ಮುರುಗೇಶ್ ನಿರಾಣಿಗೆ ತನಿಖೆ ಬಿಸಿ, ಆದರೆ ಅರೆಸ್ಟ್ ಇಲ್ಲ: ಹೈಕೋರ್ಟ್‌ ಹೇಳಿದ್ದೇನು?

By Kannadaprabha NewsFirst Published Jul 6, 2024, 12:39 PM IST
Highlights

ಕೈಗಾರಿಕೆ ರಾಜ್ಯ ಇಲಾಖೆಯ ಮಾರ್ಕೆಟಿಂಗ್, ಜಾಹಿರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಸಂಬಂಧ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ತನಿಖೆಗೆ ಅಸ್ತು ಎಂದಿರುವ ಹೈಕೋರ್ಟ್.

ಬೆಂಗಳೂರು (ಜು.06): ಕೈಗಾರಿಕೆ ರಾಜ್ಯ ಇಲಾಖೆಯ ಮಾರ್ಕೆಟಿಂಗ್, ಜಾಹಿರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಸಂಬಂಧ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ತನಿಖೆಗೆ ಅಸ್ತು ಎಂದಿರುವ ಹೈಕೋರ್ಟ್, ನಿರಾಣಿ ಅವರನ್ನು ಬಂಧಿಸದಂತೆನಗರದ ಹೈಗೌಂಡ್ಸ್ ಠಾಣಾ ಪೊಲೀಸರಿಗೆ ಸೂಚಿಸಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ನಗರದ ಹೈ ಗೌಂಡ್ ಠಾಣಾ ಪೊಲೀಸರಿಗೆ ನಿರ್ದೇಶಿಸಿ 42ನೇ ಎಸಿಎಂಎಂ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ಮುರುಗೇಶ್ ನಿರಾಣಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ. 

ನಿರಾಣಿ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಬಹುದು. ಆದರೆ, ತನಿಖೆಗೆ ಸಹಕರಿಸಿದರೆ, ಅರ್ಜಿದಾರರನ್ನು ತನಿಖಾಧಿಕಾರಿಗಳು ಬಂಧಿಸುವಂತಿಲ್ಲ ಎಂದು ನಿರ್ದೇಶಿಸಿ ನ್ಯಾಯಪೀಠ ಮಧ್ಯಂತರ ಆದೇಶ ಮಾಡಿತು. ಅರ್ಜಿಯಲ್ಲಿ ಜೊತೆಗೆ, ಪ್ರತಿವಾದಿಯಾಗಿರುವ ಪ್ರಕರಣದ ಮೂಲ ದೂರುದಾರ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮತ್ತು ನಗರದ ಹೈಗೌಂಡ್ಸ್ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2011ರಲ್ಲಿ ಅವರು ರಾಜ್ಯದ ಬೃಹತ್ ಕೈಗಾರಿಕೆ ಸಚಿವರಾಗಿದ್ದರು. 

Latest Videos

ಈ ವೇಳೆ ಕೈಗಾರಿಕೆ ಇಲಾಖೆಯ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ನೇಮಕಾತಿ ಮತ್ತು ಸೇವಾ ಕಾಯಮಾತಿ ಪ್ರಕ್ರಿಯೆ 2011ರಿಂದ 15ರವರೆಗೆ ನಡೆದಿದೆ. ಸಚಿವರಾಗಿದ್ದ ಮುರುಗೇಶ್ ನಿರಾಣಿ ಅವರು ಈ ನೇಮಕಾತಿಗೆ ಅಕ್ರಮವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಹತ್ತು ವರ್ಷಗಳ ನಂತರ ಖಾಸಗಿ ದೂರುದಾರರು ವಿಚಾರಣಾ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ಅದನ್ನು ಪರಿಗಣಿಸಿದ ನ್ಯಾಯಾಲಯ ತನಿಖೆ ನಡೆಸಲು ಹೈಗೌಂಡ್ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ. 

ಚನ್ನಪಟ್ಟಣದಲ್ಲಿ ನನ್ನ ಸ್ಫರ್ಧೆಗೆ ಎಚ್.ಡಿ.ಕುಮಾರಸ್ವಾಮಿ ಗ್ರೀನ್‌ಸಿಗ್ನಲ್‌: ಸಿ.ಪಿ.ಯೋಗೇಶ್ವರ್

ಅದರಂತೆ ಪೊಲೀಸರು ಎಫ್‌ಐಆ‌ ದಾಖಲಿಸಿದ್ದಾರೆ ಎಂದು ವಿವರಿಸಿದರು. ಜೊತೆಗೆ, ಪ್ರಕರಣದಲ್ಲಿ ನೇಮಕಾತಿ ನಡೆಸಲು ನಿರಾಣಿ ಅವರು ಅಕ್ರಮವಾಗಿ ಅನುಮತಿ ನೀಡಿಲ್ಲ. ಹೀಗಿದ್ದರೂ ದುರುದ್ದೇಶಪೂರ್ವಕವಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಕರಣದ ಸತ್ಯಾಂಶಗಳನ್ನು ಪರಿಗಣಿಸದೆ ವಿಚಾರಣಾ ನ್ಯಾಯಾಲಯ ತನಿಖೆಗೆ ಆದೇಶಿಸಿರುವುದು ಕ್ರಮ ಕಾನೂನುಬಾಹಿರವಾಗಿದ್ದು, ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದರು.

click me!