
ಬೆಂಗಳೂರು (ಡಿ.27): ಸರ್ಕಾರಿ ಹುದ್ದೆ, ರಾಜಕೀಯ ಹುದ್ದೆ ಅಥವಾ ಮತ್ತಾವುದೇ ಹುದ್ದೆಯಾದರೂ ಅರ್ಹತೆ ಇರುವವರಿಗೂ ಸಿಗುತ್ತವೆ, ಇಲ್ಲದವರಿಗೂ ಸಿಗುತ್ತವೆ. ಕೆಲವರಿಗೆ ಸ್ವಯಂ ಪ್ರತಿಭೆಯಿಂದ ಸಿಕ್ಕರೆ, ಮತ್ತೆ ಕೆಲವರಿಗೆ ಸಮಯ, ಸಂದರ್ಭಗಳಿಂದ ಸಿಗುತ್ತವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ನಗರದ ಪುರಭವನದಲ್ಲಿ ನಿವೃತ್ತ ಪ್ರಾಧ್ಯಾಪಕ, ಕೃಷಿ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಡಾ. ಎ.ಬಿ. ಪಾಟೀಲ್ ಅಭಿನಂದನಾ ಗ್ರಂಥ ‘ಅಶೋಕ ವೃಕ್ಷ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎ.ಬಿ.ಪಾಟೀಲ್ವ ರು ಕೃಷಿ, ತೋಟಗಾರಿಕೆಯಲ್ಲಿ ಬಹಳ ಅಧ್ಯಯನವನ್ನು ಮಾಡಿದ್ದಾರೆ. ಸುಖಾ ಸುಮ್ಮನೇ ಯಾರೂ ಸಂಶೋಧಕ ಎನಿಸಿಕೊಳ್ಳಲಾಗದು. ನಾಲ್ಕು ಜನ ಒಪ್ಪುವಂತಹ, ಕೃಷಿಕರಿಗೆ ಅನುಕೂಲ ಆಗುವಂತಹ ಕೆಲಸ ಮಾಡಿದ್ದರೆ ಮಾತ್ರ ಅಂತಹ ಗೌರವ ಪಡೆಯಲು ಸಾಧ್ಯ. ಆ ಬಗ್ಗೆ ಜ್ಞಾನವೂ ಇರಬೇಕು. ಅಂತಹ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಭೂಮಿ ಮೇಲೆ ಹುಟ್ಟಿ ಬಂದವರಿಗೆ ಏನಾದರೂ ಅವಕಾಶಗಳು ಸಿಕ್ಕೇ ಸಿಗುತ್ತವೆ. ಅರ್ಹತೆಯೂ ಎಲ್ಲರಿಗೂ ಇರುತ್ತದೆ. ಆದರೆ, ಸ್ಥಾನಗಳನ್ನು ನಿರ್ವಹಿಸಬಲ್ಲರು ಎಂದು ಹೇಳಲಾಗದು. ಪಾಟೀಲ್ ಅವರು ಕೃಷಿ ಮತ್ತು ತೋಟಗಾರಿಕೆಯಲ್ಲಿ ತಮ್ಮ ಜ್ಞಾನದಿಂದ ಸಾಧನೆ, ಸಂಶೋಧನೆ ಮಾಡಿದ್ದಾರೆ. ನಮ್ಮ ಇಲಾಖೆಯ ಕೃಷಿ, ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಉತ್ತಮ ಸಲಹೆಗಳನ್ನು, ಪರಿಹಾರಗಳನ್ನು ಕಂಡು ಹಿಡಿದಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ.ಬಿ. ಪಾಟೀಲ, ಸಮಾಜಕ್ಕಾಗಿ ನಾನು ಏನಾದರೂ ಮಾಡಿದ್ದೇನೆ ಎಂದರೆ ಅದಕ್ಕೆ ಕುಟುಂಬ, ಗುರು-ಹಿರಿಯರು, ಈ ಸಮಾಜ ಕಾರಣ. ಕೃಷಿ ಕ್ಷೇತ್ರದಲ್ಲಿನ ನನ್ನ ಕಾಯಕ ಇದೇ ರೀತಿ ಮುಂದುವರೆಯುತ್ತದೆ ಎಂದರು. ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ