ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: KSCA ಅಧಿಕಾರಿಗಳಿಗೆ ಮಧ್ಯಂತರ ರಿಲೀಫ್, ನಿಖಿಲ್‌ ಮೇಲೆ ಬಿಗಿಕ್ರಮ

Published : Jun 06, 2025, 05:02 PM IST
KSCA three staff get Relief

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಸಿಎ ಅಧಿಕಾರಿಗಳ ಮೇಲಿನ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ತನಿಖೆಗೆ ತಡೆ ನೀಡದೆ, ಆರೋಪಿಗಳ ಮೇಲೆ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ.

ಬೆಂಗಳೂರು (ಜೂ.06): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟಿನ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಡಳಿತಾಧಿಕಾರಿಗಳ ಮೇಲೆ ದಾಖಲಾಗಿದ್ದ 3 ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಅರ್ಜಿ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ಪೀಠವು ತನಿಖೆಗೆ ತಡೆ ಕೊಡುವುದಿಲ್ಲ. ಯಾವ ರಕ್ಷಣೆ ಅಗತ್ಯವಿದೆ ನೋಡೋಣ. ಇನ್ನು ಆರೋಪಿ-2, 3 ಹಾಗೂ 4ನೇ ಆರೋಪಿಗಳ ಮೇಲೆ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದ್ದಾರೆ. ಜೊತೆಗೆ ಅರ್ಜಿ ವಿಚಾರಣೆ ಜೂ.9ಕ್ಕೆ ಮುಂದೂಡಿಕೆ ಮಾಡಲಾಯಿತು.

ಬೆಂಗಳೂರಿನ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಸಿಎ ಆಡಳಿತಾಧಿಕಾರಿಗಳನ್ನು ಬಂಧಿಸುವಂತೆ ಮಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮೇಲೆ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೆಎಸ್‌ಸಿಎ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಕುಮಾರ್ ಪೀಠವು ಸರ್ಕಾರಿ ಪರ ಪ್ರಧಾನ ವಕೀಲರು (ಅಟಾರ್ನಿ ಜನರಲ್) ಒಟ್ಟು ಮೂರು ಎಫ್ಐಆರ್ ಗಳು ದಾಖಲಾಗಿವೆ ಎಂದರು. ಒಂದೇ ಘಟನೆಗೆ ಹಲವು ಎಫ್ಐಆರ್ ಗಳು ಯಾಕೆ ? ಆರೋಪಿ ಪರ ವಕೀಲರಾದ ಶ್ಯಾಮ್ ಸುಂದರ್ ಪ್ರಶ್ನೆ ಮಾಡಿದರು.

ಎಲ್ಲಾ ಎಫ್ಐಆರ್ ಗಳನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಆರ್ಸಿಬಿ, ಡಿಎನ್ಎ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಆಗ ನ್ಯಾಯಮೂರ್ತಿಗಳು ಮ್ಯಾಜಿಸ್ಟ್ರಿಯಲ್ ವಿಚಾರಣೆಗೆ ಆದೇಶಿಸಲಾಗಿದ್ಯಾ ? ಎಂದು ಪ್ರಶ್ನಿಸಿದರು. ಹೌದು, ಸರ್ಕಾರದಿಂದ ಆದೇಶ ಮಾಡಲಾಗಿದ್ದು 15 ದಿನಗಳಲ್ಲಿ ವರದಿಗೆ ಸೂಚಿಸಲಾಗಿದೆ. ನ್ಯಾಯಮೂರ್ತಿ ಕುನ್ಹಾ ವರದಿಗೆ ಆದೇಶಿಸಲಾಗಿದೆ. ಜೊತೆಗೆ, ಜಿಲ್ಲಾಧಿಕಾರಿಗಳ ವಿಚಾರಣೆ ನಡೀತಾ ಇದೆ. ಎಲ್ಲಾ ಆರೋಪಿಗಳ ಬಂಧಿಸುವಾಗ ಗ್ರೌಂಡ್ಸ್ ಆಫ್ ಅರೆಸ್ಟ್ ನೀಡಲಾಗಿದೆ. ಆರ್‌ಸಿಬಿ ಯಿಂದ ಒಬ್ಬರು, ಡಿಎನ್ಎ ಯಿಂದ 3 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ಅಟಾರ್ನಿ ಜನರಲ್ ಮಾಹಿತಿ ನೀಡಿದರು.

ನಿಖಿಲ್ ನನ್ನ ಏರ್ಪೋರ್ಟ್ ನಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ಆರ್‌ಸಿಬಿ ಜಾಹೀರಾತು ಮುಖ್ಯಸ್ಥ ನಿಖಿಲ್ ಪರ ವಕೀಲ ಸಂದೇಶ್ ಚೌಟ ಹೇಳಿದರು. ಆಗ ಎಜಿ ಅವರು, 'ಆರೋಪಿ ನಿಖಿಲ್ ದುಬೈ ಗೆ ಪರಾರಿ ಯತ್ನ ಮಾಡುತ್ತಿದ್ದರು. ಇಲ್ಲ ನಿಖಿಲ್ ಮುಂಬೈಗೆ ಹೋಗ್ತಾ ಇದ್ದರು ಎಂದು ಸಂದೇಶ್ ಚೌಟ ಹೇಳಿದರು. ಆರ್ ಸಿಬಿ, ಕೆಎಸ್ ಸಿಎ ಅಧಿಕಾರಿಗಳ ಬಂಧನಕ್ಕೆ ಸಿಎಂ ಸೂಚಿಸಿದ್ದಾರೆ. ಅವರ ಸೂಚನೆ ಮೇರೆಗೆ ಬಂಧಿಸಲಾಗಿದೆ ಎಂದು ಅಶೋಕ್ ಹಾರ್ನಹಳ್ಳಿ ಕೋರ್ಟ್‌ಗೆ ತಿಳಿಸಿದರು. ಆಗ ತಪ್ಪು ಮಾಡಿದ್ದಾಕ್ಕಾಗಿ ಅರೆಸ್ಟ್ ಮಾಡಲಾಗಿದೆ ಎಂದು ಎಜಿ ತಿಳಿಸಿದರು. ಇದಾದ ನಂತರ ನ್ಯಾಯಮೂರ್ತಿಗಳು, ನಾನು ತನಿಖೆಗೆ ತಡೆ ಕೊಡುವುದಿಲ್ಲ. ಯಾವ ರಕ್ಷಣೆ ಅಗತ್ಯವಿದೆ ನೋಡೋಣ ಎಂದರು.

ಅರ್ಜಿದಾರರು ತನಿಖೆ, ವಿಚಾರಣೆ ಸಹಕರಿಸಲು ಸಿದ್ದ ಎಂದು ಅಶೋಕ್ ಹಾರ್ನಹಳ್ಳಿ ತಿಳಿಸಿದರು. ಸರ್ಕಾರದ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಲಾಯಿತು. ಜೊತೆಗೆ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಬೇಡವೆಂದು ಹೈಕೋರ್ಟ್‌ನಿಂದ ಆದೇಶ ಹೊರಡಿಸಲಾಯಿತು. ಪ್ರಕರಣದ ಎ-2, ಎ-3, ಮತ್ತು ಎ-4ನೇ ಆರೋಪಿಗಳ ವಿರುದ್ಧ ಬಲವಂತದ ಕ್ರಮತೆಗೆದುಕೊಳ್ಳಬಾರದು. ಆರೋಪಿಗಳು ತನಿಖೆಗೆ ಸಹಹಕರಿಸಬೇಕು. ಕೆ ಎಸ್ ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ಆದೇಶ ಹೊರಡಿಸಲಾಯಿತು.

ಈ ಮೂಲಕ ಕಾಲ್ತುಳಿತ ಕೇಸ್‌ ಅನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದ ಕೆಎಸ್‌ಸಿಎ ಮೂವರು ಅರ್ಜಿದಾರರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಕೆಎಸ್ ಸಿಎ ಆಡಳಿತ ಮಂಡಳಿಯ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜೈರಾಮ್ ಸೇರಿ ಮೂವರಿಗೆ ರಿಲೀಫ್ ನೀಡಲಾಗಿದೆ. ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ಷರತ್ತು ವಿಧಿಸಲಾಗಿದೆ. ಈಗ ದಾಖಲಾಗಿರುವ ಎಫ್ಐಆರ್ ಗಳ ತನಿಖೆ ನಡೆಸುತ್ತಿರುವವರು ಯಾರು? ಎಂದು ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಅಶೋಕ್ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂದು ಎಜಿ ಉತ್ತರಿಸಿದರು.

ನಿಖಿಲ್ ಪರ ವಕೀಲ ಸಂದೇಶ್ ಚೌಟ ಅವರು ವಾದ ಮುಂದುವರೆಸಿ, ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಾದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಿನ್ನೆ 10.30ಕ್ಕೆ ಸುಮೋಟೋ ಪಿಐಎಲ್ ದಾಖಲಾದ‌ ಬಳಿಕ 11.15ಕ್ಕೆ ಎಫ್ಐಆರ್ ಆಗಿದೆ. ಸಿಎಂ ಕ್ಯಾಬಿನೆಟ್ ಸಭೆ ನಡೆಸಿ ಆರ್‌ಸಿಬಿ, ಡಿಎನ್ಎ ಪದಾಧಿಕಾರಿಗಳ ಬಂಧನಕ್ಕೆ‌ಆದೇಶ ಮಾಡಿದ್ದು ಕಾನೂನು ಬಾಹಿರ. ಬೆಳಗ್ಗೆ 4.30 ಕ್ಕೆ ಇವರನ್ನು ಬಂಧಿಸಿದ್ದಾರೆ. ದೂರು ನೀಡಿದ ಪೊಲೀಸ್ ಅಧಿಕಾರಿಯೇ ಸಸ್ಪೆಂಡ್ ಆಗಿದ್ದಾರೆ ಎಂದರು.

ಬಂಧನ ಕಾನೂನುಬಾಹಿರವೆಂದು ಹೇಗೆ ಹೇಳುತ್ತೀರಿ? ಎಂದು ಜಡ್ಜ್ ಪ್ರಶ್ನೆ ಮಾಡಿದರು, ಸಿಎಂ ಸೂಚನೆ ಮೇರೆಗೆ ನಿಖಿಲ್ ಬಂಧಿಸಲಾಗಿದೆ. ತನಿಖಾಧಿಕಾರಿ ಮಾತ್ರ ಬಂಧನಕ್ಕೆ ನಿರ್ಧರಿಸಬೇಕು ಸಿಎಂ ಅಲ್ಲ. ನಿಖಿಲ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ವಾದ ಪದರತಿವಾದ ಆಲಿಸಿದ ಹೈಕೋರ್ಟ್ ನಗ್ಯಾಯಪೀಠವು ಈ ಅರ್ಜಿ ವಿಚಾರಣೆ ಜೂ.09ಕ್ಕೆ ಮುಂದೂಡಿಕೆ ಮಾಡಿದೆ. ಈ ಮೂಲಕ ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಯಾವುದೇ ರಿಲೀಫ್ ನೀಡಲಾಗಲಿಲ್ಲ. ಅರ್ಜಿಯನ್ನು ಜೂನ್ 9ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bandipur safari restart details ರೈತರ ವಿರೋಧದ ನಡುವೆಯೇ ಪೊಲೀಸ್ ಭದ್ರತೆಯಲ್ಲಿ ಸಫಾರಿ ಪುನರಾಂಭ!
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿ, ರಣಾಂಗಣವಾದ ಕಡಬಗೆರೆ, ಕಲ್ಲು ತೂರಾಟ, ಲಾಠಿ ಚಾರ್ಜ್‌!