
ಮಂಗಳೂರು: ಇಂಗ್ಲೆಂಡ್ನ ಹ್ಯಾಂಪ್ಶೈರ್ ಕೌಂಟಿಯ ಫ್ಲೀಟ್ ನಗರಸಭೆ ಚುನಾವಣೆಯಲ್ಲಿ ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಸತತ ಮೂರನೇ ಬಾರಿ ಭರ್ಜರಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಅವರು ಸ್ಥಳೀಯ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಬಲಿಷ್ಠ ಸ್ಥಾನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಅವರು ಜಾಗತಿಕ ಫಾರ್ಮಾಸ್ಯೂಟಿಕಲ್ ಮತ್ತು ಕ್ಲಿನಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಯುನೈಟೆಡ್ ಕಿಂಗ್ಡಮ್, ಭಾರತ, ಮಧ್ಯಪ್ರಾಚ್ಯ ಮತ್ತು ಅಮೆರಿಕಾದಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. 2001ರಲ್ಲೇ ಯೋಗ ಮತ್ತು ಆಯುರ್ವೇದ ಕುರಿತ ಕ್ಲಿನಿಕಲ್ ಸಂಶೋಧನೆ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಡಕೆಯ ಕ್ಯಾನ್ಸರ್ ಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮಹತ್ವದ ಅಧ್ಯಯನಗಳನ್ನು ಕೈಗೊಂಡಿದ್ದಾರೆ.
ಬ್ರಿಟಿಷ್ ಸಂಸತ್ತಿನಲ್ಲಿ ಭಾರತ-ಯುಕೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕುಮಾರ್ ಅವರು ಸಕ್ರಿಯ ಪಾತ್ರವಹಿಸಿದ್ದಾರೆ. ಸೌತ್ಹಾಲ್ನ ಮಾಜಿ ಸಂಸದ ವೀರೇಂದ್ರ ಶರ್ಮಾ ಸೇರಿದಂತೆ ಗಣ್ಯರೊಂದಿಗೆ ‘ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್’ ಸಂಸ್ಥೆಯನ್ನು ಸ್ಥಾಪಿಸಿದ್ದು, ಸಂಸತ್ತಿನ ಆವರಣದಲ್ಲಿ ಆಯೋಜಿಸಿದ ಉದ್ಯಮ ಸಭೆಗಳಲ್ಲಿ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ನಾಯಕರು ಮತ್ತು ಜಾಗತಿಕ ಹೂಡಿಕೆದಾರರು ಭಾಗವಹಿಸಿದ್ದಾರೆ.
ಮೂಲತಃ ಕಾಸರಗೋಡಿನ ಕುಂಟಿಕಾನಮಠದ ಕುಮಾರ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಬಿ.ಫಾರ್ಮಾ ಪದವಿ ಪಡೆದು, ನಂತರ ಲಂಡನ್ನಲ್ಲಿ ಎಂ.ಬಿ.ಎ ಪೂರ್ಣಗೊಳಿಸಿದ್ದಾರೆ. ಯುಕೆಯ ಅರಸ್ ಮಾರ್ಕೆಟಿಂಗ್ ಲಿಮಿಟೆಡ್ ಹಾಗೂ ಅಮೆರಿಕದ ಅರಸ್ ಮಾರ್ಕೆಟಿಂಗ್ ಎಲ್ಎಲ್ಸಿ’ ಸಂಸ್ಥೆಗಳ ನಿರ್ದೇಶಕರಾಗಿದ್ದು, ‘Ondudo’ ಎಂಬ ಎಡ್-ಟೆಕ್ ವೇದಿಕೆಯ ಹಾಗೂ ಸೌತ್ಹಾಲ್ನ ಮಾಜಿ ಸಂಸದ ವೀರೇಂದ್ರ ಶರ್ಮಾ ಸೇರಿದಂತೆ ಗಣ್ಯರೊಂದಿಗೆ ‘ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ಅವರ ಪುತ್ರರಾಗಿರುವ ಅವರು, 500 ವರ್ಷಗಳ ಇತಿಹಾಸವಿರುವ ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಆರಾಧನೆ, ಜೀರ್ಣೋದ್ಧಾರ, ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಮಂತ್ರಾಲಯ ಪರಿಮಳ ಪ್ರಶಸ್ತಿ ದೊರೆತಿವೆ. ಜೊತೆಗೆ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಯೂರೋಪಿನಾದ್ಯಂತ ಕನ್ನಡ ಸಂಸ್ಕೃತಿಯನ್ನು ಹರಡುತ್ತಿದ್ದಾರೆ.
ಫಾರ್ಮಾ ಉದ್ಯಮ, ವ್ಯವಸ್ಥಾಪನಾ ಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯ ವಿಷಯಗಳ ಕುರಿತು ‘ಕನ್ನಡಪ್ರಭ’ ಪತ್ರಿಕೆಯಲ್ಲಿ 70ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫಾರ್ಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶ್ವ ಫಾರ್ಮಾಸಿಸ್ಟ್ ದಿನದಂದು ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಸೋಸಿಯೇಷನ್ ವತಿಯಿಂದ ಕುಮಾರ್ ಕುಂಟಿಕಾನಮಠ ಅವರನ್ನು ಗೌರವಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ