Latest Videos

ಇನ್ನೂ 1 ವಾರ ಭಾರಿ ಮಳೆ : ಹವಾಮಾನ ಇಲಾಖೆ

By Kannadaprabha NewsFirst Published Oct 11, 2021, 9:28 AM IST
Highlights
  • ಅಂಡಮಾನ್‌ ಬಳಿ ವಾಯುಭಾರ ಕುಸಿತ ಸಂಭವ ಇದ್ದು, ರಾಜ್ಯದಲ್ಲಿ ಇನ್ನೂ 1 ವಾರ ಕಾಲ ಮಳೆ
  •  1 ವಾರ ಕಾಲ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ

 ಬೆಂಗಳೂರು(ಅ.11):  ಅಂಡಮಾನ್‌ (Andaman) ಬಳಿ ವಾಯುಭಾರ ಕುಸಿತ ಸಂಭವ ಇದ್ದು, ರಾಜ್ಯದಲ್ಲಿ ಇನ್ನೂ 1 ವಾರ ಕಾಲ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ (Weather Department) ಭಾನುವಾರ ಮುನ್ಸೂಚನೆ ನೀಡಿದೆ.

‘ಉತ್ತರ ಅಂಡಮಾನ್‌ ಸಮುದ್ರದ ಮೇಲೆ ಸಮುದ್ರದ ಮಟ್ಟದಿಂದ 5.8 ಕಿ.ಮೀ. ಎತ್ತರದಲ್ಲಿ ಮೇಲ್ಮೈ ಸುಳಿಗಾಳಿಯೊಂದು ಸೃಷ್ಟಿಯಾಗಿದ್ದು, ಸೋಮವಾರ ಇದು ವಾಯುಭಾರ ಕುಸಿತವಾಗಿ ಪರಿವರ್ತನೆ ಆಗುವ ಸಾಧ್ಯತೆಯಿದೆ. ಆ ಬಳಿಕ ನಾಲ್ಕೈದು ದಿನದಲ್ಲಿ ಉತ್ತರ ಆಂಧ್ರ ಮತ್ತು ದಕ್ಷಿಣ ಒಡಿಶಾ (Odisha) ಕರಾವಳಿಗೆ (Coastal) ಅಪ್ಪಳಿಸುವ ಸಾಧ್ಯತೆಯಿದೆ. ಅದೇ ರೀತಿ ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಸಮುದ್ರ ಮಟ್ಟದಿಂದ ಸುಮಾರು 5.8 ಕಿಮೀ ವರೆಗೂ ಮೇಲ್ಮೈ ಸುಳಿಗಾಳಿಯಿದ್ದು ಇದರ ಪರಿಣಾಮ ಕರ್ನಾಟಕದ (Karnataka) ಉತ್ತರ ಒಳನಾಡು, ಆಂಧ್ರ ಕರಾವಳಿ, ದಕ್ಷಿಣ ತೆಲಂಗಾಣ, ದಕ್ಷಿಣ ಮಹಾರಾಷ್ಟ್ರದ ಮೇಲೆ ಆಗಲಿದೆ’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರಲ್ಲಿ ಭಾರೀ ಮಳೆ: ಬಾಯಲ್ಲಿ ಮರಿ ಹಿಡಿದು ನಾಯಿ ಪರದಾಟ

ಸೋಮವಾರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ (Bagalakote), ಬೆಳಗಾವಿ, ಗದಗ, ಹಾವೇರಿ, ಧಾರವಾಡ, ಕೊಪ್ಪಳ, ವಿಜಯಪುರ, ರಾಯಚೂರು, ಬೆಂಗಳೂರು ನಗರ (Bengaluru) ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು (Chikkamagaluru), ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ (Shivamogga), ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಹೊಸಪೇಟೆಯಲ್ಲಿ ಅತ್ಯಧಿಕ 11 ಸೆಂ.ಮೀ. ವರ್ಷಧಾರೆ

ರಾಜ್ಯದಲ್ಲಿ ಭಾರಿ ಮಳೆಯ (Heavy Rain) ಅಬ್ಬರ ಮುಂದುವರಿದಿದ್ದು ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳ ಕೆಲವು ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಮಳೆ ಅಷ್ಟೊಂದು ಬಿರುಸಾಗಿರಲಿಲ್ಲ.

ಕಲಬುರಗಿ (Kalaburagi), ಮಂಡ್ಯ (mandya), ಬಾಗಲಕೋಟೆ, ಚಿಕ್ಕಬಳ್ಳಾಪುರ (Chikkaballapur) ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಭಾರೀ ಮಳೆಯಾಗಿದೆ (Heavy rain). ಕಲಬುರಗಿಯಲ್ಲಿ ಮಳೆಯಬ್ಬರಕ್ಕೆ ನಗರದ ಪ್ರದೇಶದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ರಾಜಧಾನಿ ಬೆಂಗಳೂರಿನಿಂದ (Bengaluru) ವರದಿಯಾಗಿದೆ. ಈ ಮಧ್ಯೆ ತುಂಗಭದ್ರಾ ಡ್ಯಾಂನಿಂದ 45 ಸಾವಿರ ಕ್ಯುಸೆಕ್‌ ನೀರು ಹೊರಬಿಟ್ಟಿರುವ ಕಾರಣ ಹಂಪಿಯ ಕೆಲವು ಸ್ಮಾರಕಗಳು ಜಲಾವೃತವಾಗಿವೆ.

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸಪೇಟೆ 10.75 ಸೆಂಮೀ, ಉತ್ತರ ಕನ್ನಡದ ಅಂಕೋಲ, ಕೊಪ್ಪಳದ ಬೇವಿನಹಳ್ಳಿ 9.15 ಸೆಂ.ಮೀ, ಹಾಗೂ ಮುನಿರಾಬಾದ್‌ 8 ಸೆಂ.ಮೀ., ಉತ್ತರ ಕನ್ನಡದ ಗೋಕರ್ಣ, ಬಾಗಲಕೋಟೆಯ ಇಳಕಲ್‌, ಬೀದರ್‌ನ ಭಾಲ್ಕಿ, ಬಾಗಲಕೋಟೆಯ ರಬಕವಿ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.

ರಾಜ್ಯದ ಉತ್ತರ ಕನ್ನಡದ ಶಿರಾಲಿಯಲ್ಲಿ ಗರಿಷ್ಠ ಉಷ್ಣತೆ 32.8 ಡಿಗ್ರಿ ಸೆಲ್ಸಿಯಸ್‌, ಬೀದರ್‌ನಲ್ಲಿ ಕನಿಷ್ಠ 18.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

"

click me!