ಜನೌಷಧಿ ಮಳಿಗೆಗಳಿಂದ ಬಡವರಿಗೆ ಹೆಚ್ಚು ಲಾಭ: ಕೇಂದ್ರ ಸಚಿವ ಮನ್ಸುಖ್‌ ಮಾಂಡವೀಯ

Kannadaprabha News   | Asianet News
Published : Oct 11, 2021, 09:52 AM IST
ಜನೌಷಧಿ ಮಳಿಗೆಗಳಿಂದ ಬಡವರಿಗೆ ಹೆಚ್ಚು ಲಾಭ: ಕೇಂದ್ರ ಸಚಿವ ಮನ್ಸುಖ್‌ ಮಾಂಡವೀಯ

ಸಾರಾಂಶ

*  ಕೋವಿಡ್‌ ಸಂದರ್ಭದಲ್ಲೂ ಅಗತ್ಯವಿರುವವರಿಗೆ ಸಮರ್ಪಕವಾಗಿ ಔಷಧಿ ಪೂರೈಕೆ *  ಜನರಿಕ್‌ ಔಷಧಗಳಿಗೆ ತನ್ನದೇ ಆದ ಮಾನ್ಯತೆ ದೊರೆತಿದೆ *  ಮಾಸಿಕ ವೆಚ್ಚ ಗಣನೀಯವಾಗಿ ಕಡಿಮೆ ಮಾಡಿದ ಸರ್ಕಾರ 

ಬೆಂಗಳೂರು(ಅ.11):  ದೇಶದಲ್ಲಿ 8 ಸಾವಿರಕ್ಕೂ ಅಧಿಕ ಜನೌಷಧಿ(Janaushadhi) ಮಳಿಗೆಗಳನ್ನು ಸ್ಥಾಪಿಸಿದ್ದು ಉನ್ನತ ಗುಣಮಟ್ಟದ ಔಷಧಿ ವಿತರಿಸಲಾಗುತ್ತಿದ್ದು, ಬಡವರು, ಮಧ್ಯಮ ವರ್ಗದವರ ಔಷಧ(Medicine) ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್‌ ಮಾಂಡವೀಯ(Mansukh Mandaviya) ಹೇಳಿದ್ದಾರೆ. 

ನಗರದಲ್ಲಿ ಭಾನುವಾರ ಫಾರ್ಮಸಿಟಿಕಲ್ಸ್‌ ಆ್ಯಂಡ್‌ ಮೆಡಿಕಲ್‌ ಡಿವೈಸ್‌ ಬ್ಯೂರೋ ಆಫ್‌ ಇಂಡಿಯಾದಿಂದ ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಜನೌಷಧಿ ಮಳಿಗೆ ಕಾರ್ಯಕ್ರಮದಡಿ ನಾಗರಿಕರಿಗೆ ಅಗತ್ಯವಾಗಿರುವ ಔಷಧಿಗಳನ್ನು ಯುವ ಸಮೂಹ ಒಳಗೊಂಡಿರುವ ಜನಮಿತ್ರ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ತಲುಪಿಸುತ್ತಿದ್ದಾರೆ. ಪ್ರತಿ ತಿಂಗಳೂ ಔಷಧ ನಿಯಂತ್ರಕರು ಸೂಕ್ತ ತಪಾಸಣೆ ನಡೆಸುವ ಮೂಲಕ ಜನರಿಗೆ ಅತ್ಯುತ್ತಮ ಸೇವೆ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ರೈತಪರ, ಜನಪರ ಮತ್ತು ಕೈಗಾರಿಕಾ ಸ್ನೇಹಿಯಾಗಿ ಆಡಳಿತ ನಡೆಸುತ್ತಿದೆ ಎಂದು ಬಣ್ಣಿಸಿದರು.

ಜನೌಷಧಿ ಕೇಂದ್ರಕ್ಕೆ ಶಿಫಾರಸು: ದೇಶದಲ್ಲಿಯೇ ಉಡುಪಿ ನಂ.1

ಜನೌಷಧಿ ಮಳಿಗೆಗಳಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಲಾಭವಾಗುತ್ತಿದೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಮಾಸಿಕ ಕನಿಷ್ಠ 4 ಸಾವಿರ ಮೊತ್ತದ ಔಷಧಿ ಅಗತ್ಯವಿದೆ. ಆದರೆ, ಜನೌಷಧಿ ಮಳಿಗೆಗಳಲ್ಲಿ ಕೆಲವೇ ನೂರು ರುಪಾಯಿಯಲ್ಲಿ ಎಲ್ಲ ಔಷಧಿಗಳು ದೊರೆಯುತ್ತಿವೆ. ರಕ್ತದೊತ್ತಡ(BP), ಮಧುಮೇಹ(Diabetes), ಕ್ಯಾನ್ಸರ್‌(Cancer) ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಜೀವನ ಪರ್ಯಂತ ಔಷಧ ಪಡೆಯುವ ಪರಿಸ್ಥಿತಿ ಇದ್ದು, ಇವರ ಮಾಸಿಕ ವೆಚ್ಚವನ್ನು ಸರ್ಕಾರ(Government) ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿದರು.

ಸಮರ್ಪಕವಾಗಿ ಔಷಧಿ ವಿತರಣೆ: 

ಜನರಿಕ್‌ ಔಷಧಗಳಿಗೆ(Generic Medicine) ತನ್ನದೇ ಆದ ಮಾನ್ಯತೆ ದೊರೆತಿದೆ. ಒಂದು ಜನೌಷಧಿ ಮಳಿಗೆಯಲ್ಲಿ ಕನಿಷ್ಠ 25 ರಿಂದ 50 ಮಂದಿ ಜನೌಷಧಿ ಮಿತ್ರರನ್ನು ಒಳಗೊಂಡಿದ್ದು, ಕೋವಿಡ್‌(Covid19) ಸಂದರ್ಭದಲ್ಲೂ ಅಗತ್ಯವಿರುವವರಿಗೆ ಸಮರ್ಪಕವಾಗಿ ಔಷಧಿಗಳನ್ನು ಪೂರೈಸಲಾಗಿದೆ ಎಂದು ವಿವರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌(K Sudhakar), ಸಂಸದ ತೇಜಸ್ವಿ ಸೂರ್ಯ(Tejsvi Surya), ಶಾಸಕ ರವಿ ಸುಬ್ರಹ್ಮಣ್ಯ, ಅದಮ್ಯ ಚೇತನ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿತೇಜಸ್ವಿನಿ ಅನಂತಕುಮಾರ್‌, ಅಧಿಕಾರಿ ಪಾರ್ಥ ಗೌತಮ್‌ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ವೈದ್ಯಕೀಯ ಪಠ್ಯಕ್ರಮದಲ್ಲಿ ಧಾರ್ಮಿಕ ಸಂಪ್ರದಾಯ ಅಳವಡಿಕೆಗೆ ಚಿಂತನೆ: ಸಚಿವ ಮಾಂಡವೀಯ

ಯಶಸ್ವಿ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ಅವರು, ಕೇವಲ ಯೋಜನೆಗಳನ್ನು ಘೋಷಿಸುವುದಿಲ್ಲ. ಅದನ್ನು ಸೂಕ್ತ ರೀತಿಯಲ್ಲಿ ಜನರಿಗೆ ತಲುಪಿಸಲು ಕಾರ್ಯ ಯೋಜನೆಗಳನ್ನು ರೂಪಿಸಿ ಪ್ರಚಾರಕ್ಕೂ ಆದ್ಯತೆ ನೀಡುತ್ತಿದ್ದಾರೆ. ಈವರೆಗೆ ಯಾವುದೇ ಪ್ರಧಾನಿ ಯೋಚಿಸದ ಮತ್ತು ಯೋಜಿಸದ ರೀತಿಯಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದ್ದು, ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು.

ಎನ್‌.ಆರ್‌.ಕಾಲೋನಿಯಲ್ಲಿ ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಉದ್ಘಾಟಿಸಿದರು. ಬಸವರಾಜ ಬೊಮ್ಮಾಯಿ(Basavaraj Bommai), ಡಾ. ಕೆ.ಸುಧಾಕರ್‌, ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ತೇಜಸ್ವಿನಿ ಅನಂತಕುಮಾರ್‌ ಮತ್ತಿತರರಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!