್ನು ಬೆಂಬಲಿಸಿದಂತೆ, ನಮ್ಮನ್ನೂ ಬೆಂಬಲಿಸುತ್ತದೆ. ನಾವೂ ಸಮುದಾಯದ ಆಶೀರ್ವಾದದಿಂದಲೇ ಬಂದವರು. ಆದರೆ, ಇಡೀ ಸಮುದಾಯ ನಿಮ್ಮ ಹಿಡಿತದಲ್ಲಿದೆ ಎಂಬುದನ್ನೆಲ್ಲ ಬಿಡಿ ಎಂದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಆರ್. ಅಶೋಕ್ ಅವರು ಪ್ರಜ್ವಲ್ ಪ್ರಕರಣದಿಂದ ಒಕ್ಕಲಿಗರನ್ನು ಮುಗಿಸಲು ಸರ್ಕಾರ ಮುಂದಾಗಿದೆ ಎಂದು ಹೇಳುತ್ತಾರೆ. ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣಕ್ಕೂ ಒಕ್ಕಲಿಗರಿಗೂ ಏನು ಸಂಬಂಧ? ಸುಖಾಸುಮ್ಮನೆ ಸಮುದಾಯವನ್ನು ಎಳೆತಂದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವಿನ ಕಿತ್ತಾಟಕ್ಕೆ ಹೊರಬಂದ ಪ್ರಕರಣ. ಅವರ ಜಗಳದಿಂದ ರಾಷ್ಟ್ರಮಟ್ಟದಲ್ಲಿ ಒಕ್ಕಲಿಗ ಸಮುದಾ ಯದ ಮಾನ ಹರಾಜಾಗುವಂತಾಗಿದೆ ಎಂದರು.
ಅಧ್ಯಕ್ಷರ ತಪ್ಪಿದ್ದರೆ ಅವರ ಮೇಲೂ ಕ್ರಮವಾಗಲಿ:
ಕೃಷ್ಣ ಬೈರೇಗೌಡ ಮಾತನಾಡಿ, ಅಶ್ಲೀಲ ವಿಡಿಯೋ ಚಿತ್ರೀಕ ರಣಕ್ಕೆ ಕಾಂಗ್ರೆಸ್ ಹೇಳಿರಲಿಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಲಿ, ಪ್ರಜ್ವಲ್ ತಪ್ಪಿದ್ದರೆ ಶಿಕ್ಷೆಯಾಗುತ್ತದೆ, ವಿಡಿಯೋ ಹರಿಬಿಟ್ಟವರ ಕೇಸಲ್ಲಿ ನಮ್ಮ ಅಧ್ಯಕ್ಷರ ತಪ್ಪಿದ್ದರೆ ಅವರ ಮೇಲೂ ಕ್ರಮವಾಗಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ