
ಮೈಸೂರು (ಜ.21): ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಬಾಲರಾಮ (ರಾಮಲಲ್ಲಾ) ವಿಗ್ರಹದ ಕೃಷ್ಣಶಿಲೆ ಸಿಕ್ಕಿರುವ ಮೈಸೂರಿನ ಹಾರೋಹಳ್ಳಿ ಜಮೀನಿನಲ್ಲಿ ರಾಮ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ. ಆದರೆ, ಈ ಜಮೀನು ದಲಿತ ವ್ಯಕ್ತಿ ರಾಮದಾಸ್.ಹೆಚ್ ಎನ್ನುವವರದ್ದಾಗಿದ್ದು, ರಾಮ ಮಂದಿರ ನಿರ್ಮಣಕ್ಕೆ 4 ಗುಂಟೆ ಜಮೀನು ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನವೇ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ.
ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನಾಳೆ (ಜ.22) ಜರುಗಲಿದೆ. ಆದರೆ, ಈ ಬಾಲ ರಾಮನ ವಿಗ್ರಹ ಕೆತ್ತನೆಗೆ ಬಳಕೆ ಮಾಡಲಾದ ಶಿಲೆ ಮೈಸೂರು ಜಿಲ್ಲೆಯ ಗುಜ್ಜೇಗೌಡನಪುರ ಬಳಿಯ ಹಾರೋಹಳ್ಳಿ ಗ್ರಾಮದ ದಲಿತ ವ್ಯಕ್ತಿ ರಾಮದಾಸ್ ಎನ್ನುವವರ ಜಮೀನಿನಲ್ಲಿ ಸಿಕ್ಕಿದೆ. ಮೂಲತಃ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹೆಚ್.ರಾಮದಾಸ್ ಅವರು ಹಾರೋಹಳ್ಳಿಯಲ್ಲಿ ಪಿತ್ರಾರ್ಜಿತವಾಗಿ ಲಭ್ಯವಾಗಿದ್ದ ಜಮೀನಿನಲ್ಲಿ ಕೃಷಿ ಮಾಡಲು ಮುಂದಾಗುತ್ತಾರೆ. ಆಗ, ಜಮೀನಿನಲ್ಲಿ ಕಲ್ಲುಗಳು ಸಿಕ್ಕಿದ್ದು, ಅವುಗಳನ್ನು ಗಣಿಗಾರಿಕೆ ಮೂಲಕ ತೆರವು ಮಾಡಿಸಲು ಮುಂದಾಗಿದ್ದಾರೆ.
ಬಾಲರಾಮ ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ ನಿರ್ಮಾಣ: ಶಾಸಕ ಜಿ.ಟಿ.ದೇವೇಗೌಡ
ಈ ವೇಳೆ ರಾಮದಾಸ್ ಅವರ ಜಮೀನಿನಲ್ಲಿ ಲಭ್ಯವಾದ ಕಲ್ಲುಗಳನ್ನು ಶ್ರೀರಾಮ ಮಂದಿರದ ಟ್ರಸ್ಟ್ಗೆ ಬೇಕಾಗಿದ್ದು, ಅದರಲ್ಲಿ ಶ್ರೀರಾಮ ವಿಗ್ರಹ ಕೆತ್ತನೆಗೆ ಬೇಕಾಗಿವೆ ಎಂದು ರಾಮಲಲ್ಲಾ ಮೂರ್ತಿ ಕೆತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ಬಂದು ಕೇಳುತ್ತಾರೆ. ಇದಕ್ಕೆ ಮನಃಪೂರ್ತಿಯಾಗಿ ಒಪ್ಪಿಗೆ ಕೊಟ್ಟ ರಾಮದಾಸ್ ಅವರು ಕಲ್ಲನ್ನು ತೆರವುಗೊಳಿಸಲು ಸ್ಥಳೀಯ ಕ್ವಾರಿ ಗುತ್ತಿಗೆದಾರ ಶ್ರೀನಿವಾಸ್, ಮೂರು ಬ್ಲಾಕ್ಗಳಾಗಿ ಒಡೆದಿದ್ದ ಬೃಹತ್ ಬಂಡೆಗಳ ಪೈಕಿ ಒಂದನ್ನು ತೆಗೆಯುತ್ತಾರೆ. ಆಗ ರಾಮಲಲ್ಲಾ ವಿಗ್ರಹವನ್ನು ಕೆತ್ತಲು ಕಲ್ಲಿನ ಬ್ಲಾಕ್ಗಾಗಿ ಮನ್ನಯ್ಯ ಬಡಿಗರು, ನರೇಂದ್ರ ಶಿಲ್ಪಿ ಮತ್ತು ಗೋಪಾಲ್ ಅವರು ಬಂದು ಕಲ್ಲನ್ನು ಪಡೆಯುವುದಾಗಿ ಸಂಪರ್ಕಿಸಿದರು.
ರಾಮದಾಸ್ ಅವರ ಜಮೀನಿನಲ್ಲಿ ದೊರೆತ 10 ಅಡಿ ಅಳತೆಯ ಮೂರು ಬೃಹತ್ ಕಲ್ಲುಗಳನ್ನು ನೋಡಿ ಅವುಗಳಲ್ಲಿ ಒಂದನ್ನು ತಜ್ಞರಿಂದ ಪರೀಕ್ಷೆಗಾಗಿ ಅಯೋಧ್ಯೆಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಟ್ರಸ್ಟ್ ಕಲ್ಲಿನ ಬ್ಲಾಕ್ ಅನ್ನು ಆಯ್ಕೆ ಮಾಡಿತು. ಈಗ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಶಿಲೆಯಿಂದ ಜಗತ್ತೇ ನಮಿಸುವಂತಹ ಶ್ರೀರಾಮಲಲ್ಲಾನ ವಿಗ್ರಹ ರಚನೆಯಾಗಿದ್ದು, ಅದನ್ನು ಜ.22ರ ಬೆಳಗ್ಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಇನ್ನು ರಾಮದಾಸ್ ಅವರ ಜಮೀನಿನಲ್ಲಿ ಬಂಡಗಳು ಲಭ್ಯವಾದ ಜಾಗವನ್ನೇ ಈಗ ರಾಮಮಂದಿರ ನಿರ್ಮಿಸಲು ದಾನ ಮಾಡುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ಕೂಡ ಅವರಿಗೆ ಪ್ರೋತ್ಸಾಹ ನೀಡಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡರಿಗೆ ಮಾಹಿತಿ ನೀಡಿದ್ದು ಅವರು ಕೂಡ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಹಾರೋಹಳ್ಳಿಉ ಗ್ರಾಮಸ್ಥರ ಸಮ್ಮುಖದಲ್ಲಿ ರಾಮನ ವಿಗ್ರಹಕ್ಕೆ ಶಿಲೆಯಾದ ಜಾಗದಲ್ಲಿ ಜ.22ರ ಬೆಳಗ್ಗೆ ರಾಮ ಮಂದಿರ ನಿರ್ಮಾಣ ಮಾಡಲು ಭೂಮಿ ಪೂಜೆಯನ್ನು ನೆರವೇರಿಸಲು ಮುಂದಾಗಿದ್ದಾರೆ.
ಮೈಸೂರು : ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ವಿಶೇಷ ಪೂಜೆ
ಅರುಣ್ ಯೋಗಿರಾಜ್ ಅವರಿಂದ ಮೂರ್ತಿ ಕೆತ್ತನೆ:
ಹಾರೋಹಳ್ಳಿಯ ಒಬ್ಬ ದಲಿತ ರೈತನ ಜಮೀನಿನಲ್ಲಿ ದೊರೆತ ಕಲ್ಲನ್ನು ಪಡೆದು ಶಿಲ್ಪಿ ಅರುಣ್ ಯೋಗಿರಾಜ್ ಅವರು ಶಿಲೆಯನ್ನು ಕೆತ್ತಿದ್ದಾರೆ. ಅದೇ ರೀತಿ ಪೂಜಾ ಕಾರ್ಯಕ್ರಮಗಳಲ್ಲೂ ಕರ್ನಾಟಕದ ಅರ್ಚಕರೇ ಭಾಗವಹಿಸುತ್ತಿರುವುದರಿಂದ ರಾಜ್ಯಕ್ಕೆ ಹೆಮ್ಮೆ ತಂದಿದೆ. ಜ.22 ರಂದು ಕಲ್ಲು ಸಿಕ್ಕಿದ ಭೂಮಿಯಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ಭೂಮಿ ಪೂಜೆ ನೆರವೇರಿಸುವ ಜೊತೆಗೆ ಧ್ಯಾನ, ಭಜನೆ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಕಾರಣ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ಶ್ರೀ ರಾಮನ ವಿಗ್ರಹ ಕೆತ್ತನೆ ಮಾಡಿಸಲಾಗುವುದು.
- ಜಿ.ಟಿ. ದೇವೇಗೌಡ, ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ