
ಮಂಡ್ಯ (ಆ.27): ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಬಡ ಹಿಂದೂ ಕುಟುಂಬಗಳಿಗೆ ಸೇರಿದ ಭೂಮಿಯನ್ನು ಕಿತ್ತುಕೊಂಡು, ಅನ್ಯ ಧರ್ಮೀಯರ ಬಡಾವಣೆಗೆ ರಸ್ತೆ ನಿರ್ಮಾಣ ಮಾಡುತ್ತಿರುವ ಆರೋಪವೊಂದು ಕೇಳಿಬಂದಿದೆ. ಈ ಘಟನೆಯಿಂದ ಜೀವನಾಧಾರವಾಗಿದ್ದ ಜಮೀನು ಮತ್ತು ಕೊಟ್ಟಿಗೆ ಕಳೆದುಕೊಂಡ ಬಡ ಕುಟುಂಬಗಳು, ವಿಶೇಷವಾಗಿ ಲಕ್ಷ್ಮಮ್ಮ ಎಂಬ ಮಹಿಳೆ, ಕಣ್ಣೀರು ಹಾಕುತ್ತಿದ್ದಾರೆ.
1968ರಲ್ಲಿ ಸರ್ಕಾರದಿಂದ ಭೂಮಿ ಮಂಜೂರು:
1968ರಲ್ಲಿ ಆರು ಹಿಂದೂ ಕುಟುಂಬಗಳಿಗೆ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ಈ ಜಮೀನಿಗೆ ಖಾತೆಯನ್ನೂ ಅಧಿಕಾರಿಗಳೇ ಮಾಡಿಕೊಟ್ಟಿದ್ದರು. ಆದರೆ, ಈಗ ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೇ ಈ ಜಮೀನಿನಲ್ಲಿ ಕೊಟ್ಟಿಗೆ ತೆರವುಗೊಳಿಸಿ, ರಸ್ತೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಲಕ್ಷ್ಮಮ್ಮ ಎಂಬವರು ತಮ್ಮ ಜಮೀನಿನಲ್ಲಿ ಕಟ್ಟಿಕೊಂಡಿದ್ದ ಕೊಟ್ಟಿಗೆಯನ್ನು ಅಧಿಕಾರಿಗಳು ಡೆಮಾಲಿಶ್ ಮಾಡಿಸಿದ್ದಾರೆ.
ಅನ್ಯ ಧರ್ಮೀಯರ ಬಡಾವಣೆಗೆ ರಸ್ತೆ ನಿರ್ಮಾಣ?
ತೆರವುಗೊಳಿಸಿದ ಜಾಗದಲ್ಲಿ ಅನ್ಯ ಧರ್ಮೀಯರ ಬಡಾವಣೆಗೆ ರಸ್ತೆ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಪುರಸಭೆ ರಸ್ತೆ ನಿರ್ಮಿಸುತ್ತಿದ್ದು, ಯಾವುದೇ ನೋಟೀಸ್ ನೀಡದೇ ಕೊಟ್ಟಿಗೆ ತೆರವುಗೊಳಿಸಲಾಗಿದೆ. ಇದರ ಹಿಂದೆ ರಾಜಕೀಯ ಒತ್ತಡವಿದೆ ಎಂಬ ಆರೋಪವೂ ಇದೆ. ಅಧಿಕಾರಿಗಳು ಅನ್ಯ ಧರ್ಮೀಯರಿಂದಲೇ ಕೊಟ್ಟಿಗೆ ತೆರವು ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಬೆಂಕಿ:
ಕೊಟ್ಟಿಗೆ ತೆರವುಗೊಳಿಸುವ ವೇಳೆ ಲಕ್ಷ್ಮಮ್ಮ ಅವರ ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದೆ. ಜಾನುವಾರು ಸಾಕಾಣಿಕೆಯ ಮೂಲಕ ಜೀವನ ಸಾಗಿಸುತ್ತಿದ್ದ ಲಕ್ಷ್ಮಮ್ಮ ಕುಟುಂಬ, ಈಗ ತಮ್ಮ ಜೀವನಾಧಾರವನ್ನೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ನ್ಯಾಯಕ್ಕಾಗಿ ಕುಟುಂಬಗಳು ಆಗ್ರಹ:
ನಮ್ಮ ಜೀವನಾಧಾರವಾಗಿದ್ದ ಜಮೀನನ್ನು ಕಿತ್ತುಕೊಳ್ಳಲಾಗುತ್ತಿದೆ. ಇದು ಯಾವ ನ್ಯಾಯ? ಎಂದು ಲಕ್ಷ್ಮಮ್ಮ ಕಣ್ಣೀರು ಹಾಕುತ್ತಿದ್ದಾರೆ. ಭೂಮಿ ಕಳೆದುಕೊಂಡ ಕುಟುಂಬಗಳು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದು, ಅಧಿಕಾರಿಗಳ ಈ ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೆಚ್ಚಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ