ಲೋಕಸಭಾ ಚುನಾವಣೆ: ಚಿತ್ರದುರ್ಗ ಕ್ಷೇತ್ರದಿಂದ ಮಾದಾರ ಶ್ರೀ ಕಣಕ್ಕಿಳಿಸಲು ಬಿಜೆಪಿ ಚಿಂತನೆ!

By Kannadaprabha NewsFirst Published Feb 13, 2024, 4:07 AM IST
Highlights

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಚುನಾವಣಾ ಅಖಾಡಕ್ಕೆ ಕರೆತರುವ ಪ್ರಯತ್ನ ಮತ್ತೆ ಮುನ್ನೆಲೆಗೆ ಬಂದಿದೆ.

ವಿಜಯ್ ಮಲಗಿಹಾಳ

 ಬೆಂಗಳೂರು (ಫೆ.13): ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಚುನಾವಣಾ ಅಖಾಡಕ್ಕೆ ಕರೆತರುವ ಪ್ರಯತ್ನ ಮತ್ತೆ ಮುನ್ನೆಲೆಗೆ ಬಂದಿದೆ.

ಕಳೆದ 2019ರ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನವನ್ನು ನಡೆಸಿ ವಿಫಲವಾಗಿದ್ದ ಸಂಘ ಪರಿವಾರ ಮತ್ತು ಬಿಜೆಪಿ ಈ ಬಾರಿಯ ಚುನಾವಣೆಗೂ ಮತ್ತೊಮ್ಮೆ ಪ್ರಯತ್ನ ಮುಂದುವರೆಸಿವೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಚಿತ್ರದುರ್ಗ ಕ್ಷೇತ್ರದ ಹಾಲಿ ಸಂಸದರಾಗಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿರುವ ಎ.ನಾರಾಯಣಸ್ವಾಮಿ ಅವರಿಗೆ ಈ ಬಾರಿ ಟಕೆಟ್ ನೀಡುವ ಬಗ್ಗೆ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ನಾರಾಯಣಸ್ವಾಮಿ ಅವರಿಗೂ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಕಡಮೆಯಾಗಿದೆ. ಅವರು ರಾಜ್ಯ ರಾಜಕಾರಣಕ್ಕೆ ವಾಪಸಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಾಗೆ ನೋಡಿದರೆ 2019ರ ಚುನಾವಣೆಯಲ್ಲಿ ನಾರಾಯಣಸ್ವಾಮಿ ಅವರ ಹೆಸರು ಕೊನೆಯ ಕ್ಷಣದಲ್ಲಿ ನಿರ್ಧಾರವಾಗಿತ್ತು. ಆಗಲೂ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಕಣಕ್ಕಿಳಿಸಲು ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಪ್ರಯತ್ನ ನಡೆಸಿ ವಿಫಲರಾಗಿದ್ದರು. ಹೀಗಾಗಿ, ಬೆಂಗಳೂರಿನ ಆನೇಕಲ್‌ ಕ್ಷೇತ್ರದ ಮಾಜಿ ಶಾಸಕರಾಗಿದ್ದ ನಾರಾಯಣಸ್ವಾಮಿಗೆ ಚಿತ್ರದುರ್ಗದ ಲೋಕಸಭಾ ಟಿಕೆಟ್ ನೀಡಲಾಗಿತ್ತು. ಮಾದಾರ ಚನ್ನಯ್ಯ ಸ್ವಾಮೀಜಿ ಅವರೂ ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಸಂಘ ಪರಿವಾರದ ಹಲವು ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅದೇ ರೀತಿ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರೂ ಸ್ವಾಮೀಜಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 

ಕಾಂಗ್ರೆಸ್ ಸರ್ಕಾರ ರಾಜ್ಯಪಾಲರು ಸುಳ್ಳು ಹೇಳುವಂತೆ ಮಾಡಿದೆ, ಇಷ್ಟೊಂದು ಸಪ್ಪೆ ಭಾಷಣ ಯಾವತ್ತೂ ಕೇಳಿರಲಿಲ್ಲ: ಬಿಜೆಪಿ ಕಿಡಿ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ರಾಜಕಾರಣದಲ್ಲಿ ಮುಂಚೂಣಿಗೆ ಬಂದ ರೀತಿಯಲ್ಲೇ ಕರ್ನಾಟಕದ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಮುಂಚೂಣಿಗೆ ಕರೆತರಬೇಕು ಎಂಬುದು ಸಂಘ ಪರಿವಾರದ ಲೆಕ್ಕಾಚಾರ. ಆ ಲೆಕ್ಕಾಚಾರ ಈ ಬಾರಿಯಾದರೂ ಈಡೇರುವುದೇ ಎಂಬುದನ್ನು ಕಾದು ನೋಡಬೇಕು. ಪರಿಶಿಷ್ಟ ವರ್ಗದ ಎಡಗೈ ಸಮುದಾಯದ ಮತದಾರರು ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದ್ದಾರೆ. ಆ ಸಮುದಾಯಕ್ಕೆ ಸೇರಿದ ಮಠದ ಸ್ವಾಮೀಜಿಯೇ ಬಿಜೆಪಿಯಿಂದ ಅಭ್ಯರ್ಥಿಯಾಗಿ ಚುನಾವಣೆಗೆ ಕಣಕ್ಕಿಳಿದಲ್ಲಿ ರಾಜ್ಯಾದ್ಯಂತ ಹೆಚ್ಚಿನ ಬಲ ಬಂದಂತಾಗುತ್ತದೆ ಎಂಬ ನಿರೀಕ್ಷೆ ಸಂಘ ಪರಿವಾರದ್ದು. 

ರಾಜ್ಯಪಾಲರಿಂದ ಸುಳ್ಳು ಹೇಳಿಸುವ ಕೆಲಸ ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ

ಈವರೆಗೆ ಸ್ವಾಮೀಜಿಗಳು ಈ ಬಗ್ಗೆ ಯಾವುದೇ ನಿರ್ಧಾರ ಅಥವಾ ನಿರ್ಣಯ ಕೈಗೊಂಡಿಲ್ಲ. ಆದರೆ, ಚುನಾವಣಾ ರಾಜಕಾರಣಕ್ಕೆ ಪ್ರವೇ‍ಶಿಸುವ ಬಗ್ಗೆ ವಿರೋಧವನ್ನೂ ತೋರಿಲ್ಲ. ನಿರ್ಲಿಪ್ತ ಮನೋಭಾವ ಹೊಂದಿದ್ದಾರೆ. ಚಿಂತನೆ ನಡೆಸಿದ್ದಾರೆ. ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಅವರು ಕೈಗೊಳ್ಳುವ ನಿರ್ಧಾರದ ಮೇಲೆ ರಾಜ್ಯದ ಇತರ ಮೀಸಲು ಕ್ಷೇತ್ರಗಳಲ್ಲಿ ಪರಿಶಿಷ್ಟ ವರ್ಗದ ಯಾವ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ನಿರ್ಧಾರವಾಗಲಿದೆ. ಅಂದರೆ, ಸ್ವಾಮೀಜಿಗಳು ಸ್ಪರ್ಧಿಸಲು ಒಪ್ಪಿದಲ್ಲಿ ಇತರ ಮೀಸಲು ಕ್ಷೇತ್ರಗಳಲ್ಲಿ ಪರಿಶಿಷ್ಟ ವರ್ಗದ ಎಡಗೈ ಸಮುದಾಯದವರನ್ನು ಬಿಟ್ಟು ಬೇರೆ ಸಮುದಾಯಗಳಿಗೆ ಆದ್ಯತೆ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

click me!