40,000 ಶಾಲಾ ಸಿಬ್ಬಂದಿಗಿಲ್ಲ ಕೋವಿಡ್‌ ನೆರವು

By Kannadaprabha NewsFirst Published Oct 10, 2021, 11:52 AM IST
Highlights
  • ಸರ್ಕಾರದಿಂದ ತಲಾ 5 ಸಾವಿರ ರು. ಕೋವಿಡ್‌ ಪರಿಹಾರ ಪಡೆಯಲು ಶಾಲೆ ಬರೋಬ್ಬರಿ 40 ಸಾವಿರಕ್ಕೂ ಅಧಿಕ ಸಿಬ್ಬಂದಿ ಸಮರ್ಪಕ ದಾಖಲಾತಿಯನ್ನೇ ನೀಡಿಲ್ಲ
  • ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ನೀಡದಿರುವುದು, ಬ್ಯಾಂಕ್‌ ಖಾತೆಯೇ ಚಾಲ್ತಿಯಲ್ಲಿಲ್ಲದಿರುವುದು
  •  ಆಧಾರ್‌ ಮತ್ತು ಬ್ಯಾಂಕ್‌ ಖಾತೆಯಲ್ಲಿನ ಹೆಸರು ಹೊಂದಾಣಿಕೆ ಆಗದಿರುವುದು ಮತ್ತಿತರ ಕಾರಣ

ವರದಿ :  ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು (ಅ.10):  ಸರ್ಕಾರದಿಂದ  (Govt ) ತಲಾ 5 ಸಾವಿರ ರು. ಕೋವಿಡ್‌ ಪರಿಹಾರ ಪಡೆಯಲು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಬರೋಬ್ಬರಿ 40 ಸಾವಿರಕ್ಕೂ ಅಧಿಕ ಸಿಬ್ಬಂದಿ ಸಮರ್ಪಕ ದಾಖಲಾತಿಯನ್ನೇ ನೀಡಿಲ್ಲ. ಆಧಾರ್‌ (Aadhaar) ಜೋಡಣೆಯಾಗಿರುವ ಬ್ಯಾಂಕ್‌ ಖಾತೆ (Bank) ನೀಡದಿರುವುದು, ಬ್ಯಾಂಕ್‌ ಖಾತೆಯೇ ಚಾಲ್ತಿಯಲ್ಲಿಲ್ಲದಿರುವುದು, ಆಧಾರ್‌ ಮತ್ತು ಬ್ಯಾಂಕ್‌ ಖಾತೆಯಲ್ಲಿನ ಹೆಸರು ಹೊಂದಾಣಿಕೆ ಆಗದಿರುವುದು ಮತ್ತಿತರ ಕಾರಣಗಳಿಂದ ಅರ್ಜಿ ಸ್ವೀಕೃತವಾಗಿಲ್ಲ.

ಇದರಿಂದಾಗಿ ಶಿಕ್ಷಕರು (Teacher) ಮತ್ತು ಬೋಧಕೇತರ ಸಿಬ್ಬಂದಿ ಪರಿಹಾರದಿಂದ ವಂಚಿತರಾಗಿದ್ದಾರೆ. ಆದರೆ ಈ ವಿಷಯ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಾಲೆಗಳ (Private school) ಆಡಳಿತ ಮಂಡಳಿಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ದಾಖಲೆ ಸರಿಯಾಗಿವೆ, ಒಂದೊಮ್ಮೆ ತಪ್ಪಾಗಿದ್ದರೆ ಸರಿಪಡಿಸಲು ಎಷ್ಟುದಿವಸ ಬೇಕು ಎಂದು ಶಿಕ್ಷಕರು ಹಾಗೂ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಶಿಕ್ಷಣ ಇಲಾಖೆ (EDucation Department) ಮಾತ್ರ, ಸರಿಯಾದ ದಾಖಲೆ ಇದ್ದವರಿಗೆ ಈಗಾಗಲೇ ಪರಿಹಾರ ಸಂದಾಯವಾಗಿದೆ ಎಂದು ಹೇಳುತ್ತಿದೆ.

ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ: ಇರಲಿ ಎಚ್ಚರಿಕೆ

ಆಡಳಿತ ಮಂಡಳಿಗಳು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದ 40 ಸಾವಿರಕ್ಕೂ ಅಧಿಕ ಅರ್ಜಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಟ್ಟದಿಂದ ಅನುಮೋದನೆಯನ್ನೇ ಪಡೆದಿಲ್ಲ. ಇದರಿಂದಾಗಿಯೇ ಸಮಸ್ಯೆ ಉಂಟಾಗಿದೆ. ಶಿಕ್ಷಣ ಇಲಾಖೆ ಮನಸ್ಸು ಮಾಡಿದರೆ ವಾರದಲ್ಲಿ ಸಮಸ್ಯೆ ಪರಿಹರಿಸಿ ಎಲ್ಲರಿಗೂ ಪರಿಹಾರ ನೀಡಬಹುದು. ಆದರೆ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಶಿಕ್ಷಕರು ಆರೋಪಿಸುತ್ತಿದ್ದಾರೆ.

Bengaluru| ಬೆಂಗ್ಳೂರಲ್ಲಿ ಬರೀ 140 ಮಂದಿಗೆ ಕೊರೋನಾ ಸೋಂಕು..!

ಕೊರೋನಾ ಹಿನ್ನೆಲೆಯಲ್ಲಿ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಬೋಧಕರು, ಬೋಧಕೇತರರೂ ಸಂಕಷ್ಟದಲ್ಲಿದ್ದು ಸೂಕ್ತ ಪರಿಹಾರ ನೀಡಬೇಕು ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರು ತಲಾ 5 ಸಾವಿರ ರು. ಪರಿಹಾರ ಘೋಷಿಸಿದ್ದರು. ಬಳಿಕ ಪರಿಹಾರ ನೀಡುವಲ್ಲಿ ವಿಳಂಬವಾಯಿತು ಎಂದು ಶಿಕ್ಷಕರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಇದೀಗ ಸಿಬ್ಬಂದಿ ಬ್ಯಾಂಕ್‌ ಖಾತೆಗೆ ಪರಿಹಾರ ಮೊತ್ತ ಜಮೆಯಾಗುತ್ತಿದ್ದು, ಬಹಳಷ್ಟು ಜನರಿಗೆ ಪರಿಹಾರ ಸಿಗದೇ ಅಪಸ್ವರ ಕೇಳಿ ಬಂದಿದೆ.

ದಾಖಲೆ ಸರಿ ಇದ್ದರೆ ಪರಿಹಾರ

ದಾಖಲೆಗಳು ಸಮರ್ಪಕವಾಗಿದ್ದ 1.30 ಲಕ್ಷ ಸಿಬ್ಬಂದಿಗೆ ಪರಿಹಾರ ನೀಡಲಾಗಿದೆ. ದಾಖಲೆಗಳು ಸರಿಯಿದ್ದೂ ಪರಿಹಾರ ಸಿಗದಿದ್ದರೆ ಅಂತಹ ಪ್ರಕರಣಗಳನ್ನು ಪರಿಶೀಲಿಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

-ಬಿ.ಸಿ.ನಾಗೇಶ್‌, ಶಿಕ್ಷಣ ಸಚಿವ

ಅರ್ಜಿ ಅನುಮೋದಿಸ್ತಿಲ್ಲ

ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೆಳ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೌಲಭ್ಯ ಕೊಡಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಅನುಮೋದನೆ ನೀಡುತ್ತಿಲ್ಲ. ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದರೆ ವಾರದಲ್ಲಿ ಎಲ್ಲರಿಗೂ ಪರಿಹಾರ ಕೊಡಬಹುದು.

-ಡಿ. ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್‌ ಕರ್ನಾಟಕ

click me!