
ಬೆಂಗಳೂರು (ಏ.20): ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಹಗರಣದ ತನಿಖೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರ ಆಪ್ತರ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ದಾಳಿಯ ಹಿಂದೆ ಒಂದು ಸ್ಫೋಟಕ ಸತ್ಯ ಅಡಗಿದೆ ಎನ್ನಲಾಗುತ್ತಿದೆ. ನಲಪಾಡ್ ಖಾತೆಗೆ ಜಮೆಯಾದ ಆ '10 ಲಕ್ಷ' ರೂಪಾಯಿಗಳೇ ಇಂದಿನ ಇಡಿ ದಾಳಿಗೆ ಮೂಲ ಕಾರಣವೇ ಎಂಬ ಪ್ರಶ್ನೆ ಈಗ ದಟ್ಟವಾಗಿ ಎದ್ದಿದೆ.
2020ರಲ್ಲಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಯಶೋಧಾ ದೇವಿ ಎಂಬುವವರು ನೀಡಿದ ದೂರು ಇಡೀ ಪ್ರಕರಣಕ್ಕೆ ನಾಂದಿ ಹಾಡಿತ್ತು. ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ, ರಾಬಿನ್ ಖಂಡೇಲ್ವಾಲ ಮತ್ತು ಅಜಿತ್ ಖಂಡೇಲ್ವಾಲ ಎಂಬುವವರು 28 ಲಕ್ಷ ರೂಪಾಯಿಗಳನ್ನು ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿದರೆ 45 ಲಕ್ಷ ರೂಪಾಯಿ ನೀಡುವುದಾಗಿ ನಂಬಿಸಿ ವಂಚಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಲಭ್ಯವಾದ ಮನಿ ಟ್ರೇಲ್ನಲ್ಲಿ ನಲಪಾಡ್ ಹೆಸರು ಕೇಳಿಬಂದಿದೆ.
ವರದಿಗಳ ಪ್ರಕಾರ, ಶ್ರೀಕಿ ಬಿಟ್ ಕಾಯಿನ್ ಹ್ಯಾಕ್ ಮಾಡಿ ಬಂದ ಹಣವನ್ನು ಮುಂಬೈ ಮೂಲದ ವ್ಯಕ್ತಿಯೊಬ್ಬನಿಗೆ ಕಳುಹಿಸಿದ್ದ. ಆ ಮುಂಬೈ ಮೂಲದ ವ್ಯಕ್ತಿಯು ನಲಪಾಡ್ ಅವರ ಬ್ಯಾಂಕ್ ಖಾತೆಗೆ 10 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದ ಎನ್ನಲಾಗಿದೆ. ಈ ಆರ್ಥಿಕ ವ್ಯವಹಾರವೇ ಈಗ ನಲಪಾಡ್ ಪಾಲಿಗೆ ಕುತ್ತಾಗಿ ಪರಿಣಮಿಸಿದೆ.
ಹ್ಯಾಕರ್ ಶ್ರೀಕಿ ಮತ್ತು ನಲಪಾಡ್ ಕುಟುಂಬಕ್ಕೆ ಹಳೆಯ ಪರಿಚಯವಿದೆ. ನಲಪಾಡ್ ಸಹೋದರ ಓಮರ್ ನಲಪಾಡ್ ಮತ್ತು ಶ್ರೀಕಿ ಸಹಪಾಠಿಗಳಾಗಿದ್ದರು (Classmates). ಇದೇ ಕಾರಣಕ್ಕೆ ಶ್ರೀಕಿ ನಲಪಾಡ್ ಅವರಿಗೂ ಹತ್ತಿರವಾಗಿದ್ದ ಎನ್ನಲಾಗಿದೆ. ಈ ಸ್ನೇಹದ ಹಿನ್ನೆಲೆಯಲ್ಲೇ ವ್ಯವಸ್ಥಿತವಾಗಿ ಬಿಟ್ ಕಾಯಿನ್ ಹ್ಯಾಕಿಂಗ್ ಮತ್ತು ಹಣದ ವರ್ಗಾವಣೆ ನಡೆದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರ ಇದನ್ನು ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿತ್ತು. ತನಿಖೆಯ ವೇಳೆ ನಲಪಾಡ್ ತಮ್ಮ ಖಾತೆಗೆ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದರು ಮತ್ತು ಆ ಹಣವನ್ನು ರಿಕವರಿ ಮಾಡಿಕೊಡುವುದಾಗಿ (ವಾಪಸ್ ನೀಡುವುದಾಗಿ) ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ಇಲ್ಲಿಯವರೆಗೆ ಆ ಹಣ ರಿಕವರಿ ಆಗಿಲ್ಲ ಎನ್ನಲಾಗಿದೆ. ಇಷ್ಟೆಲ್ಲಾ ಪುರಾವೆಗಳಿದ್ದರೂ ಎಸ್ಐಟಿ ಇದುವರೆಗೆ ಅಂತಿಮ ಚಾರ್ಜ್ ಶೀಟ್ ಸಲ್ಲಿಸಿಲ್ಲ. ನಲಪಾಡ್ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಎಸ್ಐಟಿ ಹಿಂದೇಟು ಹಾಕುತ್ತಿದೆಯೇ? ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ನಲಪಾಡ್ಗೆ ರಿಲೀಫ್ ನೀಡಲಾಗಿದೆಯೇ? ಎಂಬ ಗಂಭೀರ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ಎಸ್ಐಟಿ ತನಿಖೆ ವಿಳಂಬವಾಗುತ್ತಿರುವ ಬೆನ್ನಲ್ಲೇ, ಅಕ್ರಮ ಹಣ ವರ್ಗಾವಣೆ (Money Laundering) ಕಾಯ್ದೆಯಡಿ ಇಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಬಿಟ್ ಕಾಯಿನ್ ಹ್ಯಾಕ್ ಮಾಡಿ ಲೂಟಿ ಮಾಡಿದ ಹಣ ಯಾರ್ಯಾರ ಖಾತೆಗೆ ಹೋಗಿದೆ ಎಂಬುದನ್ನು ಪತ್ತೆ ಹಚ್ಚುತ್ತಿರುವ ಇಡಿ ಅಧಿಕಾರಿಗಳಿಗೆ, ಈ 10 ಲಕ್ಷದ ವ್ಯವಹಾರದ ಬಗ್ಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದೆ. ಅದರ ಭಾಗವಾಗಿಯೇ ಇಂದು ನಲಪಾಡ್ ಆಪ್ತರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
ಒಟ್ಟಾರೆಯಾಗಿ, ಬಿಟ್ ಕಾಯಿನ್ ಹಗರಣದ ಈ 10 ಲಕ್ಷ ರೂಪಾಯಿಗಳ ವ್ಯವಹಾರದ ಸುಳಿ ಈಗ ನಲಪಾಡ್ ಅವರನ್ನು ಸುತ್ತುವರಿಯುತ್ತಿದೆ. ಇಡಿ ದಾಳಿಯ ನಂತರ ಹೊರಬರುವ ದಾಖಲೆಗಳು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕಂಪನ ಸೃಷ್ಟಿಸುವುದು ಖಚಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ