ಮತಪಟ್ಟಿ ಪರಿಷ್ಕರಣೆಗೆ 224 ಕ್ಷೇತ್ರಕ್ಕೂ ಅಧಿಕಾರಿ ನೇಮಕ

By Kannadaprabha NewsFirst Published Nov 30, 2022, 6:30 AM IST
Highlights

ಬೆಂಗಳೂರಲ್ಲಿ ಅಕ್ರಮದ ಬಳಿಕ ಎಚ್ಚೆತ್ತ ಆಯೋಗ, ಇದೇ ಮೊದಲ ಬಾರಿ ಪ್ರತ್ಯೇಕ ಅಧಿಕಾರಿ ನೇಮಕ

ಬೆಂಗಳೂರು(ನ.30):  ಬೆಂಗಳೂರಿನಲ್ಲಿ ನಡೆದ ಮತದಾರರ ವೈಯಕ್ತಿಕ ವಿವರ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿದ್ದು, ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳನ್ನು ನೇಮಕ ಮಾಡಿದೆ.

ಇದೇ ಮೊದಲ ಬಾರಿ ಮತಪಟ್ಟಿಪರಿಷ್ಕರಣೆಗೆಂದೇ ಎಲ್ಲ ಕ್ಷೇತ್ರಗಳಿಗೂ ಚುನಾವಣಾ ಆಯೋಗ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಮತದಾರರ ಪಟ್ಟಿಪರಿಷ್ಕರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದು, ಸೇರ್ಪಡೆ, ವಿಳಾಸ ಬದಲಾವಣೆ ಸೇರಿದಂತೆ ಇತರೆ ಯಾವುದೇ ಕಾರ್ಯದಲ್ಲಿಯೂ ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಬಿಎಂಪಿ ಅಧಿಕಾರಿಗಳ ಪಾತ್ರವಿಲ್ಲ: ಮಾನಸಿಕ ಹಿಂಸೆ ನೀಡಬೇಡಿ

ಈಗಾಗಲೇ ಬೆಂಗಳೂರಿನಲ್ಲಿ ಅಕ್ರಮ ನಡೆದ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಉನ್ನತ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲದೇ, ಬೆಂಗಳೂರಿನ ಇತರೆ ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ಅಕ್ರಮ ನಡೆದಿರುವಂತೆ ರಾಜ್ಯದ ಇತರೆಡೆಗಳಲ್ಲಿಯೂ ಅಕ್ರಮ ನಡೆದಿರುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಪರಿಷ್ಕರಣೆಯಲ್ಲಿ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಂಬಂಧ ಇದೀಗ ರಾಜ್ಯದ 224 ಕ್ಷೇತ್ರಗಳಿಗೂ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಿ ಕ್ರಮ ಕೈಗೊಂಡಿದೆ.

ಏಕೆ ಬಿಗಿ ಕ್ರಮ?

- ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆಯಿಂದ ಅಕ್ರಮ ನಡೆದ ಆರೋಪ
- ಮತದಾರರ ಪಟ್ಟಿಪರಿಷ್ಕರಣೆಯಲ್ಲಿ ಖಾಸಗಿ ಸಂಸ್ಥೆಯಿಂದ ಅಕ್ರಮ
- ರಾಜ್ಯದ ಇತರೆಡೆಯೂ ಚಿಲುಮೆಯಿಂದ ಮಾಹಿತಿ ಸಂಗ್ರಹದ ಶಂಕೆ
- ಮುಂದೆ ಅಕ್ರಮಕ್ಕೆ ಅವಕಾಶವಾಗದಿರಲಿ ಎಂದು ಈಗಲೇ ಬಿಗಿ ಕ್ರಮ
 

click me!