
ಚಿಕ್ಕಬಳ್ಳಾಪುರ (ಆ.30): ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಜಾಗತಿಕ ಸಾಂಸ್ಕೃತಿಕ ಉತ್ಸವ'ದಲ್ಲಿ ಶನಿವಾರ (ಆಗಸ್ಟ್ 30) ಪ್ಯಾಲಸ್ತೀನ್ ನಲ್ಲಿ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಮರ್ ಝಘಾ (Samar Zagha) ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ನಮ್ಮ ಜೀವನದಲ್ಲಿ ಬರುವ ಕಷ್ಟಗಳೇ ನಾವು ದೇವರ ಕಡೆಗೆ ತಿರುಗಲು ಮತ್ತು ನಮ್ಮ ಜೀವನಕ್ಕೆ ಹೆಚ್ಚಿನ ಅರ್ಥವನ್ನು ಕಂಡುಕೊಳ್ಳಲು ಕಾರಣವಾಗುತ್ತವೆ ಎಂದು ಹೇಳಿದರು.
ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಜನರಿಗೆ ಜೀವನವು ಸುಲಭವಾಗಿಲ್ಲ. ನಾಳೆ ನೋಡುತ್ತೇವೆಯೇ ಎನ್ನುವುದೇ ಅವರಿಗೆ ಪ್ರಶ್ನೆ. ಮುಂದಿನ ಊಟ, ಔಷಧಿ ಸಿಗುತ್ತದೆಯೇ ಎಂಬುದರ ಖಾತರಿ ಇರುವುದಿಲ್ಲ. ಮತ್ತೆ ಮಕ್ಕಳು ಶಾಲೆಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗದ ಪರಿಸ್ಥಿತಿಯಲ್ಲಿ ಅಲ್ಲಿ ಬದುಕು ಸಾಗುತ್ತಿದೆ ಎಂದು ವಿವರಿಸಿದರು. ಆ ದೇಶಗಳಲ್ಲಿಂದ ಬಂದಿರುವ ಭಕ್ತರು ಮತ್ತು ಗಣ್ಯರು ಉತ್ತಮ ಭವಿಷ್ಯದ ಬಗ್ಗೆ ಸಾಕಷ್ಟು ವಿಶ್ವಾಸ ಮತ್ತು ಭರವಸೆಗಳನ್ನು ವ್ಯಕ್ತಪಡಿಸಿದ್ದಾರೆ. ಒಗ್ಗಟ್ಟು ಮತ್ತು ಸೌಹಾರ್ದದ ಬಗ್ಗೆ ಮಾತನಾಡಿರುವುದು ನನ್ನ ಹೃದಯವನ್ನು ಮುಟ್ಟಿದೆ. ನಾವು ಸಮಸ್ಯೆಗಳನ್ನು ಕಂಡು ಹಿಮ್ಮೆಟ್ಟಬಾರದು. ಬದುಕು ಸುಗಮಗೊಳಿಸಲು ಒಗ್ಗೂಡಿ ಕೆಲಸ ಮಾಡಬೇಕಾಗಿರುವುದು ತುಂಬಾ ಮುಖ್ಯ. ಇದನ್ನು ಹೇಳುವುದು ತುಂಬಾ ಸುಲಭ, ಆದರೆ ಕಾರ್ಯರೂಪಕ್ಕೆ ತರುವುದು ತುಂಬಾ ಕಷ್ಟ ಎಂದು ಸಲಹೆ ಮಾಡಿದರು.
'ಮಾನವೀಯ ಪುರಸ್ಕಾರ' ಸ್ವೀಕರಿಸಿ ಮಾತನಾಡಿದ ಸಮರ್ ಝಘಾ, ಸತ್ಯಸಾಯಿ ಬಾಬಾ ಅವರ ಷರತ್ತುಗಳು ಇಲ್ಲದ ಪ್ರೀತಿ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಯಾವುದೇ ಪ್ರತಿಫಲ ನಿರೀಕ್ಷೆ ಮಾಡದೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕಾರ್ಯಗಳಿಗೆ ಅವರ ಬೆಂಬಲ ಮುಂದುವರಿಯಲಿ ಎಂದು ಕೋರಿದರು. ಶ್ರೀಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ನ ಟಸ್ಟಿ ಮತ್ತು ಸಿಇಒ ಆನಂದ್ ಕಡಲಿ ಮಾತನಾಡಿ, ಅನ್ನಪೂರ್ಣ ಯೋಜನೆ ಮೂಲಕ ಪ್ರಸ್ತುತ 1 ಕೋಟಿ 80 ಲಕ್ಷ ಮಕ್ಕಳಿಗೆ ಬೆಳಗಿನ ಪೌಷ್ಟಿಕ ಆಹಾರವನ್ನು ವಿತರಿಸುತ್ತಿದ್ದೇವೆ. ಕೆಲವೊಂದು ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ 2028ರ ವೇಳೆಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶದಲ್ಲಿ 8 ಕೋಟಿ ಮಕ್ಕಳಿಗೆ ಬೆಳಗಿನ ಪೌಷ್ಟಿಕ ಆಹಾರವನ್ನು ನೀಡುವ ಗುರಿ ಹೊಂದಿದ್ದೇವೆ ಎಂದು ಭವಿಷ್ಯದ ಕನಸು ಹಂಚಿಕೊಂಡರು.
ಜೋರ್ಡಾನ್ ಸಾಧಕಿಗೆ ಗೌರವ: ಸತ್ಯ ಸಾಯಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಜೋರ್ಡಾನ್ನ ಅಧ್ಯಾತ್ಮ ಸಾಧಕಿ ಹಾಗೂ ಯೋಗ ಶಿಕ್ಷಕಿ ಶೋರೌಕ್ ಮೊಹಮದ್ ರಂಜಾನ್ ಅವರನ್ನು ಪ್ರಶಾಂತಿ ಬಾಲಮಂದಿರ ಟ್ರಸ್ಟ್ನ ಟ್ರಸ್ಟಿ ಡಾ ಸಾಯಿ ಲೀಲಾ ಗೌರವಿಸಿದರು. 'ನಮ್ಮ ವೈವಿಧ್ಯಗಳು ಪರಸ್ಪರರನ್ನು ದೂರ ಇರಿಸಲು ಕಾರಣ ಆಗಬೇಕಿಲ್ಲ. ಅವು ನಮ್ಮನ್ನು ಬೆಸೆಯುವ ಸೇತುವೆಗಳಾಗಬೇಕು. ಜಗತ್ತಿನ ಮೂಲೆಮೂಲೆಯಲ್ಲಿರುವ ಜನರನ್ನು ಒಗ್ಗೂಡಿಸಲು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಯತ್ನಿಸುತ್ತಿದ್ದಾರೆ. ಅವರ ಮಾನವೀಯ ಪ್ರಯತ್ನಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ' ಎಂದು ಶೋರೌಕ್ ಹೇಳಿದರು.
ಸತ್ಯ ಸಾಯಿ ಬಾಬಾ ಅವರ 100 ನೇ ಜನ್ಮದಿನೋತ್ಸವದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಅಷ್ಟಾವಕ್ರಗೀತೆ' ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು. 'ದೇವರಿಂದ ನೀವು ಓಡಿ ಹೋದರೆ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ತಪ್ಪುಗಳನ್ನು ಮಾಡಿ ದೋಷಿಯಾಗಿ ದೇವರ ಬಳಿಗೆ ಬಂದರೂ ಆತನು ನಿಮ್ಮನ್ನು ಸ್ವೀಕರಿಸುತ್ತಾನೆ. ಏಕೆಂದರೆ ದೇವರಲ್ಲಿ ಅಷ್ಟೊಂದು ಪ್ರೀತಿ ಇರುತ್ತದೆ. ಆ ಪ್ರೀತಿಯನ್ನು ಎಲ್ಲರಲ್ಲೂ ಕಾಣಲು ಬಯಸುತ್ತಾನೆ' ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ