ಬಯೋಕಾನ್‌ನಲ್ಲಿ ರೆಡಿಯಾಗ್ತಿದೆ ಮಹಾಮಾರಿ ಕೊರೋನಾಗೆ ಲಸಿಕೆ!

By Kannadaprabha NewsFirst Published Apr 27, 2020, 8:26 AM IST
Highlights

ಕೊರೋನಾಗೆ ಈ ವರ್ಷವೇ ಲಸಿಕೆ ಲಭ್ಯ: ಕಿರಣ್‌ ಶಾ| ‘ಮೇಡ್‌ ಇನ್‌ ಇಂಡಿಯಾ’ ಲಸಿಕೆ ಇದು|  3-4 ಸಣ್ಣ ಕಂಪನಿಗಳಿಂದ ಈ ನಿಟ್ಟಿನಲ್ಲಿ ಯತ್ನ| ಈ ಕಂಪನಿಗಳ ಜತೆ ಬಯೋಕಾನ್‌ ಕೂಡ ಕಾರ‍್ಯ| ಇದೇ ವರ್ಷ ಲಸಿಕೆ ಲಭ್ಯವಾಗುವ ವಿಶ್ವಾಸ

ಬೆಂಗಳೂರು(ಏ.27): ಕೊರೋನಾ ರೋಗ ಅಂಟದಂತೆ ತಡೆಯುವ ಲಸಿಕೆಯಿಲ್ಲದೇ ಪರದಾಡುತ್ತಿರುವ ಈ ಸಂದರ್ಭದಲ್ಲಿ ಆಶಾಕಿರಣ ಮೂಡಿಸುವಂತಹ ಸಮಾಚಾರವನ್ನು ಬೆಂಗಳೂರಿನ ಬಯೋಕಾನ್‌ ಕಂಪನಿ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ನೀಡಿದ್ದಾರೆ. ‘ಕೊರೋನಾ ವೈರಸ್‌ ಸೋಂಕಿಗೆ ಭಾರತದಲ್ಲಿ ಲಸಿಕೆ ತಯಾರಿಸಲಾಗುತ್ತಿದೆ. ಈ ವರ್ಷವೇ ಲಭ್ಯವಾಗಲಿದೆ’ ಎಂದು ಹೇಳಿದ್ದಾರೆ.

ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ‘ಮೂರ್ನಾಲ್ಕು ಸಣ್ಣ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದಲ್ಲಿ ಕೊರೋನಾ ವೈರಸ್‌ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವ ಸೃಜನಶೀಲ ಕಾರ್ಯದಲ್ಲಿ ತೊಡಗಿವೆ. ಆದಷ್ಟುಶೀಘ್ರವಾಗಿ ಕೊರೋನಾ ವೈರಸ್‌ ನಿಯಂತ್ರಿಸುವ ಮೇಡ್‌ ಇನ್‌ ಇಂಡಿಯಾ ಔಷಧಿ ಸಿದ್ಧವಾಗುವ ಭರವಸೆ ಇದೆ’ ಎಂದಿದ್ದಾರೆ.

‘ನಾವೂ ಕೂಡ ಆ ಕಂಪನಿಗಳ ಜತೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ಕೊರೋನಾ ತಡೆಗೆ ಪ್ಲಾಸ್ಮಾ ಥೆರಪಿ ಹೊಸ ಆಶಾಕಿರಣ!

‘ಲಸಿಕೆ ಬಂತೆಂದರೆ ಜನರಲ್ಲಿ ವಿಶ್ವಾಸ ಮೂಡಲಿದೆ. ಚಿಕಿತ್ಸೆ ಲಭ್ಯವಿದೆ ಎಂದು ಜನಮಾನಸದಲ್ಲಿ ಬೇರೂರಿದರೆ ಸೋಂಕಿತರನ್ನು ಜನರು ನೋಡುವ ಮನೋಭಾವ ಬದಲಾಗಿದೆ’ ಎಂದಿದ್ದಾರೆ.

ಪ್ಲಾಸ್ಮಾ ಯಶಸ್ವಿ:

ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿಯಾದ ಹಲವು ಉದಾಹರಣೆಗಳು ಇವೆ. 1918ರ ಸ್ಪಾ್ಯನಿಶ್‌ ಜ್ವರಕ್ಕೆ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಹಾಗೆಯೇ ಕೊರೋನಾದಿಂದ ಗುಣಮುಖರಾದ ರೋಗಿಗಳ ರಕ್ತ ಸಂಗ್ರಹಿಸುವ ವಿಚಾರದ ಕುರಿತು ನಾನು ಕೆಲ ರಾಜ್ಯಗಳ ಜತೆಗೆ ಚರ್ಚಿಸಿದ್ದೇನೆ. ಈ ಪ್ಲಾಸ್ಮಾ ಥೆರಪಿ ಕೊರೋನಾ ವೈರಸ್‌ನ್ನು ನಾಶ ಮಾಡುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾವು ಸುರಕ್ಷಿತ:

ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಅವರು, ‘ರಾಷ್ಟ್ರಮಟ್ಟದ ಲಾಕ್‌ಡೌನ್‌, ಕ್ವಾರಂಟೈನ್‌ ವಿಧಾನ, ವಲಯವಾರು ವಿಭಾಗಗಳಿಂದ ಸೋಂಕು ಹರಡದಂತೆ ನಿಯಂತ್ರಣದಲ್ಲಿ ಇಡಲಾಗಿದೆ. ಸದ್ಯಕ್ಕೆ ನಾವು ಸುರಕ್ಷಿತವಾಗಿದ್ದೇವೆ. ಕಳೆದ ಐದು ವಾರಗಳ ಲಾಕ್‌ಡೌನ್‌ನಿಂದ ಭಾರತ ಹಲವು ಪಾಠಗಳನ್ನು ಕಲಿತಿದೆ. ನಮ್ಮ ದೇಶದ ಆಸ್ಪತ್ರೆಗಳು ರೋಗಿಗಳಿಂದ ಭರ್ತಿಯಾಗಿಲ್ಲ. ಕಡಿಮೆ ಸಂಖ್ಯೆಯ ರೋಗಿಗಳು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದೇಶದಲ್ಲಿ ಶೇ.90ರಷ್ಟುಜನ 60 ವರ್ಷ ಒಳಗಿನವರು. ಪ್ರಪಂಚದಲ್ಲಿ ಶೇ.80ರಷ್ಟುಮೃತಪಟ್ಟವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ’ ಎಂದು ಹೇಳಿದ್ದಾರೆ.

ಈ ಆಸ್ಪತ್ರೆಯ ವೈದ್ಯರು ಸೇರಿ 44 ಸಿಬ್ಬಂದಿಗೆ ಕೊರೋನಾ: ಹಾಸ್ಪಿಟಲ್ ಸೀಲ್!

ಕೊರೋನಾ ನಿಯಂತ್ರಣದಲ್ಲಿ ಕರ್ನಾಟಕ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಕಡಿಮೆ ಸಾವಾಗಿದೆ. ಸೋಂಕಿತ ಪ್ರಕರಣಗಳು ಜಾಸ್ತಿ ಇದ್ದರೂ ಮೃತಪಟ್ಟವರ ಸಂಖ್ಯೆ ಕಡಿಮೆ ಇದೆ. ಮಹಾರಾಷ್ಟ್ರ, ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣವಾಗಬೇಕಿದೆ ಎಂದು ತಿಳಿಸಿದರು.

click me!