
ಬೆಳಗಾವಿ(ಡಿ.21): ಗಡಿ ವಿಚಾರದಲ್ಲಿ ನಾಡದ್ರೋಹಿ ಎಂಇಎಸ್ (MES) ಸಂಘಟನೆಯ ಹಿತಾಸಕ್ತಿಗೆ ತಡೆ ಒಡ್ಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಟಾರ್ಗೆಟ್ ಮಾಡಿದ್ದಾರೆ. ಕನ್ನಡಿಗರ ಪರ ನಿಂತು ಗಡಿ ರಕ್ಷಣೆಯ ಬದ್ಧತೆ ಪ್ರದರ್ಶಿಸಿದ್ದ ಡಿಸಿ ವಿರುದ್ಧ ಲೋಕಸಭೆ ಸ್ಪೀಕರ್ಗೆ ಹಕ್ಕುಚ್ಯುತಿ ದೂರು ಸಲ್ಲಿಸುವ ಮೂಲಕ ಸಂಸದರು ಉದ್ಧಟತನ ಪ್ರದರ್ಶಿಸಿದ್ದಾರೆ.
ಮಹಾರಾಷ್ಟ್ರದ ಏಕನಾಥ್ ಶಿಂಧೆ ಬಣದ ಶಿವಸೇನೆ ಸಂಸದ ಧೈರ್ಯಶೀಲ ಮಾನೆ, ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಕ್ಕುಚ್ಯುತಿ ಉಲ್ಲಂಘನೆಯ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಮಗೆ ಬೆಳಗಾವಿ ಪ್ರವೇಶ ನಿರಾಕರಿಸುವ ಮೂಲಕ ಒಬ್ಬ ಸಂಸದನ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಯು ಪ್ರತಿ ವರ್ಷ 'ಕರಾಳ ದಿನ' ಆಚರಿಸುತ್ತದೆ. ಈ ಬಾರಿ ಈ ದೇಶದ್ರೋಹಿ ಚಟುವಟಿಕೆಗೆ ಬೆಳಗಾವಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸುತ್ತಿದ್ದ ಸಂಸದ ಮಾನೆ ಅವರನ್ನು ಕರ್ನಾಟಕ ಗಡಿಯಲ್ಲೇ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದರು. ಇದು ಸಂಸದರ ಆಕ್ರೋಶಕ್ಕೆ ಕಾರಣವಾಗಿದೆ.
ಗಡಿ ವಿವಾದ ಕೆಣಕಿದ ಮಹಾರಾಷ್ಟ್ರ ಸಂಸದ
ಸಲ್ಲಿಸಿರುವ ದೂರಿನಲ್ಲಿ 1956ರ ಗಡಿ ವಿವಾದವನ್ನು ಮತ್ತೆ ಕೆದಕಿರುವ ಮಾನೆ, ಬೆಳಗಾವಿ ಸೇರಿದಂತೆ 865 ಮರಾಠಿ ಭಾಷಿಕ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಲಾಗಿದೆ. ನಾನು ಮಹಾರಾಷ್ಟ್ರದ ಗಡಿ ವಿವಾದ ಕಾನೂನು ತಜ್ಞರ ಸಮಿತಿಯ ಅಧ್ಯಕ್ಷನಾಗಿದ್ದು, ಕರಾಳ ದಿನದಲ್ಲಿ ಭಾಗವಹಿಸುವುದು ನನ್ನ ಹಕ್ಕಾಗಿದೆ. ನನ್ನ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದಿದ್ದರೂ ಕರ್ನಾಟಕ ಜಿಲ್ಲಾಡಳಿತ ನನ್ನ ಪ್ರವೇಶಕ್ಕೆ ನಿರ್ಬಂಧ ಹೇರಿದೆ ಎಂದು ವಾದಿಸಿದ್ದಾರೆ.
ನಾಡದ್ರೋಹಿಗಳ ವಿರುದ್ಧ ಜಿಲ್ಲಾಡಳಿತದ ದಿಟ್ಟ ಕ್ರಮ
ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಕನ್ನಡ ವಿರೋಧಿ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತೆಗೆದುಕೊಂಡ ನಿರ್ಧಾರವು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಜಿಲ್ಲಾಧಿಕಾರಿಯವರನ್ನು ಟಾರ್ಗೆಟ್ ಮಾಡುತ್ತಿರುವ ಮಹಾರಾಷ್ಟ್ರ ಸಂಸದರ ನಡೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ