
ಬೆಳಗಾವಿ (ಡಿ.13): ದೇಶದ ಹೃದಯ ಎನ್ನಲಾಗುವ ಸಂಸತ್ ಭವನದ ಮೇಲೆ 2001ರ ಡಿಸೆಂಬರ್ 13ರಂದು ಭಯೋತ್ಪಾದಕರು ದಾಳಿ ಮಾಡಿದರು. ಅದರ ವಾರ್ಷಿಕೋತ್ಸವದ ದಿನದಂದೇ ಲೋಕಸಭೆಯಲ್ಲಿ ಭದ್ರತಾ ಲೋಪ ಎದುರಾಗಿತ್ತು. ಅಪರಿಚಿತ ವ್ಯಕ್ತಿ ಸಂಸತ್ ಭವನದ ಒಳಹೊಕ್ಕು ಆತಂಕ ಸೃಷ್ಟಿಸಿದ್ದ. ಈ ವಿಚಾರ ಬೆಳಗಾವಿ ಅಧಿವೇಶನದಲ್ಲೂ ಸುದ್ದಿಯಾಯಿತು. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ನಮ್ಮ ಸದನಕ್ಕೂ ಬಹಳ ಜನ ಬರ್ತಾರೆ..ಒಳ್ಳೆಯ ಜನಾನೂ ಬರ್ತರೆ, ಕೆಟ್ಟವರು ಬರ್ತಾರೆ. ಉಗ್ರರೂ ಬರಬಹುದು. ಅದಕ್ಕೆ ಎಚ್ಚರಿಕೆ ವಹಿಸಬೇಕು' ಎಂದು ಹೇಳಿದರು. ಆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಪ್ರತಾಪಸಿಂಹ ಯಾಕೆ ಹೀಗಾದ್ರು. ಅವರು ಬಹಳ ಎಚ್ಚರಿಕೆಯಿಂದ ಇರ್ತಾರೆ. ಅವರ ಹೆಸರು ತಗೋಬಾರದು. ಆದರೂ ಬಹಳ ಜನ ಕೇಳ್ತಾ ಇದ್ದಾರೆ. ಸದನಕ್ಕೆ ಬಂದು ಮೇಲಿಂದ ಹಾರಿದ್ದಾರೆ. ಎಲ್ಲಾ ಸಂಸದರು ಇಲಿಗಳ ತರಹ ಓಡಿ ಹೋದ್ರು' ಎಂದು ಮಾತನಾಡಿದರು.
ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಹಾಗೇನಾದರೂ ಪಾಸ್ ಪಡೆದವರ ಹೆಸರಲ್ಲಿ ಬಿಜೆಪಿ ಸಂಸದ ಅಲ್ಲದೇ ಬೇರೆಯವರು ಆಗಿದ್ದರೆ ಎನಾಗ್ತಾ ಇತ್ತು' ಎಂದು ಹೇಳಿದರು. ನಯನಾ ಮೋಟಮ್ಮ ಈ ಮಾತು ಹೇಳುತ್ತಿದ್ದಂತೆ ಸದನದಲ್ಲಿ ಪರಸ್ಪರ ಮಾತಿನ ಚಕಮಕಿ ಆರಂಭವಾಯಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ಎಲ್ಲವನ್ನೂ ಮಾತನಾಡಿದರು. ಆದರೆ, ಡಿಕೆಶಿ ರಾಜಕೀಯ ಮಾತನಾಡಿದರು ಎಂದು ಹೇಳಿದರು.
ಈ ಹಂತದಲ್ಲಿ ನಯನಾ ಮೋಟಮ್ಮ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ನಿಂತರು, 'ಹಾಗೇನಾದರೂ ಸುಮ್ಮನೆ ಯೋಚಿಸಿ ನೋಡಿ. ಕಾಂಗ್ರೆಸ್ ಸಂಸದ ಆಗಿದ್ದರೆ ಎನಾಗ್ತಿತ್ತು. ಆರ್.ಅಶೋಕ್ ಸುಮ್ಮನೆ ಇರ್ತಾ ಇದ್ರಾ' ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಪಾಸ್ ಕೊಟ್ಟ ಸಂಸದರಿಗೆ ಜವಾಬ್ದಾರಿ ಇಲ್ವಾ, ಪಾಸ್ ಕೊಡಬೇಕಾದರೆ ಗೊತ್ತಾಗೋದಿಲ್ವಾ, ಕಾಂಗ್ರೆಸ್ ನವರು ಪಾಸ್ ಕೊಟ್ಟಿದ್ರೆ ಎನಾಗ್ತಾ ಇತ್ತು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಸಂಸತ್ ದಾಳಿಯಿಂದ ಪ್ರೇಕ್ಷಕರ ಪಾಸ್ ರದ್ದು, ಬೆಳಗಾವಿ ಸುವರ್ಣಸೌಧದಲ್ಲಿ ಹೈ ಅಲರ್ಟ್!
ಸಚಿವ ಪ್ರಿಯಾಂಕಾ ಮಾತಿಗೆ ಬಿಜೆಪಿ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಮಾತಿನ ಚಕಮಕಿ ಕೂಡ ನಡೆಯಿತು.'ಮಂಗಳೂರು ಕುಕ್ಕರ್ ಬಾಂಬ್ ಬಗ್ಗೆ ಡಿಕೆಶಿ ಎನ್ ಹೇಳಿಕೆ ಕೊಟ್ಟರು...? ನಾವು ಡಿಕೆಶಿ ಉಗ್ರಗಾಮಿ ಅಂದ್ರಾ..?' ಎಂದು ಹೇಳಿದರು. ಈ ಹಂತದಲ್ಲಿ ಆರ್ ಅಶೋಕ ಮಾತಿಗೆ ಸಚಿವ ಹೆಚ್ ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಅಸಂಸದಿಯ ಮಾತು ಹೇಳಬೇಡಿ ಎಂದ ಹೆಚ್ ಕೆ ಪಾಟೀಲ್ ಹೇಳುತ್ತಿದ್ದಂತೆ ಸದನದಲ್ಲಿ ಜೋರಾದ ಗದ್ದಲ ನಡೆಯಿತು. ಕೊನೆಗೆ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಂಸತ್ ಮೇಲೆ ದಾಳಿ, ನೀಲಂ ಕೌರ್-ಅಮೋಲ್ ಅರೆಸ್ಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ