ಜಾಲತಾಣದಲ್ಲಿ ಉತ್ತರ ಭಾರತೀಯರಿಂದ ಕನ್ನಡಿಗರ ಅವಹೇಳನವೇ ಟ್ರೆಂಡ್‌!

Published : Oct 29, 2024, 07:40 AM ISTUpdated : Oct 29, 2024, 07:43 AM IST
ಜಾಲತಾಣದಲ್ಲಿ ಉತ್ತರ ಭಾರತೀಯರಿಂದ ಕನ್ನಡಿಗರ ಅವಹೇಳನವೇ ಟ್ರೆಂಡ್‌!

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕನ್ನಡ ಮತ್ತು ಕನ್ನಡಿಗರ ಅವಹೇಳನ ನಡೆಯುತ್ತಲೇ ಇವೆ. ಆದರೆ, ಕನ್ನಡದ ಹೆಸರಿನಲ್ಲಿ ನೂರಾರು ಪ್ರಶಸ್ತಿಗಳು, ಹಲವು ಸೌಲಭ್ಯಗಳನ್ನು ಪಡೆದಂತಹ ಅನೇಕ ಸಾಹಿತಿಗಳು ಉತ್ತರ ಭಾರತೀಯರ ಅವಹೇಳನೆ ಖಂಡಿಸಿ ತುಟಿಬಿಚ್ಚುತ್ತಿಲ್ಲ. ಸರ್ಕಾರವೂ ಕ್ರಮಕೈಗೊಂಡಿಲ್ಲ!

ಸಂಪತ್‌ ತರೀಕೆರೆ

ಬೆಂಗಳೂರು (ಅ.29): 'ನಮ್ಮಿಂದಲೇ ಬೆಂಗಳೂರು, ನಾವಿಲ್ಲ ಎಂದರೆ ಪಬ್‌ಗಳೆಲ್ಲ ಖಾಲಿ, ನಾವಿಲ್ಲ ಎಂದರೆ ಬೆಂಗಳೂರೇ ಇಲ್ಲ..' 'ನಾಯಿಗಳು ಮತ್ತು ಕನ್ನಡಿಗರಿಗೆ ಪ್ರವೇಶವಿಲ್ಲ; 'ಕನ್ನಡ ಕೊಳಕು ಭಾಷೆ’...ಇವು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಉತ್ತರ ಭಾರತೀಯರು ಹಾಗೂ ವಲಸಿಗರು ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಅವಹೇಳನದ ಕೆಲ ಝಲಕ್‌ ಮಾತ್ರ.

ಬೆಂಗಳೂರಿನಿಂದ ಉತ್ತರ ಭಾರತೀಯರು ಹೋದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಬಡಾಯಿ ಕೊಚ್ಚಿಕೊಂಡಿದ್ದ ಸುಗಂಧಾ ಶರ್ಮಾ ಎಂಬುವರಿಗೆ ಕನ್ನಡಪರ ಹೋರಾಟಗಾರರು ಪಾಠ ಕಲಿಸಿದ್ದಾರೆ. ಕೆನಡಾ ದೇಶದಲ್ಲಿ ಮಾರಾಟಕ್ಕೆ ಲಭ್ಯ ಇರುವಂತೆ ಕನ್ನಡ ಧ್ವಜ ಮತ್ತು ಲಾಂಛನ ಇರುವ ಬಿಕಿನಿ ಮಾರಾಟ ಮಾಡಿದ ಅಮೆಜಾನ್‌ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕನ್ನಡಿಗರ ಕೆಂಗಣಿಗೆ ಗುರಿಯಾಗುತ್ತಿದ್ದರೂ ಉತ್ತರ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕವನ್ನು ಅವಹೇಳನ ಮಾಡುವುದು ಮಾತ್ರ ನಿಂತಿಲ್ಲ.

ಬೆಂಗಳೂರಿನ ಕಂಪನಿಗಳಲ್ಲಿ ಕನ್ನಡಿಗ ಉದ್ಯೋಗಿಗಳೇ ಅಲ್ಪಸಂಖ್ಯಾತರು!

ಮಳೆ ಬಂದು ರಸ್ತೆಯಲ್ಲಿ ನೀರು ನಿಂತರೆ ಕನ್ನಡ ಭಾಷೆಗೆ ಅವಹೇಳನ ಮಾಡಿ ಕೆಣಕುವುದು. ಬಸ್‌ಗಳಲ್ಲಿ ವೈಯಕ್ತಿಕ ಕಾರಣಕ್ಕೆ ಜಗಳವಾದರೆ ವಲಸಿಗರ ವಿರುದ್ಧ ಕನ್ನಡಿಗರು ಎಂದು ದ್ವೇಷದ ಸಂದೇಶ ಹಾಕುವುದು. ಅಪರಾಧ ಪ್ರಕರಣಗಳಲ್ಲಿ ಬಂಧಿತರಾದವರನ್ನು ಕೂಡ ಭಾಷೆ ಹೆಸರಲ್ಲಿ ಕೆರಳಿಸುವುದು ನಡೆಯುತ್ತಲೇ ಇದೆ.

ನಿರಭಿಮಾನಿ ಸಾಹಿತಿಗಳು:

ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕನ್ನಡ ಮತ್ತು ಕನ್ನಡಿಗರ ಅವಹೇಳನ ನಡೆಯುತ್ತಲೇ ಇವೆ. ಆದರೆ, ಕನ್ನಡದ ಹೆಸರಿನಲ್ಲಿ ನೂರಾರು ಪ್ರಶಸ್ತಿಗಳು, ಹಲವು ಸೌಲಭ್ಯಗಳನ್ನು ಪಡೆದಂತಹ ಅನೇಕ ಸಾಹಿತಿಗಳು ಉತ್ತರ ಭಾರತೀಯರ ಅವಹೇಳನೆ ಖಂಡಿಸಿ ತುಟಿಬಿಚ್ಚುತ್ತಿಲ್ಲ. ಸರ್ಕಾರವೂ ಕ್ರಮಕೈಗೊಂಡಿಲ್ಲ!

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು, ಜಾಲತಾಣಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅವಮಾನದ ಕುರಿತು ಈವರೆಗೂ ಮಾತನಾಡಿಲ್ಲ. ಈಗ ಮತ್ತೊಂದು ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಸಿದ್ಧತೆಯಲ್ಲಿದ್ದೇವೆ. ವಿಧಾನಸೌಧದ ಆವರಣದಲ್ಲಿ ನಾಡದೇವಿಯ ಪ್ರತಿಮೆ ಪ್ರತಿಷ್ಠಾಪನೆಗೆ ಯೋಜನೆಯನ್ನು ರೂಪಿಸಿದ್ದೇವೆ.
ಆದರೆ, ಉತ್ತರ ಭಾರತೀಯರಿಂದ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಆಗುತ್ತಿರುವ ಅವಮಾನ, ಅವಹೇಳನ ತಡೆಯುವ ಪ್ರಯತ್ನ ಮಾತ್ರ ಆಗುತ್ತಿಲ್ಲ. ಕನ್ನಡದ ರಕ್ಷಣೆಗೆಂದೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಲೀ, ಪ್ರಾಧಿಕಾರ, ಅಕಾಡೆಮಿಗಳಾಗಲೀ, ಪೊಲೀಸ್‌ ಇಲಾಖೆಯಾಗಲೀ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಕನ್ನಡಿಗರ ವಿರುದ್ಧ ಹಿಂದಿವಾಲಾಗಳು ಸೇರಿದಂತೆ ಉತ್ತರ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ಅವಹೇಳನೆ ಮಾಡಿದ್ದಾರೆ. ಕನ್ನಡ ಮತ್ತು ಕನ್ನಡಿಗರನ್ನು ಎಷ್ಟು ಅಸಹ್ಯವಾಗಿ ಬಿಂಬಿಸುತ್ತಿದ್ದಾರೆ ಎಂಬುದರ ಕೆಲ ಉದಾಹರಣೆಗಳಿವು-

ಪ್ರಕರಣ:1

ನಾವೆಲ್ಲರೂ ಬೆಂಗಳೂರು ಬಿಟ್ಟರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿಜಿಗಳು ಖಾಲಿಯಾಗಿರುತ್ತವೆ. ನೀವು ಹಣವನ್ನು ಗಳಿಸುವುದಿಲ್ಲ. ಕೋರಮಂಗಲದ ಎಲ್ಲಾ ಕ್ಲಬ್‌ಗಳು ಖಾಲಿಯಾಗುತ್ತವೆ. ಸುಂದರ ಹುಡುಗಿಯರು ಪಂಜಾಬಿ ಸಂಗೀತಕ್ಕೆ ನೃತ್ಯ ಮಾಡುವುದನ್ನು ನೀವು ನೋಡುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎಂಬ ನಿಮ್ಮ ಆಸೆ ಈಡೇರಿದರೆ ಬೆಂಗಳೂರೇ ಕಣ್ಮರೆಯಾಗುತ್ತದೆ ಎಂದು ಸುಗಂಧ ಶರ್ಮಾ ಎಂಬಾಕೆ ಟ್ವೀಟ್‌ ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು.

ಪ್ರಕರಣ 2:

ಯಾವ ಯಾವ ರಾಜ್ಯಗಳು ಎಲ್ಲೆಲ್ಲಿವೆ ಎಂದು ತೋರಿಸುತ್ತಾ ಬಂದಾಗ, ಕರ್ನಾಟಕ ಎಲ್ಲಿದೆ ಹೇಳವಾಗ ಒಬ್ಬ ಉತ್ತರ ಭಾರತೀಯ ಅಸಹ್ಯವಾಗಿ ಕೆಳಗೆ (ಮರ್ಮಾಂಗ ಇರುವ ಜಾಗ) ತೋರಿಸುತ್ತಾನೆ. 

ಪ್ರಕರಣ 3:

ಚಂದಾಪುರದ ಲೇಔಟ್‌ ಒಂದರ ರಸ್ತೆಗಳಿಗೆ ಕನ್ನಡ ಸಾಹಿತಿಗಳ ಹೆಸರು ಇಡಲು ಅಡ್ಡಿಪಡಿಸಿದ ಘಟನೆಯಲ್ಲಿ ಕನ್ನಡಿಗರೇ ಭಾಗಿಯಾಗಿದ್ದು ವಿಪರ್ಯಾಸ. ಕನ್ನಡಪರ ಹೋರಾಟಗಾರರ ಮಧ್ಯಸ್ಥಿಕೆಯಲ್ಲಿ ಗ್ರಾಮಪಂಚಾಯಿತಿಯೇ ನಾಮಫಲಕ ಹಾಕಲು ಮುಂದಾಗಿತ್ತು.

ಹಬ್ಬ, ಆಹಾರದಲ್ಲೂ ಹಿಂದಿವಾಲಾಗಳ ಸಂಸ್ಕೃತಿ ಹೇರಿಕೊಳ್ಳುತ್ತಿರುವ ಕನ್ನಡಿಗರು: ಬೆಂಗಳೂರಿನ ಮೇಲೆ ಸಾಂಸ್ಕೃತಿಕ ದಾಳಿ!

ಪ್ರಕರಣ 4:

ಗೂಗಲ್‌ನಲ್ಲಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದೆಂದು ಹುಡುಕಾಡಿದಾಗ ಕನ್ನಡ ಎಂದು ತೋರಿಸಿದ್ದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಕನ್ನಡಪರ ಸಂಘಟನೆಗಳು ಕಾನೂನು ಹೋರಾಟದ ಎಚ್ಚರಿಕೆ ನೀಡಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದವು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!