
ಮೈಸೂರು: ಆರ್ಎಸ್ಎಸ್ ಎಂಬುದು ಸಾವಿರ ಹೆಡೆಗಳಿರುವ ವಿಷ ಸರ್ಪ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಿವಾದಕ್ಕೀಡಾಗಿದೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯನ್ನು ಕೆಲವರು ಗಂಗಾಜಲ ಬಳಸಿ ಶುದ್ಧೀಕರಣ ಮಾಡಿದ್ದರು. ಈ ಘಟನೆ ಖಂಡಿಸಿ ಆಗಸ್ಟ್ 15ರಂದು ಮೈಸೂರಿನ ರೈಲು ನಿಲ್ದಾಣ ಬಳಿಯ ಬಾಬು ಜಗಜೀವನರಾಂ ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶುದ್ಧೀಕರಣ ಮಾಡಿದ ಸಂಘಟನೆಗೆ ಇಷ್ಟು ಧೈರ್ಯ ಬರಲು ಕಾರಣ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು. ಆರ್ಎಸ್ಎಸ್ ಎಂಬುದು 1 ಸಾವಿರ ಹೆಡೆಗಳಿರುವ ವಿಷಸರ್ಪ. ಅದರ ತುಂಬಾ ತುಂಬಿಕೊಂಡಿರುವಂತಹದ್ದು ಜಾತಿವಾದ, ಕೋಮುವಾದ, ಮನುವಾದ. ಇದು ಇಡೀ ಸಮಾಜಕ್ಕೆ ವಿಷ ತುಂಬುವಂತಹ, ವಿಷ ಕಕ್ಕುವಂತಹ ಒಂದು ನಾಗರ. ಇದನ್ನು ನಾವು ಹೀಗೆಯೇ ಬಿಟ್ಟರೆ ನಮ್ಮ ಸಮಾಜ ಹಾಳಾಗುತ್ತದೆ. ನಮ್ಮ ದೇಶ ಕೂಡ ಹಾಳಾಗುತ್ತದೆ. ಹೀಗಾಗಿ, ಯಾರ್ಯಾರು ಪ್ರಜ್ಞಾವಂತರು, ಯಾರು ಜಾತಿ ವ್ಯವಸ್ಥೆಯನ್ನು ಒಡೆದು ಹಾಕಬೇಕು ಅಂದುಕೊಂಡಿದ್ದಾರೋ ಅವರೆಲ್ಲ ಆರ್ಎಸ್ಎಸ್ನ ಹೀನ ಮನಸ್ಥಿತಿಯನ್ನು ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.
ಜಾತಿವಾದವನ್ನು ಮನುವಾದಿಗಳು ಮುಂದುವರಿಸಿದ್ದಾರೆ. ಅದಕ್ಕೆ ನಮ್ಮ ಧಿಕ್ಕಾರ. ಎಲ್ಲಿ ತನಕ ಕೋಮುವಾದ, ಜಾತಿವಾದಿತನ, ಮೇಲು-ಕೀಳು ಎಂಬ ಮನಸ್ಸು ಇರುತ್ತೋ ಅಲ್ಲಿಯವರೆಗೂ ಅವರು ಶುದ್ಧೀಕರಣ ಆಗಲು ಸಾಧ್ಯವಿಲ್ಲ. ಇವರು ಬದಲಾಗದೆ, ಶುದ್ಧೀಕರಣವಾಗದೆ ಮಾಡುವ ಯಾವ ಕೆಲಸವೂ ಪವಿತ್ರವಾಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಟಾರ್ಗೆಟ್ ಆರೆಸ್ಸೆಸ್
- ಖರ್ಗೆ ಅವರು ಭಾಷಣ ಮಾಡಿದ್ದ ವೇದಿಕೆಯನ್ನು ಶುದ್ಧೀಕರಣ ಮಾಡಿದ್ದನ್ನು ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
- ಆ.15ರಂದು ನಡೆದ ಹೋರಾಟ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಯತೀಂದ್ರ ಆಕ್ರೋಶ
- ಶುದ್ಧೀಕರಣ ಮಾಡಿದ ಸಂಘಟನೆಗೆ ಅಷ್ಟೊಂದು ಧೈರ್ಯ ಬರಲು ಕೇಂದ್ರದಲ್ಲಿ ಬಿಜೆಪಿ ಇರುವುದು ಕಾರಣ
- ಆರ್ಎಸ್ಎಸ್ ಎಂಬುದು 1 ಸಾವಿರ ಹೆಡೆಗಳ ವಿಷ ಸರ್ಪ. ಅದರ ತುಂಬಾ ಮನುವಾದ ತುಂಬಿದೆ ಎಂದು ಕಿಡಿ
- ಆರ್ಎಸ್ಎಸ್ ಮನಸ್ಥಿತಿಯನ್ನು ಖಂಡಿಸಿ ಎಂದು ಕರೆ. ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ