
ಬೆಂಗಳೂರು: ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ರಾಜಕಾರಣದತ್ತ ಗಮನ ಹರಿಸುವ ಸಾಧ್ಯತೆಯಿದ್ದು, ನಂತರವಷ್ಟೇ ರಾಜ್ಯ ನಾಯಕತ್ವ ಹಾಗೂ ಸಚಿವ ಸಂಪುಟ ಪುನಾರಚನೆಯಂಥ ವಿಚಾರಗಳ ಬಗ್ಗೆ ಹೈಕಮಾಂಡ್ ಚರ್ಚೆ ಆರಂಭಿಸಬಹುದು ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಮೇ 10ರವರೆಗೂ ಕೇರಳ ಸಿಎಂ ಆಯ್ಕೆ ವಿಚಾರದಲ್ಲಿ ಸಂಪೂರ್ಣ ವ್ಯಸ್ತವಾಗಿರಲಿದೆ. ನಂತರ ಅಂದರೆ ಬಹುತೇಕ ಮೇ 13 ಅಥವಾ 14ರ ವೇಳೆಗೆ ರಾಜ್ಯ ರಾಜಕಾರಣದ ಬಗ್ಗೆ ಗಮನ ಹರಿಸಲು ಮನಸ್ಸು ಮಾಡಬಹುದು. ಹೀಗಾದಲ್ಲಿ ಹೈಕಮಾಂಡ್ ಸಿಎಂ ಹಾಗೂ ಡಿಸಿಎಂ ಅವರನ್ನು ದೆಹಲಿಗೆ ಕರೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಕರೆದಾಗ ದೆಹಲಿಗೆ ತೆರಳುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಇದರರ್ಥ ಹೈಕಮಾಂಡ್ ಬುಲಾವ್ ನೀಡದೆ ತಾವು ದೆಹಲಿಗೆ ಯಾವ ವಿಚಾರದ ಬಗ್ಗೆಯೂ ಚರ್ಚೆ ನಡೆಸಲು ತೆರಳುವುದಿಲ್ಲ ಎಂದರ್ಥ ಬರುತ್ತದೆ.
ಆದರೆ, ರಾಜ್ಯದಲ್ಲಿ ನಾಯಕತ್ವ ಹಾಗೂ ಸಚಿವ ಸಂಪುಟ ಪುನಾರಚನೆಯಂಥ ವಿಚಾರಗಳ ಬಗ್ಗೆ ತೀವ್ರ ಒತ್ತಡವಿರುವುದರಿಂದ ಈ ಬಗ್ಗೆ ಒಂದು ಸ್ಪಷ್ಟತೆಯನ್ನು ಹೈಕಮಾಂಡ್ ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೇರಳದ ಬೆಳವಣಿಗೆಗಳು ಮುಗಿದ ನಂತರ ರಾಜ್ಯ ನಾಯಕರನ್ನು ದೆಹಲಿಗೆ ಆಹ್ವಾನಿಸಿ ನಾಯಕತ್ವ ಹಾಗೂ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಚರ್ಚೆ ಆರಂಭಿಸಬಹುದು ಎನ್ನಲಾಗುತ್ತಿದೆ.
ಒಂದು ಮೂಲಗಳ ಪ್ರಕಾರ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಳ್ಳುವ ಒಳಗೆ ಈ ವಿಚಾರಗಳನ್ನು ಇತ್ಯರ್ಥಪಡಿಸುವ ಇರಾದೆ ಹೈಕಮಾಂಡ್ಗೆ ಇದೆ ಎನ್ನುತ್ತವೆ. ಆದರೆ, ಅದನ್ನು ಅಲ್ಲಗಳೆಯುವ ಮತ್ತೊಂದು ಬಣ, ಸರ್ಕಾರಕ್ಕೆ ಮೂರು ವರ್ಷ ತುಂಬುವವರೆಗೂ ಇಂತಹ ವಿಚಾರದಲ್ಲಿ ಹೈಕಮಾಂಡ್ ಆತುರ ತೋರುವುದಿಲ್ಲ. ಆದರೆ, ಮೂರು ವರ್ಷ ಪೂರ್ಣಗೊಂಡ ಅಂದರೆ ಮೇ 20ರ ನಂತರ ಈ ವಿಚಾರಗಳ ಬಗ್ಗೆ ಚರ್ಚೆ ತೀವ್ರಗೊಳ್ಳಬಹುದು ಎನ್ನುತ್ತದೆ.
ಪಂಚರಾಜ್ಯ ಚುನಾವಣೆಯಲ್ಲಿ ಕೇರಳ ಹೊರತುಪಡಿಸಿ ಉಳಿದೆಡೆ ಕಾಂಗ್ರೆಸ್ಗೆ ಪೂರಕ ಫಲಿತಾಂಶ ಬಂದಿಲ್ಲ. ಕರ್ನಾಟಕದಲ್ಲಿ ಸದೃಢ ಸರ್ಕಾರವಿದ್ದರೂ ಅಧಿಕಾರ ಹಸ್ತಾಂತರ ಕುರಿತ ಗೊಂದಲಗಳಿಂದ ಬಣ ರಾಜಕೀಯ ಜೋರು ಪಡೆಯುತ್ತಿದೆ. ಇದು ಮುಂದಿನ ವಿಧಾನಸಭೆ ಚುನಾವಣೆ ವೇಳೆ ಪಕ್ಷಕ್ಕೆ ನಷ್ಟ ಉಂಟಾಗಬಹುದು ಎಂಬ ಕಾರಣಕ್ಕೆ ಹೈಕಮಾಂಡ್ ಮಧ್ಯಪ್ರವೇಶಕ್ಕೆ ಮುಂದಾಗಿದೆ ಎನ್ನಲಾಗಿದೆ.
ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸುವ ಪ್ರಕ್ರಿಯೆ ಮತ್ತಷ್ಟು ಗೊಂದಲ ಸೃಷ್ಟಿಗೆ ಕಾರಣವಾಗಬಾರದು ಎಂಬ ಕಾರಣಕ್ಕೆ ಇಬ್ಬರನ್ನೂ ವಿಶ್ವಾಸಕ್ಕೆ ಪಡೆದು ಅಳೆದು ತೂಗಿ ನಿರ್ಧಾರ ಮಾಡಲು ಹೈಕಮಾಂಡ್ ಮುಂದಾಗಿದೆ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಬ್ಬರನ್ನೂ ಕರೆದು ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಇಬ್ಬರೂ ನಾಯಕರು ಹಾಗೂ ಅವರ ಬಣವೂ ಬದ್ಧವಾಗಿರಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ