
ಬೆಂಗಳೂರು (ಜೂ.20): ಗೃಹ ಸಚಿವನಾಗಿ ನಾನು ಪ್ರಶ್ನೆಗಳನ್ನು ಕೇಳಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ಕ್ಕೆ. ಆ ಸಂಘಟನೆಯೇ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ ಅಥವಾ ಬೇರೆ ಯಾರನ್ನಾದರೂ ನಿಯೋಜಿಸಲಿ. ಅದು ಬಿಟ್ಟು ಯಾವುದೇ ವಕೀಲರು ಬರೆಯುವ ಲೇಖನ, ಟ್ವೀಟ್ ಅಥವಾ ಇನ್ನಾವ ಅಭಿಪ್ರಾಯಗಳಿಗೂ ನಾನು ಉತ್ತರ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನನ್ನ ಪ್ರಶ್ನೆಗಳಿಗೆ ಆರ್ಎಸ್ಸೆಸ್ಸೇ ಉತ್ತರ ಕೊಡಲಿ. ಅದು ಬಿಟ್ಟು ತನ್ನ ಗುಲಾಮರನ್ನು ಕಳುಹಿಸುವುದು ಬೇಡ. ಅವರ ಜತೆ ನಾನು ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೋಂದಣಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಆರ್ಎಸ್ಎಸ್ಗೆ ಪತ್ರ ಬರೆದಿದ್ದೇನೆ. ಆ ಬಗ್ಗೆ ವಕೀಲರು ಏಕೆ ಮಾತನಾಡುತ್ತಿದ್ದಾರೆ? ಅವರೇನು ಆರ್ಎಸ್ಎಸ್ನ ಮುಖವಾಣಿಯೇ? ಸಂಪಾದಕೀಯ ಲೇಖನ ಬರೆಯುವುದು, ಟ್ವೀಟ್ ಮಾಡುವುದು ಹಾಗೂ ಅಭಿಪ್ರಾಯ ಹೇಳುವುದೆಲ್ಲಾ ಏನಿದು ಅಸಂಬದ್ಧ? ನಾನು ಸಂಘಕ್ಕೆ ಸ್ಪಷ್ಟ ಪ್ರಶ್ನೆ ಕೇಳಿದ್ದೇನೆ. ಅವರೇ ಬಂದು ಉತ್ತರಿಸಲಿ. ಅಥವಾ ಬೇರೆ ಯಾರನ್ನಾದರೂ ಕಳುಹಿಸುವುದಿದ್ದರೆ ಕಳುಹಿಸಲಿ ಎಂದು ಹೇಳಿದರು.
ನನ್ನ ಪ್ರಶ್ನೆಗಳಿಗೆ ಸಂಘದ ಲೆಟರ್ಹೆಡ್ನಲ್ಲಿ ಉತ್ತರ ಕೊಡಲಿ. ಅವರ ಬಳಿ ಲೆಟರ್ ಹೆಡ್ ಇದೆಯೇ? ಅದು ಇಲ್ಲ. ಅವರು ನಮ್ಮ ಬಳಿಗೆ ಬರಲಿ, ಮಾತನಾಡಲಿ. ನಾವು ಹೀಗೆ ಮಾಡಿದ್ದೇವೆ ಎಂದು ಹೇಳಲಿ. ಅದು ಬಿಟ್ಟು ಗುಲಾಮರನ್ನು ನನ್ನ ಜತೆ ಚರ್ಚೆಗೆ ಕಳುಹಿಸುವುದು ಬೇಡ. ಈ ವಿಚಾರವಾಗಿ ವಕೀಲರು ಹಾಗೂ ಬಿಜೆಪಿ ನಾಯಕರು ಸೇರಿ ಯಾರ ಜತೆಗೂ ಚರ್ಚೆ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: RSS Registration issue: ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ
ನಾನು ಕರ್ನಾಟಕದ ಗೃಹ ಸಚಿವನಾಗಿ ಏನು ಹೇಳುತ್ತಿದ್ದೇನೆ ಎಂದು ನನಗೆ ಗೊತ್ತಿದೆ. ಇಷ್ಟೊಂದು ದೊಡ್ಡ ಸಂಘಟನೆಯನ್ನು ನಮ್ಮ ರಾಜ್ಯದಲ್ಲಿ ನಡೆಸುತ್ತೀರಿ ಎಂದಾದರೆ ನೋಂದಣಿ ಮಾಡಬೇಕು. ಯಾವ ಕಾನೂನಿನಡಿ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಬೇಕು. ಮೋಹನ ಭಾಗವತ್ ಅವರಷ್ಟೇ ಸಮಾನ ಹಕ್ಕುಗಳು ನನಗೂ ಇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ