Latest Videos

ಲಾಕಪ್ ಡೆತ್ ಆರೋಪ ಪ್ರಕರಣ; ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿ, ಪೆಟ್ರೋಲ್ ಸುರಿದು ಜೀಪ್‌ಗೆ ಬೆಂಕಿ ಹಚ್ಚಿದ ದುರುಳರು!

By Ravi JanekalFirst Published May 25, 2024, 11:14 AM IST
Highlights

ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟ ಹಿನ್ನೆಲೆ ಪೊಲೀಸರೇ ಹೊಡೆದು ಕೊಂದಿದ್ದಾರೆಂದು ಆರೋಪಿಸಿ ದುಷ್ಕರ್ಮಿಗಳು ಪೊಲೀಸ್ ಠಾಣೆಯ ಮೇಲೆಯೇ ಕಲ್ಲು ತೂರಿ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆ (ಮೇ.25): ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟ ಹಿನ್ನೆಲೆ ಪೊಲೀಸರೇ ಹೊಡೆದು ಕೊಂದಿದ್ದಾರೆಂದು ಆರೋಪಿಸಿ ದುಷ್ಕರ್ಮಿಗಳು ಪೊಲೀಸ್ ಠಾಣೆಯ ಮೇಲೆಯೇ ಕಲ್ಲು ತೂರಿ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

 ಇದೊಂದು ಲಾಕಪ್ ಡೆತ್ ಆಗಿದೆಯೆಂದು ಆರೋಪಿಸಿ ಮೃತನ ಕುಟುಂಬ ವರ್ಗ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಠಾಣೆ ಮುಂದೆ ಶವವಿಟ್ಟು ಪ್ರತಿಭಟಿಸುತ್ತಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ವರದಿಯಾಗಿದೆ.

ಚನ್ನಗಿರಿ ಪಟ್ಟಣದ ಟಿಪ್ಪು ನಗರದ ವಾಸಿಯಾದ ಬಡಿಗೆ ಕೆಲಸಗಾರ ಆದಿಲ್(32 ವರ್ಷ) ಮೃತ ವ್ಯಕ್ತಿ. ಮಟ್ಕಾ ಚೀಟಿ ಬರೆಯುತ್ತಿದ್ದ ಶಂಕೆಯಿಂದ ಪೊಲೀಸರು ಆದಿಲ್‌ಗೆ ಮಧ್ಯಾಹ್ನ ಠಾಣೆಗೆ ಕರೆ ತಂದು, ವಿಚಾರಣೆಗೊಳಪಡಿಸಿದ್ದರು. ಸಮೀಪದಲ್ಲಿಯೇ ನ್ಯಾಯಾಲಯ ಇದ್ದುದರಿಂದ ಸಂಜೆ ಒಳಗಾಗಿ ವಶದಲ್ಲಿದ್ದ ಆದಿಲ್‌ನನ್ನು ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಮುಂದಾಗಿದ್ದರು ಎನ್ನಲಾಗಿದೆ. ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ಹಂತದಲ್ಲಿ ಲಾಕಪ್‌ನಲ್ಲಿದ್ದ ಆದಿಲ್‌ ಕುಸಿದು ಬಿದ್ದಿದ್ದಾನೆ. ತಕ್ಷಣ‍ವೇ ಪೊಲೀಸರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಾಗ ಆದಿಲ್ ಸಾವನ್ನಪ್ಪಿದ್ದು, ವೈದ್ಯರು ಸಾವು ದೃಢಪಡಿಸಿದ್ದಾರೆ.

ಕಾಂಗ್ರೆಸ್ ಪಿಕ್ ಪಾಕೆಟ್ ಸರ್ಕಾರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ

ಅತ್ತ ಆದಿಲ್‌ನ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಕುಟುಂಬ ಸದಸ್ಯರು ಆದಿಲ್ ಸಾವನ್ನಪ್ಪಿದ ಸುದ್ದಿ ತಿಳಿದು ಆಸ್ಪತ್ರೆ ಬಳಿ ದೌಡಾಯಿಸಿದ್ದಾರೆ. ಪೊಲೀಸ್ ವಶದಲ್ಲಿದ್ದ ಬಡಿಗೆ ಕೆಲಸಗಾರ ಆದಿಲ್ ಸಾವನ್ನಪ್ಪಿದ್ದಾನೆಂಬ ವಿಚಾರ ಒಬ್ಬರಿಂದ ಒಬ್ಬರಿಗೆ, ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ, ಸುಮಾರು 500ಕ್ಕೂ ಹೆಚ್ಚು ಜನರು ಚನ್ನಗಿರಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು.

ಆದಿಲ್‌ ಸಾವು; ಆಕ್ರೋಶ:

ಬಡಿಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಆದಿಲ್‌ನನ್ನು ಮಟ್ಕಾ ಕೇಸ್‌ ವಿಚಾರಣೆಗೆಂದು ಠಾಣೆಗೆ ಕರೆದೊಯ್ದು, ಅಮಾನುಷವಾಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಇದು ಸಹಜವಾದ ಸಾವಲ್ಲ. ಪೊಲೀಸ್‌ ವಶದಲ್ಲಿದ್ದಾಗ ಪೊಲೀಸ್ ಠಾಣೆಯಲ್ಲೇ ಆದಿಲ್ ಸಾವನ್ನಪ್ಪಿದ್ದಾನೆ. ಆದರೆ, ಪೊಲೀಸರು ಅದನ್ನೆಲ್ಲಾ ಮರೆಮಾಚಲು ಚನ್ನಗಿರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂಬುದಾಗಿ ಠಾಣೆ ಬಳಿ ಜಮಾಯಿಸಿದ್ದ ಮುಸ್ಲಿಂ ಸಮಾಜದ ಮುಖಂಡರು, ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಪಿ-ಐಜಿಪಿ ಸ್ಥಳಕ್ಕೆ ಆಗಮಿಸಲು ಒತ್ತಾಯ:

ಠಾಣೆ ಮುಂದೆ ನೂರಾರು ಜನರು ಮೃತ ಆದಿಲ್‌ ಶವದ ಸಮೇತ ಪ್ರತಿಭಟಿಸುತ್ತಿದ್ದ ವಿಚಾರ ಗೊತ್ತಾಗುತ್ತಿದ್ದಂತೆ ಮತ್ತಷ್ಟು ಜನರು ಠಾಣೆ ಬಳಿ ಜಮಾಯಿಸಿದ್ದಾರೆ. ಇಡೀ ಠಾಣೆಯಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಠಾಣೆಯಲ್ಲಿ ಇರಲಿಲ್ಲ. ಕೆಲವರಂತೂ ಠಾಣೆ ಬಾಗಿಲನ್ನು ಹಾಕಿ, ಠಾಣೆ ಮುಂದೆ ಪ್ರತಿಭಟಿಸುವ ಜೊತೆಗೆ ಆದಿಲ್ ಸಾವಿಗೆ ಕಾರಣರಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಸ್‌ಪಿ, ಐಜಿಪಿ ಸ್ಥಳಕ್ಕೆ ಧಾವಿಸಬೇಕು ಎಂಬುದಾಗಿ ಪಟ್ಟುಹಿಡಿದರು.

ಅಂಜಲಿ ಹತ್ಯೆ ಆರೋಪಿ ಬಂಧನ ಆಗಿದೆ, ಮುಲಾಜು ಇಲ್ಲದೆ ಕಾನೂನು ಕ್ರಮ: ಪರಮೇಶ್ವರ

ಸ್ಥಳ ಬಿಟ್ಟು ಕದಲುವುದಿಲ್ಲ ಎಂದ ಪ್ರತಿಭಟನಾಕಾರರು ತಡರಾತ್ರಿವರೆಗೂ ಚನ್ನಗಿರಿ ಪೊಲೀಸ್ ಠಾಣೆಯ ಮುಂದೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದಿಲ್ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಠಾಣೆಯಲ್ಲಿ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಸಹ ಇರಲಿಲ್ಲ ಎನ್ನಲಾಗಿದೆ. ಪೊಲೀಸರೇ ಠಾಣೆಗೆ ಬೀಗ ಹಾಕಿ ಹೋಗಿದ್ದಾರೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನ್ಯಾಯ ಕೊಡಿಸುವವರೆಗೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ. ಬಡಗಿ ಕೆಲಸ ಮಾಡಿಕೊಂಡು, ಹೆಂಡತಿ, ಮಕ್ಕಳು, ಕುಟುಂಬ ಸಾಕುತ್ತಿದ್ದ ಆದಿಲ್‌ನನ್ನು ಪೊಲೀಸರೇ ಕೊಂದಿದ್ದಾರೆ. ಈಗ ಆದಿಲ್‌ನ ಕುಟುಂಬಕ್ಕೆ ಯಾರು ದಿಕ್ಕು ಎಂಬುದಾಗಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಚನ್ನಗಿರಿ ಪೊಲೀಸ್ ಠಾಣೆಯ ಮುಂದೆ ಬಿಗುವಿನ ಪರಿಸ್ಥಿತಿ ಮುಂದುವರಿದಿತ್ತು.

ಪೊಲೀಸ್ ಠಾಣೆಗೆ ಬೆಂಕಿ ಹಚ್ಚು ಸಂಚು

ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು ಐದು ಪೊಲೀಸ್ ಜೀಪ್, ಎರಡು ಖಾಸಗಿ ವಾಹನ ಜಖಂಗೊಳಿಸಿದ್ದಾರೆ. ಅಲ್ಲದೇ ಪೊಲೀಸ್ ಜೀಪ್‌ ಉರುಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಆರೋಪಿಗಳು. ಅಷ್ಟರಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.

ಪೊಲೀಸರ ಜೀಪ್ ಉರುಳಿಸುವ ಎಕ್ಸ್‌ಕ್ಲೂಸಿವ್ ವಿಶುವಲ್ಸ್ ಸುವರ್ಣನ್ಯೂಸ್ ಗೆ ಲಭ್ಯವಾಗಿದೆ. ಹತ್ತಾರು ಗುಂಪುಗಳಲ್ಲಿ ದಾಳಿ ಮಾಡಿ ಪೊಲೀಸ್ ಜೀಪ್‌ಗಳನ್ನು ಎತ್ತಿ ಬಿಸಾಕುವ ದೃಶ್ಯ ಸೆರೆಯಾಗಿದೆ. 

ಪೊಲೀಸರ ಮೇಲೆಯೇ ಲಾಂಗ್ ಬೀಸಿ ತಪ್ಪಿಸಿಕೊಳ್ಳಲೆತ್ನಿಸಿದ ಶಿವಾಜಿನಗರದ ರೌಡಿಶೀಟರ್

ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದ ಪೊಲೀಸರು. ಬಳಿಕ ಇಡೀ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಗಲಭೆಕೋರರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು. ಪೊಲೀಸ್ ಜೀಪ್ ಜಖಂಗೊಳಿಸಿದವರಿಗೆ ತಲಾಷ್ ನಡೆಸಿರುವ ಪೊಲೀಸರು.

click me!