
ಕೊಪ್ಪಳ(ಅ.25): ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮ ದಲ್ಲಿ ಹತ್ತು ವರ್ಷ ಹಿಂದೆ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದಲ್ಲಿ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಆದೇಶಿಸಿದೆ. ಇದೇ ವೇಳೆ ಇನ್ನೂ ಮೂವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ₹2 ಸಾವಿರ ದಂಡ ಹೇರಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ. ಚಂದ್ರಶೇಖರ ಈ ತೀರ್ಪು ನೀಡಿದ್ದು, ಅಸ್ಪೃಶ್ಯತೆ ಪ್ರಕರಣವೊಂದರಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಜೀವಾವಧಿ ಶಿಕ್ಷೆಯಾಗಿರುವುದು ದೇಶದಲ್ಲೇ ಇದೇ ಮೊದಲು ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ. ಜೀವಾವಧಿ ಶಿಕ್ಷೆಗೆ ಗುರಿ ಯಾದವರೆಲ್ಲರೂ ಸವರ್ಣೀಯರಾಗಿದ್ದಾರೆ.
ಕೊಪ್ಪಳ: ಇದಪ್ಪ ಛಲ ಅಂದ್ರೆ, 10ಕ್ಕೂ ಅಧಿಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಹಳ್ಳಿ ಹುಡುಗ
ಏನಿದು ಪ್ರಕರಣ?:
2014ರಲ್ಲಿ ಮರಕುಂಬಿ ಗ್ರಾಮದಲ್ಲಿ ಜಾತಿ ಸಂಘರ್ಷವಾಗಿತ್ತು. ಗ್ರಾಮದ ದಲಿತರಿಗೆ ಕ್ಷೌರದಂಗಡಿಯಲ್ಲಿ ಮತ್ತು ಹೋಟೆಲ್ನಲ್ಲಿ ಪ್ರವೇಶ ಇರಲಿಲ್ಲ. ಇದನ್ನು ಪ್ರಶ್ನಿಸಿದ್ದು ವಿವಾದಕ್ಕೆ ತಿರುಗಿ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ನಡೆದಿತ್ತು. ಇದಾದ ಮೇಲೆ ಗ್ರಾಮದಸವರ್ಣೀಯ ಯುವಕ ಮಂಜುನಾಥ ಎಂಬಾತ ಗಂಗಾವತಿಗೆ ಸಿನಿಮಾ ನೋಡಲು ಹೋಗಿದ್ದು, ಟಿಕೆಟ್ ಪಡೆಯುವ ವೇಳೆ ಆತನ ಮೇಲೆ ಹಲ್ಲೆ ನಡೆದಿತ್ತು.
ಗ್ರಾಮಕ್ಕೆ ಆಗಮಿಸಿದ ಆತ ದಲಿತರು ಸೇರಿಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿದ್ದರಿಂದ ಸವರ್ಣೀಯ ರೆಲ್ಲರು ಸೇರಿ ಅಂದು ಸಂಜೆ ದಲಿತರ ಕೇರಿಗೆ ನುಗ್ಗಿ ದಾಂಧಲೆ ಮಾಡಿದ್ದಲ್ಲದೆ, ಕೇರಿಯ ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ದಲಿತಪರ ಹೋರಾಟಗಾರ ಗಂಗಾಧರ ಸ್ವಾಮಿ ಮನೆಗೂ ನುಗ್ಗಿ ಹೊಡೆದಿದ್ದರು.
ಗಲಾಟೆ ವೇಳೆ ಗುಡಿಸಲಲ್ಲಿ ಯಾರೂ ಇಲ್ಲದ ಕಾರಣ ಬೆಂಕಿ ಬಿದ್ದರೂ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಆದರೆ ಗಲಾಟೆಯಲ್ಲಿ ಕೇರಿಯಲ್ಲಿನ ಅನೇಕರು ಗಾಯಗೊಂಡು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಈ ಕುರಿತು ಭೀಮೇಶ್ ಎಂಬವರು ಆ.29, 2014ರಂದು ಗಂಗಾವತಿ ಪೊಲೀಸ್ ಠಾಣೆಯಲ್ಲಿ 98 ಆರೋಪಿಗಳು ಸೇರಿ ಇತರರ ವಿರುದ್ದ ದೂರು ದಾಖಲು ಮಾಡಿದ್ದರು. ದೂರು ಸ್ವೀಕಾರ ಮಾಡಿ ತನಿಖೆ ನಡೆಸಿದ್ದ ಪೊಲೀಸರು 117 ಜನರ ವಿರುದ್ಧ ಎಫ್ಐಆರ್ ದಾಖಲಿಸಿದರು.
ಈ ಪ್ರಕರಣ ಕುರಿತು ಸುದೀರ್ಘ ಒಂಬತ್ತು ವರ್ಷಗಳ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 101 ಮಂದಿವಿರುದ್ದ ಅ.21ರಂದು ಆರೋಪಸಾಬೀತಾಗಿದೆ ಎಂದು ಹೇಳಿತ್ತು. ಇದೀಗ ಶಿಕ್ಷೆಯ ಪ್ರಮಾಣ ಅ ಪ್ರಕಟವಾ ಗಿದ್ದು, 9: 98 ಜನರಿಗೆ ಜೀವಾವಧಿ ಶಿಕ್ಷೆಯಾಗಿದೆ. ಪ್ರಕರಣದಲ್ಲಿ ಪರಿಶಿಷ್ಟ ಸಮುದಾಯದ ಮೂವರಿಗೆ 5 ವರ್ಷ ಶಿಕ್ಷೆ ಮತ್ತು ₹2 ಸಾವಿರ ದಂಡ ವಿಧಿಸಲಾಗಿದೆ. ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕಿ ಅಪರ್ಣಾ ಬಂಡಿ ವಾದ ಮಂಡಿಸಿದ್ದಾರೆ.
ಕೊಪ್ಪಳ: ಬರೀ ಹೆಣ್ಣು ಹೆತ್ತಳು ಅಂದಿದ್ದಕ್ಕೆ ಆತ್ಮಹತ್ಯೆ, 4 ತಿಂಗಳ ಹಸುಗೂಸು ಸೇರಿ 3 ಮಕ್ಕಳು ತಬ್ಬಲಿ!
ಮತ್ತೆ ಜೈಲಿಗೆ:
ಶಿಕ್ಷೆ ಪ್ರಮಾಣ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ತೀರ್ಪು ಪ್ರಕಟವಾದ ನಂತರ ಭಾರೀ ಬಂದೋಬಸ್ತ್ನಲ್ಲಿ ಅವರನ್ನು ವಾಪಸ್ ಜೈಲಿಗೆ ಕಳುಹಿಸಲಾಯಿತು.
ಏನಿದು ಪ್ರಕರಣ?
• ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರದಂಗಡಿ, ಹೋಟೆಲ್ನಲ್ಲಿ ಪ್ರವೇಶ ಇರಲಿಲ್ಲ
• ಇದನ್ನು ದಲಿತರು ಪ್ರಶ್ನಿಸಿದಾಗ 2014ರಲ್ಲಿ ಸವರ್ಣೀಯರು- ದಲಿತರ ನಡುವೆ ಜಗಳವಾಗಿತ್ತು ದ್ವೇಷ ಬೆಳೆದಿತ್ತು
• ಗ್ರಾಮದ ಮಂಜುನಾಥ ಎಂಬ ಸವರ್ಣೀಯ ಸಮುದಾಯದ ವ್ಯಕ್ತಿ ಗಂಗಾವತಿಗೆ ಹೋಗಿದ್ದಾಗ ಹಲ್ಲೆಯಾಗಿತ್ತು
• ಗ್ರಾಮದ ದಲಿತರೇ ಹಲ್ಲೆ ಮಾಡಿದ್ದಾರೆಂದು ಸವರ್ಣೀಯರು ದಲಿತರ ಮೇಲೆ ದೌರ್ಜನ್ಯ, ದಾಂಧಲೆ ನಡೆಸಿದ್ದರು
• ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಗುಡಿಸಲಿನಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಹಾನಿಯಾಗಿರಲಿಲ್ಲ
ತೀರ್ಪು ತಿಳಿದು ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಕುಟುಂಬಸ್ಥರು
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಆರೋಪಿಗಳ ಸಂಬಂಧಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿ ಅವರೆಲ್ಲರೂ ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಕಂಡು ಬಂತು. ಗ್ರಾಮದ ಬಹುತೇಕರುನ್ಯಾಯಾಲಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ