
ಬೆಂಗಳೂರು (ನ.21): ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಎಂಬಂತೆ, ಹಿರಿಯ ಶಾಸಕ ಜಿಎಸ್ ಪಾಟೀಲ್ ಅವರು ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಪರವಾಗಿ ಬ್ಯಾಟಿಂಗ್ ಬೀಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಡಿಕೆ ಶಿವಕುಮಾರ್ ನನಗೆ 1989ರಿಂದಲೂ ಆಪ್ತ ಸ್ನೇಹಿತರು. ಅವರು ಪಕ್ಷದ ಹಿರಿಯ ನಾಯಕರು. ಪಕ್ಷದ ಬಗ್ಗೆ ಅವರಿಗೆ ಅಪಾರ ಅಭಿಮಾನವಿದೆ ಎಂದು ಜಿಎಸ್ ಪಾಟೀಲ್ ತಮ್ಮ ಸ್ನೇಹವನ್ನು ಸ್ಮರಿಸಿದ್ದಾರೆ. ಇದರ ನಡುವೆ ಹೈಕಮಾಂಡ್ ಮಾತೇ ವೇದವಾಕ್ಯ ಎಂದಿರುವ ಪಾಟೀಲರು, ನಾಯಕತ್ವದ ಬದಲಾವಣೆ ಅಥವಾ ಇನ್ಯಾವುದೇ ವಿಷಯವಿರಲಿ, ನಾವು ಯಾವಾಗಲೂ ಹೈಕಮಾಂಡ್ ಜೊತೆಗಿರುತ್ತೇವೆ. ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾವು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿನ ಭೇಟಿಯ ಉದ್ದೇಶವನ್ನು ಸ್ಪಷ್ಟಪಡಿಸಿದ ಅವರು, ನನ್ನ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ತುರ್ತಾಗಿ ಆಗಬೇಕಿತ್ತು. ಈ ಬಗ್ಗೆ ಕ್ಷೇತ್ರಕ್ಕೆ ಬಂದಾಗ ಡಿಕೆಶಿ ಅವರೇ ಭರವಸೆ ನೀಡಿದ್ದರು. ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲು ಅವರನ್ನು ಭೇಟಿಯಾಗಿದ್ದೆನೆ ಎಂದು ತಿಳಿಸಿದರು.
ಗ್ರೂಪಿಸಂಗೆ 'ನೋ' ಎಂದ ಶಾಸಕ:
ನಮ್ಮಲ್ಲಿ ಯಾವುದೇ ಗ್ರೂಪಿಸಂ (ಬಣ ರಾಜಕೀಯ) ನಡೆದಿಲ್ಲ, ಅದೊಂದು ಒಳ್ಳೆಯ ಬೆಳವಣಿಗೆ. ಡಿಕೆಶಿ ಅವರು ನನ್ನನ್ನು ಬೆಂಬಲಿಸಿ ಎಂದು ಎಲ್ಲೂ ಬಹಿರಂಗವಾಗಿ ಮನವಿ ಮಾಡಿಲ್ಲ ಅಥವಾ ಗ್ರೂಪಿಸಂ ಮಾಡಿ ಎಂದು ಹೇಳಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದರು.
ಸಚಿವ ಸ್ಥಾನ ಸಿಗದ ನೋವು?
ನಾನು ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಗೆಲುವು ಸಾಧಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದರೂ ನಮಗೆ ಪಕ್ಷ ಉಳಿಯುವುದು ಮುಖ್ಯ ಎಂದು ಪಕ್ಷ ನಿಷ್ಠೆಯನ್ನು ಮೆರೆದಿದ್ದಾರೆ. ಒಟ್ಟಿನಲ್ಲಿ ಅಭಿವೃದ್ಧಿ ನೆಪದಲ್ಲಿ ಡಿಕೆಶಿ ಅವರನ್ನು ಭೇಟಿಯಾದ ಹಿರಿಯ ಶಾಸಕ ಜಿಎಸ್ ಪಾಟೀಲ್ ಅವರು ಪರೋಕ್ಷವಾಗಿ ಡಿಕೆಶಿ ನಾಯಕತ್ವವನ್ನು ಸಮರ್ಥಿಸಿಕೊಳ್ಳುವ ಮೂಲಕ, ಅಂತಿಮ ನಿರ್ಧಾರ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ