
ರಾಯಚೂರು (ಮೇ.25): ಭಕ್ತರು ದೇವಾಲಯಕ್ಕೆ ದಾನ ನೀಡಿದ್ದ ಹಸುಗಳನ್ನ ಕಸಾಯಿಖಾನೆಗೆ ಮಾರಾಟ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಸಮೀಪದ ನೀರಮಾನ್ವಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ನಡೆದಿದ್ದು, ದೇವಾಲಯದ ಅರ್ಚಕರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಬಿಟ್ಟರೆ ನೀರಮಾನ್ವಿ ಯಲ್ಲಮ್ಮ ದೇವಿ ದೇವಸ್ಥಾನ ಅತಿಹೆಚ್ಚು ಭಕ್ತರನ್ನು ಹೊಂದಿರುವ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಪ್ರತಿವರ್ಷ ನಡೆಯುವ ಇಲ್ಲಿನ ಜಾತ್ರೆಗೆ ರಾಜ್ಯದಿಂದಷ್ಟೇ ಅಲ್ಲೇ ಆಂಧ್ರಪ್ರದೇಶ ತಮಿಳನಾಡು ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಹೀಗೆ ಬರುವ ಲಕ್ಷಾಂತರ ಭಕ್ತರು ನೀರಮಾನ್ವಿ ಯಲ್ಲಮ್ಮ ದೇವಿಗೆ ಹರಕೆ ಹೊರುತ್ತಾರೆ. ದೇವಸ್ಥಾನಕ್ಕೆ ಹಸುಗಳನ್ನು ದಾನವಾಗಿ ಕೊಡುತ್ತಾರೆ. ಆದರೆ ಹೀಗೆ ಕೊಟ್ಟ ಹಸುಗಳನ್ನ ಭಕ್ತರ ಗಮನಕ್ಕೆ ಬಾರದಂತೆ ಕಸಾಯಿಖಾನೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ದಾನ ಕೊಟ್ಟ ಜಾನುವಾರು ಏಕಾಏಕಿ ನಾಪತ್ತೆ!
ಭಕ್ತರು ದೇವಾಲಯಕ್ಕೆ ನೀಡಿದ ಜಾನುವಾರುಗಳಿಗೆ ಲೆಕ್ಕವಿಲ್ಲ. ಆದರೆ ಜಾನುವಾರು ಏಕಾಏಕಿ ನಾಪತ್ತೆಯಾಗುತ್ತಿವೆ. ಇತ್ತೀಚೆಗೆ ದೇವಸ್ಥಾನಕ್ಕೆ ದಾನ ನೀಡಿದ್ದ ಹಸುಗಳು ಸಹ ನಾಪತ್ತೆಯಾಗಿದ್ದವು ಮತ್ತು ಅವುಗಳನ್ನ ಕಸಾಯಿಖಾನೆಗೆ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಭಕ್ತರು ದೇವಸ್ಥಾನದ ಅರ್ಚಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾನ್ವಿ ತಹಸೀಲ್ದಾರ್ಗೆ ದೂರು ನೀಡಿದ್ದಾರೆ. ಇದೀಗ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಮಾನ್ವಿ ತಹಸೀಲ್ದಾರ್ ಜಗದೀಶ್ ಚೌರ್ ದೇವಾಲಯದ ಅರ್ಚಕರಿಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಒಂದು ಹಸುವನ್ನು ರಕ್ಷಿಸಿದ ಅಧಿಕಾರಿಗಳು.
ಅರ್ಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ