
ಬೆಂಗಳೂರು (ಜ.31): ಮಹಾತ್ಮ ಗಾಂಧೀಜಿಯವರ (Mahatma Gandhi) ಆದರ್ಶಗಳು ಸ್ವತಂತ್ರ ಹಾಗೂ ಗಣತಂತ್ರ ಭಾರತದ ಆಧಾರ ಸ್ತಂಭಗಳು. ಜೈಲು ವಾಸ, ಲಾಠಿ ಏಟು ಮುಂತಾದ ಹಲವಾರು ಕಷ್ಟಕಾರ್ಪಣ್ಯಗಳನ್ನು ಅನುಭವಿಸಿಯೂ ತಮ್ಮ ಸತ್ಯ, ಅಹಿಂಸೆಯ ಸಿದ್ಧಾಂತವನ್ನು ಅವರು ಎಂದೂ ಬಿಟ್ಟುಕೊಡಲಿಲ್ಲ. ಅವರ ಬದುಕು ನಮಗೆ ದಾರಿ ದೀಪವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಅಂಗವಾಗಿ ಭಾನುವಾರ ವಿಧಾನಸೌಧ ಆವರಣದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸುತ್ತೇವೆ. ಮಹಾತ್ಮ ಗಾಂಧಿ ವಿಶ್ವದ ನಾಯಕರು. ಸತ್ಯ ಮತ್ತು ಅಹಿಂಸೆಯ ಪ್ರತಿಪಾದಕರು.
ಸತ್ಯ, ಅಹಿಂಸೆ ಮತ್ತು ಶಾಂತಿಯಿಂದಲೇ ಸ್ವತಂತ್ರ ಪಡೆಯುವ ಛಲವನ್ನು ತೊಟ್ಟವರು. ನನ್ನ ಜೀವನವೇ ಒಂದು ಸಂದೇಶ ಎಂದು ಹೇಳಲು ನೈತಿಕವಾಗಿ ಬಹಳ ದೊಡ್ಡ ಶಕ್ತಿ ಇರಬೇಕು. ಅವರ ಬದುಕು ಮತ್ತು ವಿಚಾರಗಳು ನಮಗೆ ಸದಾ ದಾರಿದೀಪವಾಗಿದೆ ಎಂದರು. ಮಹಾತ್ಮ ಗಾಂಧೀಜಿ ಅವರ ಜತೆಗೆ ಸಾವಿರಾರು ಮಂದಿ ಹುತಾತ್ಮರಾಗಿದ್ದಾರೆ. ಸುಭಾಷ್ ಚಂದ್ರಬೋಸ್, ಭಗತ್ಸಿಂಗ್, ಲಾಲಾ ಲಜಪತ್ ರಾಯ್ ಪ್ರಮುಖರು. ಗಾಂಧೀಜಿ ಸೇರಿದಂತೆ ವಿಶೇಷವಾಗಿ ಅನಾಮಧೇಯ ಯೋಧರಿಗೆ ನಮನ ಸಲ್ಲಿಸಬೇಕು ಎಂದು ಕರೆ ನೀಡಿದರು.
'ಮೊಸರಲ್ಲಿ ಕಲ್ಲು ಹುಡುಕಬೇಡಿ' ಸಿದ್ದುಗೆ ಬೊಮ್ಮಾಯಿ ಇತಿಹಾಸದ ಏಟು!
ದೇಶದ ಅಭಿವೃದ್ಧಿಗೆ ಸಂಕಲ್ಪ: ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡು ಸ್ವಾತಂತ್ರ್ಯದ ನಂತರದ ದಿನಗಳನ್ನು ಅವಲೋಕಿಸಿದರೆ 75 ವರ್ಷದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದೇವೆ. ಆದರೆ ಸಾಮಾನ್ಯ ಜನರ ತಮ್ಮ ಬದುಕು, ಜೀವನ ಗುಣಮಟ್ಟಹೆಚ್ಚಿಸಲು ಕೆಲಸ ಮಾಡಬೇಕಿದೆ. 75 ವರ್ಷದಲ್ಲಿ ಮತ್ತಷ್ಟುಕೆಲಸ ಮಾಡಬಹುದಿತ್ತು ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಇದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಭಾರತ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯವಾಗಿಟ್ಟುಕೊಂಡು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದರು. ಇದೇ ವೇಳೆ ಹುತಾತ್ಮರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಆರ್. ಅಶೋಕ್, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ: ಲೋಕಾರ್ಪಣೆಗೊಂಡಿರುವ ಸರ್ಕಾರದ ಮಹತ್ವಾಕಾಂಕ್ಷಿ ಗ್ರಾಮ ಒನ್ ಯೋಜನೆಯನ್ನು ಫೆಬ್ರವರಿ ಅಂತ್ಯದೊಳಗೆ ರಾಜ್ಯಾದ್ಯಂತ ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಈ ಕುರಿತು ಇ-ಆಡಳಿತ, ಆರ್ಡಿಪಿಆರ್, ಕಂದಾಯ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಮತ್ತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. ಗ್ರಾಮ ಒನ್ ಯೋಜನೆಯ ಪರಿಶೀಲನೆ ನಡೆಸಲು ವಾರಕ್ಕೊಮ್ಮೆ ಖುದ್ದು ಗ್ರಾಮ ಒನ್ ಆಪರೇಟರ್ಗಳು, ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದಿದ್ದಾರೆ.
Grama One: 3000 ಸೇವಾಕೇಂದ್ರ ತೆರೆಯಲು ನಿರ್ಧಾರ: ಜ.26ರಿಂದ 12 ಜಿಲ್ಲೆಗಳಲ್ಲಿ ಜಾರಿ!
ಗ್ರಾಮ ಒನ್ನಿಂದ ಸ್ವೀಕರಿಸಿದ ಅರ್ಜಿಗಳ ಶೀಘ್ರ ವಿಲೇವಾರಿ, ಅರ್ಜಿಗಳ ತಿರಸ್ಕಾರಕ್ಕೆ ಕಾರಣಗಳನ್ನು ಎಲ್ಲಾ ಇಲಾಖೆಗಳ ಡ್ರಾಪ್ಡೌನ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಿ, ಅನಗತ್ಯವಾಗಿ ತಿರಸ್ಕೃತ ಮಾಡುತ್ತಿರುವ ಅಕಾರಿ/ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ವಹಿಸಬೇಕು. ಅಲ್ಲದೇ, ಕೆಡಿಪಿ ಸಭೆಯಲ್ಲಿ ಪರಿಶೀಲಿಸಬೇಕು. ಎಲ್ಲಾ ಗ್ರಾಮ ಒನ್ ಆಪರೇಟರ್ಗಳಿಗೆ ಅನ್ವಯಿಸುವಂತೆ ಇ-ಆಡಳಿತ ಇಲಾಖೆಯಿಂದ ನೀತಿ ಸಂಹಿತೆ ಪ್ರಕಟಿಸಿ, ಇದರ ಕಡ್ಡಾಯ ಪಾಲನೆಯನ್ನು ಜಿಲ್ಲಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
ತಾಂತ್ರಿಕ, ಆಡಳಿತಾತ್ಮಕ ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ಗ್ರಾಮ ಒನ್ ಆಪರೇಟರ್ ಗಳಿಗೆ ತರಬೇತಿ ನೀಡಬೇಕು ಮತ್ತು ಸೇವೆಗಳನ್ನು ವಿತರಿಸುವ ಆಡಳಿತಾತ್ಮಕ ಕಾರ್ಯವಿಧಾನಗಳ ತಿಳುವಳಿಕೆ ಇರಬೇಕು. ಇದರಿಂದ ಗ್ರಾಮ ಒನ್ ಆಪರೇಟರ್ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಮತ್ತು ಯೋಜನೆಯು ಹೆಚ್ಚು ಜನಪ್ರಿಯ ಮತ್ತು ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ