ಕಾಂಗ್ರೆಸ್ ವಿಕೆಟ್ ಪತನ: ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್!

Published : Feb 16, 2026, 03:24 PM IST
bagepalli mla sn subbareddy election invalid

ಸಾರಾಂಶ

ಚುನಾವಣಾ ಅಕ್ರಮಗಳ ಆರೋಪದ ಮೇಲೆ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧು ಎಂದು ಘೋಷಿಸಿದೆ. ಪ್ರತಿಸ್ಪರ್ಧಿ ಸಿ. ಮುನಿರಾಜು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ತೀರ್ಪು ಬಂದಿದ್ದು, ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು (ಫೆ.16): ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ 'ಅಸಿಂಧು' (Null and Void) ಎಂದು ಘೋಷಿಸಿದೆ. ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ:

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಎಸ್.ಎನ್. ಸುಬ್ಬಾರೆಡ್ಡಿ ಅವರು ಭರ್ಜರಿ ಜಯ ಸಾಧಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಸುಬ್ಬಾರೆಡ್ಡಿ ಅವರು ವ್ಯಾಪಕ ಅಕ್ರಮ ಎಸಗಿದ್ದಾರೆ ಮತ್ತು ತಮ್ಮ ಅಫಿಡವಿಟ್‌ನಲ್ಲಿ ಆಸ್ತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಸ್ಪರ್ಧಿ, ಬಿಜೆಪಿಯ ಸಿ. ಮುನಿರಾಜು ಅವರು ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ (Election Petition) ಸಲ್ಲಿಸಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳ ಪೀಠವು, ಜನಪ್ರತಿನಿಧಿ ಕಾಯ್ದೆಯಡಿ ಸುಬ್ಬಾರೆಡ್ಡಿ ಅವರ ಆಯ್ಕೆಯು ಕ್ರಮಬದ್ಧವಾಗಿಲ್ಲ ಎಂಬ ತೀರ್ಮಾನಕ್ಕೆ ಬಂದು, ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಿದೆ. ತೀರ್ಪಿನ ಪ್ರತಿಯನ್ನು ತಕ್ಷಣವೇ ಚುನಾವಣಾ ಆಯೋಗ ಮತ್ತು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗೆ ರವಾನಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಮುನಿರಾಜುಗೆ ಸಿಗದ ವಿಜಯದ ಮಾನ್ಯತೆ:

ಇದೇ ಪ್ರಕರಣದಲ್ಲಿ ಅರ್ಜಿದಾರರಾದ ಸಿ. ಮುನಿರಾಜು ಅವರು ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ರದ್ದುಗೊಳಿಸಿ, ಎರಡನೇ ಅತಿ ಹೆಚ್ಚು ಮತ ಪಡೆದ ತಮ್ಮನ್ನು 'ವಿಜಯಿ' ಎಂದು ಘೋಷಿಸಬೇಕೆಂದು ಕೋರಿದ್ದರು. ಆದರೆ, ಈ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿಲ್ಲ. ಸುಬ್ಬಾರೆಡ್ಡಿ ಅವರ ಆಯ್ಕೆ ಅಸಿಂಧುಗೊಳಿಸಿದರೂ, ಮುನಿರಾಜು ಅವರನ್ನು ವಿಜಯಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಎಸ್.ಎನ್. ಸುಬ್ಬಾರೆಡ್ಡಿ ಅವರ ವಿರುದ್ಧ ಈ ಹಿಂದೆಯೂ ಆಸ್ತಿ ವಿವರಗಳ ಘೋಷಣೆಗೆ ಸಂಬಂಧಿಸಿದಂತೆ ಹಲವು ಟೀಕೆಗಳು ಕೇಳಿಬಂದಿದ್ದವು. ಚುನಾವಣಾ ಸಮಯದಲ್ಲಿ ಮತದಾರರಿಗೆ ಉಡುಗೊರೆ ಹಂಚಿಕೆ ಮತ್ತು ಆಮಿಷವೊಡ್ಡಿದ ಗಂಭೀರ ಆರೋಪಗಳು ಇವರ ಮೇಲಿದ್ದವು. ಈ ಎಲ್ಲಾ ಅಂಶಗಳನ್ನು ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯದ ಮುಂದೆ ಮಂಡಿಸಲಾಗಿತ್ತು.

ಮುಂದಿನ ದಾರಿ ಏನು?

ಹೈಕೋರ್ಟ್ ತೀರ್ಪಿನಿಂದ ಸುಬ್ಬಾರೆಡ್ಡಿ ಅವರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದಾಗ್ಯೂ, ಅವರಿಗೆ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡದಿದ್ದರೆ, ಬಾಗೇಪಲ್ಲಿ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ಎದುರಾಗಲಿದೆ. ಈ ತೀರ್ಪು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಅಲ್ಪ ಮಟ್ಟದ ಹಿನ್ನಡೆ ತಂದೊಡ್ಡಿದೆ.

ಸಿ. ಮುನಿರಾಜು ಅವರ ಸ್ಫೋಟಕ ಆರೋಪಗಳು

ಹೈಕೋರ್ಟ್ ತೀರ್ಪಿನ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಅವರು, ಸುಬ್ಬಾರೆಡ್ಡಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಪಟ್ಟಿ ಮಾಡಿದ್ದಾರೆ. 'ಒಬ್ಬ ಭ್ರಷ್ಟನನ್ನು ನ್ಯಾಯಾಲಯ ವಜಾಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಸುಬ್ಬಾರೆಡ್ಡಿ ಅವರು ಬೆಂಗಳೂರಿನಲ್ಲಿ ಹಲವು ಬಾರ್‌ಗಳನ್ನು ನಡೆಸುತ್ತಿದ್ದಾರೆ, ಆದರೆ ಅವರ ಬಳಿ ಇರುವುದು ಕೇವಲ ಒಂದೇ ಒಂದು ಲೈಸೆನ್ಸ್. ಬೆಂಗಳೂರಿನಲ್ಲಿ ಅವರಿಗೆ ಹಲವು ಮನೆಗಳಿದ್ದರೂ ಬಿಬಿಎಂಪಿಗೆ ನಯಾಪೈಸೆ ಟ್ಯಾಕ್ಸ್ ಕಟ್ಟಿರಲಿಲ್ಲ. 

ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಕನ್ವರ್ಷನ್ ಆಗಿದ್ದ ಭೂಮಿಯನ್ನು ಅವರು ಕೃಷಿ ಭೂಮಿ ಎಂದು ತೋರಿಸಿ ದಾರಿ ತಪ್ಪಿಸಿದ್ದರು. ಅವರ ಹೆಸರಿನಲ್ಲಿದ್ದ ಉದ್ಯಮದ ಮಾಹಿತಿಯನ್ನೂ ಅಫಿಡವಿಟ್‌ನಲ್ಲಿ ಮರೆಮಾಚಿದ್ದರು. ಈ ಎಲ್ಲಾ ಅಕ್ರಮಗಳ ವಿರುದ್ಧ ನಾನು ದೃಢವಾಗಿ ಕಾನೂನು ಹೋರಾಟ ನಡೆಸಿದ್ದೆ. 'ಸುಬ್ಬಾರೆಡ್ಡಿ ಶಾಸಕ ಸ್ಥಾನದಿಂದ ವಜಾ ಆಗುವವರೆಗೂ ನಾನು ನೆಮ್ಮದಿಯಿಂದ ನಿದ್ದೆ ಮಾಡುವುದಿಲ್ಲ' ಎಂದು ಪ್ರತಿಜ್ಞೆ ಮಾಡಿದ್ದೆ. ಇಂದು ನ್ಯಾಯಾಲಯ ನಮಗೆ ಜಯ ನೀಡಿದೆ, ಇಂದಿನಿಂದ ನಾನು ಕಣ್ತುಂಬಾ ನಿದ್ದೆ ಮಾಡುತ್ತೇನೆ' ಎಂದು ಭಾವುಕರಾಗಿ ನುಡಿದರು.

ಬಾಗೇಪಲ್ಲಿಗೆ ಈಗ ಶಾಸಕರಿಲ್ಲ

'ನನಗೆ ಬಾಗೇಪಲ್ಲಿಯ ಜನತೆ 62 ಸಾವಿರ ಮತಗಳನ್ನು ನೀಡಿ ಆಶೀರ್ವದಿಸಿದ್ದರು. ಕೋರ್ಟ್ ನನ್ನನ್ನು ಶಾಸಕನೆಂದು ಘೋಷಿಸದಿದ್ದರೂ ನನಗೆ ಅಸಮಾಧಾನವಿಲ್ಲ. ಒಬ್ಬ ಅಕ್ರಮ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗಿಳಿಸಿರುವುದೇ ನನಗೆ ಶಾಸಕನಾದಷ್ಟೇ ಖುಷಿ ನೀಡಿದೆ. ಈಗಿನಿಂದ ಬಾಗೇಪಲ್ಲಿಗೆ ಶಾಸಕರಿಲ್ಲ, ಅಲ್ಲಿನ ಜನರಿಗೆ ಇನ್ನು ಮುಂದೆ ಅನ್ಯಾಯವಾಗುವುದಿಲ್ಲ' ಎಂದು ಮುನಿರಾಜು ಹರ್ಷ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Darshan: ಅಣ್ಣ ದರ್ಶನ್ ನಾಯಕತ್ವದಲ್ಲಿ ಹೊಸ ಸಿನಿಮಾ ಘೋಷಿಸಿದ ದಿನಕರ್ ತೂಗುದೀಪ; ಜೈಲಿನಿಂದ ಬಿಡುಗಡೆ ಯಾವಾಗ?
ದರ್ಶನ್ ಬರ್ತಡೇ ದಿನವೇ ಪವಿತ್ರಾ ಗೌಡಗೆ ಶಾಕ್ ಕೊಟ್ಟ ಕೋರ್ಟ್; ಮಗಳ ಪರೀಕ್ಷೆ ಕಾರಣಕ್ಕೂ ಸಿಗಲಿಲ್ಲ ಜಾಮೀನು!