ಎಲ್‌ಪಿಜಿ ಕೊರತೆಯಿಂದ ಹೊಟೇಲ್‌ಗಳು ಬಂದ್; ತರಕಾರಿ ವ್ಯಾಪಾರ ಕುಸಿದು ಬೆಲೆಗಳು ಪಾತಾಳಕ್ಕೆ!

Kannadaprabha News   | Kannada Prabha
Published : Mar 15, 2026, 05:26 AM IST
LPG Crisis bengaluru Shuts Hotels Vegetable Prices Crash as Farmers and Traders Struggle

ಸಾರಾಂಶ

LPG Crisis bengaluru ಬೆಂಗಳೂರಿನಲ್ಲಿ ಎಲ್‌ಪಿಜಿ ಪೂರೈಕೆಯ ಕೊರತೆಯಿಂದಾಗಿ ಅನೇಕ ಹೊಟೇಲ್‌ಗಳು ಮುಚ್ಚಿದ್ದು, ತರಕಾರಿಗಳಿಗೆ ಬೇಡಿಕೆ ಕುಸಿದಿದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ವ್ಯಾಪಾರಿಗಳು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು (ಮಾ.15): ಎಲ್‌ಪಿಜಿ ಪೂರೈಕೆ ಇಲ್ಲದೇ ಅನೇಕ ಹೊಟೇಲ್‌ಗಳು ಬಾಗಿಲು ಹಾಕಿದ್ದು, ಮೆನು ಕಡಿತಗೊಳಿಸಿರುವ ಕಾರಣ ಮಾರುಕಟ್ಟೆಗಳಲ್ಲಿ ತರಕಾರಿ ವ್ಯಾಪಾರದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ.

ತರಕಾರಿ ವ್ಯಾಪಾರ ಕಡಿಮೆ ಆಗಿರುವುದರಿಂದ ಬೆಲೆಯೂ ಕಡಿಮೆಯಾಗಿದೆ. ಇದರಿಂದ ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತರಕಾರಿ ಮಾರಾಟದಲ್ಲಿ ಮತ್ತಷ್ಟು ಕುಸಿತವಾಗುವ ಆತಂಕ ಎದುರಾಗಿದೆ.

‘ಕಳೆದ ಎರಡ್ಮೂರು ದಿನಗಳಿಂದ ತರಕಾರಿ ವ್ಯಾಪಾರದಲ್ಲಿ ಕುಸಿತವಾಗಿದೆ. ಶನಿವಾರ ಅರ್ಧದಷ್ಟು ವ್ಯಾಪಾರ ಕಡಿಮೆಯಾಗಿದೆ. ಎಲ್‌ಪಿಜಿ ಕೊರತೆಯಿಂದ ಹೊಟೇಲ್‌ಗಳು ಮುಚ್ಚಿವೆ. ಕೆಲವು ಹೊಟೇಲ್‌ಗಳು ಕಡಿಮೆ ಆಹಾರ ತಯಾರಿಸುತ್ತಿವೆ. ಹೀಗಾಗಿ, ಕಡಿಮೆ ತರಕಾರಿ ಖರೀದಿ ಮಾಡುತ್ತಿದ್ದಾರೆ. ಸಗಟು ರೂಪದಲ್ಲಿ ಹೋಟೆಲ್‌ನವರು ಪ್ರಮುಖವಾಗಿ ತರಕಾರಿ ಖರೀದಿಸುತ್ತಾರೆ. ಅವರೇ ನಮಗೆ ಪ್ರಮುಖ ಗ್ರಾಹಕರು ಎಂದು ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯ ಸಗಟು ವ್ಯಾಪಾರಿ ರಾಜು ಹೇಳಿದರು.

ಖರೀದಿ ಕಡಿಮೆಯಾಗಿರುವುದರಿಂದ ಬೆಲೆ ಕುಸಿತವಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಕ್ಯಾರೇಟ್ 20 ರು. ಕೆ.ಜಿ, ಮೂಲಂಗಿ 10 ರು. ಕೆ.ಜಿ. ಬದನೆಕಾಯಿ 20 ರು.ಯಿಂದ 30 ರು. ಕೆ.ಜಿಯಾಗಿದೆ. ಉಳಿದ ಬಹುತೇಕ ತರಕಾರಿಗಳ ಬೆಲೆ 40 ರು. ಆಸುಪಾಸು ಇದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿಯೇ ಇರುತ್ತದೆ. ಆದರೆ, ಎಲ್‌ಪಿಜಿ ಸಮಸ್ಯೆಯಿಂದ ಬೆಲೆ ಕುಸಿತವಾಗಿದೆ. ಆದಷ್ಟು ಬೇಗ ಯುದ್ಧ ಮುಗಿಯಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ರಾಜು ಹೇಳಿದರು.

ತರಕಾರಿ ಮಾರಾಟದಲ್ಲಿ ಶೇ.10ರಷ್ಟು ಕುಸಿತವಾಗಿದೆ. ಮನೆಗಳಿಗೆ ಗ್ಯಾಸ್ ಪೂರೈಕೆ ಇರುವುದರಿಂದ ಗ್ರಾಹಕರು ಖರೀದಿಸುತ್ತಿದ್ದಾರೆ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ನಮಗೆ ಸಮಸ್ಯೆ ಆಗುತ್ತದೆ. ಯುಗಾದಿ ಹಬ್ಬದ ಬಳಿಕ ಮದುವೆ ಸೀಸನ್ ಆರಂಭವಾಗುತ್ತದೆ. ಅಷ್ಟರೊಳಗೆ ಪರಿಸ್ಥಿತಿ ಸುಧಾರಣೆ ಆಗಬೇಕು. ಏಕೆಂದರೆ, ಗ್ಯಾಸ್ ಇಲ್ಲದಿದ್ದರೆ ಮದುವೆಗಳಲ್ಲಿ ಆಹಾರ ತಯಾರಿಯೂ ಕಷ್ಟವಾಗುತ್ತದೆ. ಸೌದೆ ಒಲೆ ಬಳಸಿದರೂ ಬೃಹತ್ ಪ್ರಮಾಣದಲ್ಲಿ ಆಹಾರವನ್ನು ತ್ವರಿತವಾಗಿ ಆಹಾರ ತಯಾರಿಸಲು ಕಷ್ಟವಾಗುತ್ತದೆ ಎಂದು ತುಮಕೂರು ರಸ್ತೆಯ ದಾಸನಪುರದಲ್ಲಿ ತರಕಾರಿ ಮಂಡಿ ಹೊಂದಿರುವ ಪ್ರಕಾಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕಳೆದ ಒಂದು ವಾರದಿಂದ ವ್ಯಾಪಾರ ಕಡಿಮೆಯಾಗಿದೆ. ಹೊಟೇಲ್‌ಗಳು ಮುಚ್ಚಿರುವುದರಿಂದ ನಮಗೆ ವ್ಯಾಪಾರ ಬಹಳಷ್ಟು ಕಡಿಮೆಯಾಗಿದೆ. ಮಾರಾಟಕ್ಕೆ ತಂದ ತರಕಾರಿ ಹಾಗೆಯೇ ಉಳಿದುಕೊಳ್ಳುತ್ತಿವೆ. ನಾವು ಕೂಡ ಇನ್ಮುಂದೆ ಕಡಿಮೆ ತರಬೇಕು ಎಂದು ನುಗ್ಗೇಕಾಯಿ ಸೇರಿದಂತೆ ಇನ್ನಿತರ ತರಕಾರಿ ಮಾರುವ ರತ್ನಮ್ಮ ಅಳಲು ತೋಡಿಕೊಂಡರು.

ರೈತರ ಮೇಲೂ ಪರಿಣಾಮ

ಮಾರುಕಟ್ಟೆಯಲ್ಲಿ ತರಕಾರಿ ಖರೀದಿ, ಮಾರಾಟವಾಗದಿದ್ದರೆ ಅದರ ಪರಿಣಾಮ ತರಕಾರಿ ಬೆಳೆಯುವ ರೈತರ ಮೇಲೂ ಬೀಳುತ್ತದೆ. ತರಕಾರಿ ಖರೀದಿಯಾಗದಿದ್ದರೆ, ರೈತರು ಬೆಳೆದ ತರಕಾರಿಗಳು ಮಾರುಕಟ್ಟೆಗೆ ಬರಲು ಸಮಸ್ಯೆ ಆಗುತ್ತದೆ. ಗ್ಯಾಸ್ ಪೂರೈಕೆ ಕೊರತೆ ಪರಿಣಾಮ ಆರಂಭದಲ್ಲಿ ಹೊಟೇಲ್ ಉದ್ಯಮದ ಮೇಲೆ ಬಿದ್ದಿದ್ದರೂ ಮುಂದಿನ ದಿನಗಳಲ್ಲಿ ಅನ್ನದಾತರನ್ನು ಕಾಡುವ ಆತಂಕ ಶುರುವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು: ಕಾರ್ ಮೇಲೆ ಉರುಳಿ ಬಿದ್ದ ಕಟ್ಟಿಗೆ ತುಂಬಿದ ಲಾರಿ
ಬಳ್ಳಾರಿಯಲ್ಲಿ ₹55 ಕೋಟಿ ವೆಚ್ಚದಲ್ಲಿ ಇನ್‌ಕ್ಯುಬೇಷನ್‌ ಕೇಂದ್ರ: ಸಚಿವ ಪ್ರಿಯಾಂಕ್‌ ಖರ್ಗೆ