ಕೊರೋನಾ ವೈರಸ್ ಲಾಕ್ಡೌನ್ ಇದೀಗ 3ನೇ ಹಂತಕ್ಕೆ ವಿಸ್ತರಣೆಯಾಗಿದೆ. ಆದರೆ ನಿಯಮ ಸಡಿಲಿಕೆ ಮಾಡಲಾಗಿದೆ. ಮೇ.03ರಿಂದ ಬಹುತೇಕ ಕಡೆಗಳಲ್ಲಿ ಲಾಕ್ಡೌನ್ ಸಡಿಲಿಕೆಯಾಗುತ್ತಿದೆ. ಹೀಗಾಗಿ ಜನರ ಓಡಾಟ, ಕಾರ್ಯಚಟುವಟಿಕೆ ಹೆಚ್ಚಲಿದೆ. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನಗರವಾಸಿಗಳಿಗೆ 22 ಸೂಚನೆ ನೀಡಿದ್ದಾರೆ.
ಬೆಂಗಳೂರು(ಮೇ.03): ಲಾಕ್ಡೌನ್ ನಿಯಮ ಸಡಿಲಿಕೆಯಾಗಿದೆ. ಮೇ.03ರಿಂದ ಕೆಲವೆಡೆ ಸಂಪೂರ್ಣ ಸಡಿಲಿಕೆ ಹಾಗೂ ಇನ್ನೂ ಕೆಲ ವಲಯಗಳಲ್ಲಿ ಭಾಗಶಃ ಸಡಿಲಿಕೆಯಾಗಿದೆ. ಹೀಗಾಗಿ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಜನತೆಗೆ ಮಹತ್ವದ ಸಂದೇಶ ರವಾನಿಸಿದ್ದಾರೆ. ಕೊರೋನಾ ವೈರಸ್ ಲಾಕ್ಡೌನ್ ಕಾರಣ ಪೊಲೀಸ್ ಇಲಾಖೆ ರಜೆ ತೆಗೆದುಕೊಳ್ಳದೇ ಸತತವಾಗಿ ಕರ್ತವ್ಯ ನಿಭಾಯಿಸಿದೆ. ಇದೀಗ ಪೊಲೀಸರು ಅವರ ಕುಟುಂಬದ ಜೊತೆ ಕೆಲ ಹೊತ್ತು ಕಳೆಯುವುದು ಅನಿವಾರ್ಯವಾಗಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
ಲಾಕ್ಡೌನ್ ಸಡಿಲಿಕೆಯಾಗುತ್ತಿರುವುದರಿಂದ ಎಲ್ಲರೂ ಜವಾಬ್ದಾರಿಯುತ ನಾಗರೀಕರಾಗಿರಬೇಕು. ಟ್ರಾಫಿಕ್ ನಿಯಮ ಚಾಚೂ ತಪ್ಪದೆ ಪಾಲಿಸಬೇಕು. ಇಷ್ಟೇ ಅಲ್ಲ ತಮ್ಮ ತಮ್ಮ ಸುರಕ್ಷತೆ ಹಾಗೂ ಬೆಲೆ ಬಾಳುವ ವಸ್ತುಗಳ ಕಡೆಗೂ ಗಮನ ಹರಿಸಬೇಕು. ಲಾಕ್ಡೌನ್ ಕಾರಣ ಹಲವರ ಆದಾಯ ನಿಂತು ಹೋಗಿದೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸವಿಲ್ಲದ ಕಾರಣ ಅಹಿತರ ಘಟನೆಗಳು ಸಂಭವ ಹೆಚ್ಚಿದೆ. ಹೀಗಾಗಿ ಎಲ್ಲರೂ ಕೆಲ ಮಹತ್ವದ ಸೂಚನೆ ಪಾಲಿಸಬೇಕು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
ಭಾಸ್ಕರ್ ರಾವ್ ನಗರವಾಸಿಗಳಿಗೆ ನೀಡಿದ 22 ಮಹತ್ವದ ಸೂಚನೆ ಇಲ್ಲಿದೆ.
ಮನೆಯಲ್ಲಿರುವ ಎಲ್ಲರೂ ಜಾಗರೂಕರಾಗಿರಬೇಕು. ಮಕ್ಕಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹುಡುಗ-ಹುಡುಗಿಯರು, ಕೆಲಸಕ್ಕೆ ತೆರಳುವ ಮಹಿಳೆಯರು-ಪುರಷರು ಎಲ್ಲರೂ ಜಾಗರೂಕರತೆಯಿಂದ ಇರಬೇಕು
ಕೆಲಸ ನಿಮಿತ್ತ ಅಥವಾ ಇತರ ಕಾರಣಗಳಿಗೆ ಹೊರಗೆ ಹೋಗುವವರು ದುಬಾರಿ ವಾಚ್ ಕಟ್ಟಿಕೊಳ್ಳಬೇಡಿ
ಮಹಿಳೆಯರು ವಜ್ರಾಭರಣಗಳು, ಚೈನ್, ಕಿವಿಯೋಲೆ, ರಿಂಗ್, ಸೇರಿದಂತೆ ಆಭರಣಗಳನ್ನು ಧರಿಸಿ ಹೊರಗೆ ಹೋಗಬೇಡಿ
ಪುರುಷರು ಬ್ರಾಸ್ಲೆಟ್, ಚೈನ್, ದುಬಾರಿ ವಾಚ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಧರಿಸಿ ಹೊರಗೆ ಹೋಬೇಡಿ
ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಬಳಕೆ ಕಡಿಮೆ ಮಾಡಿ ಅಥವಾ ಉಪಯೋಗಿಸಬೇಡಿ
ಅಪರಿಚತರಿಗೆ ವಾಹನದಲ್ಲಿ ಕರೆದುಕೊಂಡು ಹೋಗುವ ಅಥವಾ ಅವರು ಹೇಳಿದ ಸ್ಥಳಗಳಿಗೆ ಬಿಡುವ ಸಾಹಸ ಮಾಡಬೇಡಿ
ಅವಶ್ಯಕತೆ ಇದ್ದಷ್ಟು ಮಾತ್ರ ಹಣ ಕೈಯಲ್ಲಿ ಇಟ್ಟುಕೊಳ್ಳಿ, ಹೆಚ್ಚು ಹಣ ಪರ್ಸ್ ಅಥವಾ ಕೈಯಲ್ಲಿ ಇಟ್ಟುಕೊಳ್ಳಬೇಡಿ
ಪ್ರಯಾಣಿಸುವಾಗ ಅಥವಾ ಹೊರಗೆ ತೆರಳಿದಾಗಿ ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್ ಜೋಪಾನವಾಗಿಟ್ಟುಕೊಳ್ಳಿ
ನಿಮ್ಮ ಸಹೋದರ, ಸಹೋದರಿ, ಮಕ್ಕಳು, ಪತ್ನಿ ಸೇರಿದಂತೆ ಕುಟುಂಬ ಸದಸ್ಯರಿಗೆ ಕರೆ ಮಾಡಿ ವಿಚಾರಿಸಿ
ಮನೆಯಲ್ಲಿರುವವರಿಗೆ ಅಪರಿಚಿತರರು, ಮಾರಾಟಗಾರರು ಸೇರಿದಂತೆ ಯಾರಾದರೂ ಮನೆ ಕಾಲಿಂಗ್ ಬೆಲ್ ಮಾಡಿದಾಗ ಪರಿಶೀಲಿಸಿ, ತಕ್ಷಣವೇ ಬಾಗಿಲು ತೆಗೆಯಬೇಡಿ, ಗ್ರಿಲ್ ಲಾಕ್ ಮಾಡಿ. ಇಷ್ಟೇ ಅಲ್ಲ ಯಾವುದೇ ಪಾರ್ಸೆಲ್, ಏನೇ ಬಂದರೂ ಗ್ರಿಲ್ ಸಮೀಪಕ್ಕೆ ತೆರಳಬೇಡಿ
ಹೊರಗೆ ತೆರಳುವ ಮಕ್ಕಳಿಗೆ ಆದಷ್ಟು ಬೇಗ ಮನೆಗೆ ವಾಪಸ್ ಆಗುವಂತೆ ಸೂಚಿಸಿ
ಮನೆಗೆ ಹಿಂತಿರುವಾಗ ಅಥವಾ ಕಾರ್ಯನಿಮಿತ್ತ ತೆರಳುವಾಗಿ ಒಳ ದಾರಿಗಳನ್ನು ಬಳಸಬೇಡಿ, ಮುಖ್ಯರಸ್ತೆಗಳಲ್ಲೇ ಪ್ರಯಾಣಿಸಿ
ಯುವಕರು ಹೊರಗಡೆ ಇರುವಾಗ ಸುತ್ತಮುತ್ತಲ ಪ್ರದೇಶಗಳನ್ನು ಗಮನಿಸಿ, ಎಚ್ಚರದಿಂದ ಇರಿ
ತುರ್ತು ಕರೆ ನಂಬರ್ ಯಾವತ್ತೂ ನಿಮ್ಮ ಕೈಯಲ್ಲಿ ಇರಲಿ
ಸಾರ್ವಜನಿಕ ಅಂತರ ಕಾಪಾಡಿಕೊಳ್ಳಿ, ಹೆಜ್ಜೆ ಹೆಜ್ಜೆಗೂ ಎಚ್ಚರವಿರಲಿ
ಹೊರಗೆ ತೆರಳುವಾಗ ಮಾಸ್ಕ್ ಧರಿಸಿ, ಇತರರೂ ಧರಿಸಿರುತ್ತಾರೆ ಹೀಗಾಗಿ ಎಚ್ಚರವಿರಲಿ
ಕ್ಯಾಬ್ ಸೇವೆ ಬಳಸುವವರು ನಿಮ್ಮ ಪ್ರಯಾಣದ ವಿವರಗಳನ್ನು ಪೋಷಕರು, ಸಹೋದರ-ಸಹೋದರಿ ಅಥವ ಗೆಳಯರ ಜೊತೆ ಹಂಚಿಕೊಳ್ಳಿ
ಹೆಚ್ಚಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನೇ ಬಳಸಿ
ತುಂಬಿ ತುಳುಕುತ್ತಿರುವ ಬಸ್ ಸಂಚಾರ ಮಾಡಬೇಡಿ
ಪ್ರತಿ ದಿನ ವ್ಯಾಯಾಮ, ಬೆಳಗಿನ ಜಾವ ನಡಿಗೆ ತೆರಳುವವರು ಬೆಳಗ್ಗೆ 6 ಗಂಟೆ ನಂತರ ಆರಂಭಿಸಿ. ಸಂಜೆ 8ರೊಳಗೆ ಮನೆ ಸೇರಿಕೊಳ್ಳಿ. ಖಾಲಿ ರಸ್ತೆಯಲ್ಲಿ ಬದಲು ಮುಖ್ಯರಸ್ತೆಯನ್ನೇ ಹೆಚ್ಚಾಗಿ ಬಳಸಿ
ಮಾಲ್, ಪಾರ್ಕ್ಗಳಲ್ಲಿ ಹೆಚ್ಚಿನ ಸಮಯ ಕಳೆಯದಿರಿ
ಮಕ್ಕಳ, ತಮ್ಮ, ತಂಗಿಯ ಟ್ಯೂಷನ್ ಕ್ಲಾಸ್ಗೆ ದೊಡ್ಡವರು ಅಥವಾ ಪೋಷಕರು ಕರೆದುಕೊಂಡು ಹೋಗಿ ಕರೆತನ್ನಿ
ಬೆಲೆ ಬಾಳುವ ವಸ್ತುಗಳನ್ನು ಕಾರಿನಲ್ಲಿಟ್ಟು ತೆರಳಬೇಡಿ
ಇಷ್ಟು ಸೂಚನೆಗಳನ್ನು ಕನಿಷ್ಠ 3 ತಿಂಗಳ ಪಾಲಿಸಬೇಕು. ಅಥವಾ ಕೊರೋನಾ ವೈರಸ್ ಸಂಪೂರ್ಣವಾಗಿ ತೊಲಗುವ ವರೆಗೆ ಪಾಲಿಸಿದರೆ ಉತ್ತಮ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇನ್ನು ಉತ್ತಮ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ