
ಬೆಂಗಳೂರು (ಸೆ.1) : ಹವ್ಯಕ ಸಮಾಜದ ಸಂಖ್ಯೆ ಕುಸಿಯುತ್ತಿರುವುದು ಅಪಾಯದ ಸಂಕೇತ. ಸಂಘಟನೆಯು ಸಂಸ್ಕಾರಯುತವಾಗಿ ಇನ್ನಷ್ಟು ಗಟ್ಟಿಯಾಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಇಲ್ಲಿನ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ತೃತೀಯ ವಿಶ್ವಹವ್ಯಕ ಸಮ್ಮೇಳನದ ಸ್ಮರಣ ಸಂಚಿಕೆ ಸಹಸ್ರಚಂದ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಯಾವ ಸಮುದಾಯದ ಸಂಖ್ಯೆ ಎಷ್ಟಿದೆ ಎಂಬ ಚರ್ಚೆ ವ್ಯಾಪಕವಾಗಿದೆ. ಹವ್ಯಕ ಸಮುದಾಯದ ಸಂಖ್ಯೆಯು ಕೆಲವೇ ಲಕ್ಷದಷ್ಟಿದೆ. ವನವಾಸಿ ಜನರಿಗಿಂತಲೂ ಕಡಿಮೆ ಜನಸಂಖ್ಯೆ ಹವ್ಯಕ ಸಮಾಜದ್ದು. ಹೀಗಾಗಿ ಅಲ್ಪಸಂಖ್ಯಾತರ ಸ್ಥಾನಮಾನ ನಿಜವಾಗಿಯೂ ಲಭಿಸಬೇಕಿರುವುದು ಹವ್ಯಕರಿಗೆ ಎಂದು ಪ್ರತಿಪಾದಿಸಿದರು.
ಇಸ್ರೇಲಿಗರ ರೀತಿ ಹವ್ಯಕರು ಎಲ್ಲೇ ಇದ್ದರೂ ಸಂಘಟನೆಯನ್ನು ಬೆಳೆಸಬೇಕು. ವಿದ್ವಾಂಸರು ಶ್ಲೋಕ, ಮಂತ್ರದಲ್ಲಿನ ಸಾರ ತಿಳಿಸಿ ಹೇಳುವ ಕೆಲಸ ಮಾಡಬೇಕು. ಆಗ ಜನ ಸಾಮಾನ್ಯರು ಅಂಧಶ್ರದ್ಧೆಯ ಮೂಲಕ ಅನುಸರಿಸುವ ಪದ್ಧತಿ ತಪ್ಪುತ್ತದೆ ಎಂದರು. ಶತಾವಧಾನಿ ಡಾ. ಆರ್. ಗಣೇಶ್ ಮಾತನಾಡಿ, ಚಿಕ್ಕ ವಯಸ್ಸಿನವರನ್ನು ಇಂಥ ಕಾರ್ಯಕ್ರಮಕ್ಕೆ ಕರೆತರಬೇಕು. ನಮ್ಮ ಪರಂಪರೆಗಿಂತ ಮಿಗಿಲಾಗಿದ್ದು ಯಾವುದೂ ಇಲ್ಲ. ಆದರೆ, ನಾವೇ ಈ ಪರಂಪರೆಗೆ ಕೊನೆಯವರಾಗಬಾರದು ಎಂದು ಎಚ್ಚರಿಸಿದರು.
ಪಂಡಿತ ವಿನಾಯಕ ತೊರವಿ, ಚಿಂತಕ ಚಕ್ರವರ್ತಿ ಸೂಲಿಬೆಲೆ, ನಿರ್ಭಯಾನಂದ ಸ್ವಾಮೀಜಿ, ದೇವೇಂದ್ರ ಬೆಳೆಯೂರು, ವಿದ್ವಾನ್ ರಾಮಕೃಷ್ಣ ಭಟ್ಟ ಕೂಟೇಲು, ವಿದ್ವಾನ್ ಜಗದೀಶ ಶರ್ಮಾ ಸಂಪ ಸೇರಿ ಇತರರು ಮಾತನಾಡಿದರು.
ಮೊಬೈಲ್, ಟೆಕ್ ಸಂಸ್ಕಾರ ಕೊಡಿ: ರವಿ ಹೆಗಡೆ
ಮನೆ, ಶಾಲೆಗಳಲ್ಲಿ ಮಕ್ಕಳಿಗೆ ಮೊಬೈಲ್, ಟೆಕ್ ಸಂಸ್ಕಾರ ಕೊಡುವುದು ಅಗತ್ಯವಾಗಿದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಇರುವುದು ನಮ್ಮ ಸಂಬಂಧ, ಸಂವಹನ ಬಲವರ್ಧನೆಗೆ. ಆದರೆ, ಈಗ ಓದಲು ಸಾಧ್ಯವಿಲ್ಲದಷ್ಟರ ಮಟ್ಟಿಗೆ ಕೆಟ್ಟ ಕಾಮೆಂಟ್, ಪೋಸ್ಟ್ಗಳು ವ್ಯಾಪಕವಾಗಿದೆ. ಸಂಸ್ಕಾರ ಇಷ್ಟರ ಮಟ್ಟಿಗೆ ಹಾಳಾಗಿದೆ ಎನ್ನಿಸುತ್ತದೆ. ಹೀಗಾಗಿ ಮಕ್ಕಳಿಗೆ ಅಗತ್ಯವಾಗಿ ಟೆಕ್ ಸಂಸ್ಕಾರ ಅಗತ್ಯವಾಗಿದೆ. ಸಜ್ಜನ ಸಮುದಾಯವಾಗಿ ನಾವು ಈ ವಿಚಾರವಾಗಿ ಮಕ್ಕಳಿಗೆ ತಿಳಿಸಬೇಕು ಎಂದರು.
ನಮ್ಮ ಪರಂಪರೆ, ಆಚರಣೆಗಳನ್ನು ಕಿರಿಯರಿಗೆ ಯಾವ ರೀತಿ ಮನ ಮುಟ್ಟುವಂತೆ ತಿಳಿಸಬಹುದು ಎಂಬುದನ್ನು ತಿಳಿಯಬೇಕು. ಹಿರಿಯ ಕಿರಿಯರ ನಡುವಿನ ಅಂತರ ತಗ್ಗಿಸಬೇಕಿದೆ. ಸಾಂಪ್ರದಾಯಿಕ ವೇದಿಕೆಗಿಂತ ವ್ಯಾಪ್ತಿ ಹೆಚ್ಚಿರುವ ಮಾಧ್ಯಮ ಬಳಸಿ, ಮಕ್ಕಳು ನೋಡುವ ರೀಲ್ಸ್ ಗಳ ಮೂಲಕ ನಮ್ಮ ಸಂಪ್ರದಾಯ ಬೋಧನೆ ಆದಾಗ ಯುವಜನತೆಯನ್ನು ತಲುಪಲು ಸಾಧ್ಯ ಎಂದರು. ಎಐ ಕೋಶ ನಮ್ಮತನದ ಮಾಹಿತಿ ಒಳಗೊಳ್ಳುವಂತೆ ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ, ಸಂಸ್ಕಾರದಿಂದ ವಿಷವನ್ನು ರಸವಾಗಿ ಬದಲಿಸಬಹುದು. ಮುಂದಿನ ಪೀಳಿಗೆ ದಾರಿ ತಪ್ಪಿಹೋಗುವುದನ್ನು ತಪ್ಪಿಸಬೇಕಿದೆ. ಪೂರ್ವಜರು ಹೇಳಿದ ಸಂಸ್ಕಾರವನ್ನು ಭದ್ರವಾಗಿಟ್ಟುಕೊಳ್ಳಲು ಬೇರಿನ ರೂಪದಲ್ಲಿ ನಮ್ಮಲ್ಲಿ ಹುದುಗಿಸಿಕೊಳ್ಳಬೇಕಾದ ಅಗತ್ಯವಿದೆ. ಹಾಗಿದ್ದಲ್ಲಿ ಮಾತ್ರ ಮಾನವೀಯ ಮೌಲ್ಯ ಉಳಿಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ