
ವಿಧಾನಸಭೆ : ‘ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ಇಲ್ಲದಾಗಿದೆ. ಪಕ್ಷಪಾತ ಹೆಚ್ಚಾಗಿದೆ. ಸಂಚಾರ ದಟ್ಟಣೆ, ತ್ಯಾಜ್ಯ ನಿರ್ವಹಣೆ, ರಸ್ತೆ ದುರಸ್ತಿ ಸೇರಿ ಯಾವ ಮೂಲಸೌಕರ್ಯಕ್ಕೂ ಆದ್ಯತೆ ಸಿಗುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಉದ್ಯಮಗಳು ಬೆಂಗಳೂರಿನ ಕೈತಪ್ಪುತ್ತಿವೆ. ಒಟ್ಟಾರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೂಲಕ ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಭಾಗಿಸಿದ್ದರಿಂದ ಯಾವ ಪ್ರಯೋಜನವೂ ಆಗಿಲ್ಲ...’
ಇದು, ವಿಧಾನಸಭೆಯಲ್ಲಿ ಬುಧವಾರ ಪ್ರತಿಪಕ್ಷ ಬಿಜೆಪಿಯ ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ, ಮುನಿರತ್ನ, ಮುನಿರಾಜು ಸೇರಿದಂತೆ ನಗರದ ವಿವಿಧ ಶಾಸಕರು ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ ಪರಿ.
ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಷಯದಡಿ ಜಿಬಿಎಯಾಗಿ ಪರಿವರ್ತನೆಗೊಂಡಿರುವ ಬೆಂಗಳೂರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸದಿರುವುದು ಅಭಿವೃದ್ಧಿ ಕುಂಠಿತವಾಗಿರುವ ಹಾಗೂ ನಗರದ ಇತರೆ ಸಮಸ್ಯೆಗಳ ಕುರಿತ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದರು.
ಆರಂಭದಲ್ಲಿ ಮಾತನಾಡಿದ ವಿಶ್ವನಾಥ್, ದಶಕಗಳಿಂದ ಬೆಂಗಳೂರು ವಿಭಜನೆ ಆಗಿರಲಿಲ್ಲ. ವಿಸ್ತರಣೆ ಆದರೂ ಒಂದೇ ಆಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ಪಾಲಿಕೆ ಮಾಡಿದೆ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಸ್ವಾರ್ಥಕ್ಕಾಗಿ ಅವೈಜ್ಞಾನಿಕವಾಗಿ ಹೋಳು ಮಾಡಿದೆ. ನಗರದ ಅಭಿವೃದ್ಧಿಗೆ ಸೂಕ್ತ ಅನುದಾನ ಸಿಗುತ್ತಿಲ್ಲ. ಕಳೆದ ಬಜೆಟ್ನಲ್ಲಿ ಏಳು ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದರು. ಆದರೆ ಬಿಡುಗಡೆ ಆಗಿದ್ದು ಮಾತ್ರ ಕೇವಲ ಮೂರು ಸಾವಿರ ಕೋಟಿ. ಅನುದಾನ ನೀಡಿಕೆಯಲ್ಲೂ ಪಕ್ಷಪಾತ. ಸಿದ್ದರಾಮಯ್ಯ ಅವರು ತಾವು ಕಾಂಗ್ರೆಸ್ ಶಾಸಕರಿಗೆ ಮಾತ್ರ ಮುಖ್ಯಮಂತ್ರಿಯಲ್ಲ, ಚುನಾವಣೆ ಆಗಿ ಸರ್ಕಾರ ಬಂದ ಮೇಲೆ 224 ಶಾಸಕರಿಗೂ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬಾರದು ಎಂದರು.
44 ವರ್ಷ ಕಾಲ ಟನಲ್ ರಸ್ತೆ ನಿರ್ಮಾಣ ಮಾಡಿದವನಿಗೆ ಟನಲ್ ರಸ್ತೆ ನಿರ್ಮಾಣದ ಹಕ್ಕು ಕೊಡಲಾಗಿದೆ. ಕಿಲೋ ಮೀಟರ್ ಗೆ 19 ರು. ಟೋಲ್ ನಿರ್ಧರಿಸಲಾಗಿದೆ. ಅರಮನೆ ರಸ್ತೆ ವಿಸ್ತರಣೆ ಮಾಡಲು ಭೂ ಒತ್ತುವರಿ ಪರಿಹಾರ ಕೊಡಲು ಸರ್ಕಾರಕ್ಕೆ ಆಗಲಿಲ್ಲ. ಆದರೆ, ಟನಲ್ ರಸ್ತೆಗೆ 5 ಸಾವಿರ ಕೋಟಿ ಪರಿಹಾರವನ್ನು ಸರ್ಕಾರ ಕೊಡಬೇಕಿದೆ ಎಂದು ಕಿಡಿಕಾರಿದರು.
ಸತೀಶ್ ರೆಡ್ಡಿ ಮಾತನಾಡಿ, ನಗರದಲ್ಲಿ ನಾಗರಿಕರು ಮನೆ ಕಟ್ಟಲಾಗುತ್ತಿಲ್ಲ. ಅಧಿಕಾರಿಗಳ ಭ್ರಷ್ಟಾಚಾರ ಹೆಚ್ಚಾಗಿದೆ. ಮನೆ ಕಟ್ಟುವವರು ಪ್ರತಿ ಚದರ ಅಡಿಗೆ 100 ರು. ಲಂಚ ಕೊಡಬೇಕು. ಈ ಹಣ ಎಲ್ಲಿಗೆ ಹೋಗುತ್ತದೆ. ಸರ್ಕಾರಕ್ಕೆ ಹೋಗುತ್ತಾ, ಯಾರ್ಯಾರಿಗೆ ಹೋಗುತ್ತದೆ ತಿಳಿಸಬೇಕು. ಅಷ್ಟೇ ಅಲ್ಲ, ಬ್ಯಾಂಕ್ನಲ್ಲಿ ಲಕ್ಷಾಂತರ ಸಾಲ ತೆಗೆದುಕೊಂಡು ಮನೆ ಕಟ್ಟಿರುವವರ ಮನೆಗಳನ್ನು ಸಾವಿರ ರು. ತೆರಿಗೆ ಕಟ್ಟಿಲ್ಲ ಅಂತ ಹರಾಜು ನೋಟಿಸ್ ನೀಡುತ್ತಿದ್ದಾರೆ. ಅವರಿಗೆ ಈ ಅಧಿಕಾರ ಕೊಟ್ಟವರ್ಯಾರು. ಅವರಿಗೆ ತಾಕತ್, ಧರ್ಮ ಇದ್ದರೆ ಕೋಟ್ಯಾಂತರ ತೆರಿಗೆ ಬಾಕಿ ಇರುವ ಮಾಲ್ಗಳ ಹರಾಜು ಹಾಕಲಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ನ ಶರತ್ ಬಚ್ಚೇಗೌಡ ಹಾಗೂ ಸಚಿವ ಶರಣ್ ಪ್ರಕಾಶ್ ಪಾಟೀಲ್ , ಆಧಾರ ರಹಿತವಾಗಿ ಇಂತಹ ಆರೋಪ ಮಾಡಬಾರದು ಎಂದರು. ಆದರೆ, ಸತೀಶ್ ರೆಡ್ಡಿ ಅವರು ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಗಾಂಧೀಜಿ ಆಣೆಗೂ ಇದು ನಿಜ ಎಂದರು.
ಮುನಿರತ್ನ ಮಾತನಾಡಿ, ಬೆಂಗಳೂರು ಟನೆಲ್ ರಸ್ತೆ ಬಗ್ಗೆ ಮುಖ್ಯಮಂತ್ರಿ ಅವರನ್ನು ದಾರಿತಪ್ಪಿಸಲಾಗುತ್ತಿದೆ. ಯಾರಿಗೋ ಟೆಂಡರ್ ಕೊಟ್ಟು ಬೆಂಗಳೂರು ಅಡ ಇಡಲು ಹೊರಟಿದ್ದಾರೆ. ಮೂಲಸೌಕರ್ಯಕ್ಕೆ ಒತ್ತು ನೀಡದೆ ಉದ್ಯಮಿಗಳು ಬೆಂಗಳೂರು ಬಿಟ್ ಹೋಗ್ತಿದ್ದಾರೆ. ನಾವು ಉದ್ಯಮಿಗಳನ್ನ ಬೆಂಗಳೂರಿನಲ್ಲಿ ಇರಲು ಬಿಡ್ತಿಲ್ಲ.
ಬಿಲ್ಡರ್ ಗಳು ಬೆಂಗಳೂರು ಬಿಡುತ್ತಿದ್ದಾರೆ. ನಗರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಯೋಜನೆಗಳು ಆಗುತ್ತಿಲ್ಲ. ರಾಜ್ಯದ 22 ಜಿಲ್ಲೆಗಳಿಗೆ ಸಂಪರ್ಕ ರಹದಾರಿಯಾಗಿರುವ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಜಂಕ್ಷನ್ನಲ್ಲಿ ತೀವ್ರವಾದ ಸಂಚಾರ ದಟ್ಟಣೆ ಸಮಸ್ಯೆ ಆಗುತ್ತಿದೆ.
ಇದರ ಪರಿಹಾರಕ್ಕೆ ಅಲ್ಲಿ ಅಂಡರ್ ಪಾಸ್ ಅಥವಾ ಇನ್ಯಾವುದೇ ಪರ್ಯಾಯ ಯೋಜನೆಗೆ ಇದ್ದ ಜಾಗದಲ್ಲಿ ಗೋದ್ರೇಜ್ ಅವರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಒಮ್ಮೆ ಕಟ್ಟಡ ನಿರ್ಮಾಣ ಆದರೆ ಅಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಯಾವ ಯೋಜನೆಯನ್ನೂ ಕೈಗೊಳ್ಳಲಾಗಲ್ಲ. ಕೂಡಲೇ ಅವರಿಗೆ ನೀಡಿರುವ ಅನುಮತಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ