
ಕೊಪ್ಪಳ (ನ.22): ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂಬಂತೆ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಹಾಗೂ ಸ್ಟ್ರೆಚರ್ ಇಲ್ಲದ ಕಾರಣ, ಅಸ್ವಸ್ಥ ರೋಗಿಯನ್ನು ಸಂಬಂಧಿಕರೇ ಹೊತ್ತುಕೊಂಡು ಓಡಾಡಿದ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ ತಾಲೂಕಿನ ಇಂದ್ರಾನಗರ ತಾಂಡಾ ನಿವಾಸಿಯೊಬ್ಬರು ಕಳೆದ ಮೂರು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಏಕಾಏಕಿ ರೋಗಿಗೆ ಮೂರ್ಛೆ ಬಂದು ನರಳಾಡಲು ಪ್ರಾರಂಭಿಸಿದ್ದಾರೆ. ರೋಗಿ ಮೂರನೇ ಮಹಡಿಯಲ್ಲಿದ್ದರೂ, ತುರ್ತು ಪರಿಸ್ಥಿತಿಯಲ್ಲಿ ತಪಾಸಣೆ ನಡೆಸಲು ಯಾವೊಬ್ಬ ವೈದ್ಯರೂ ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ.
ವೈದ್ಯರು ಬಾರದ ಹಿನ್ನೆಲೆಯಲ್ಲಿ, ಗಾಬರಿಗೊಂಡ ಸಂಬಂಧಿಕರು ರೋಗಿಯನ್ನು ತಾವೇ ಎಮರ್ಜೆನ್ಸಿ ವಾರ್ಡ್ಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ, ಅಲ್ಲಿ ರೋಗಿಯನ್ನು ಕರೆದೊಯ್ಯಲು ವ್ಹೀಲ್ ಚೇರ್ ಆಗಲಿ ಅಥವಾ ಸ್ಟ್ರೆಚರ್ ಆಗಲಿ ಲಭ್ಯವಿರಲಿಲ್ಲ. ಅಂತಿಮವಾಗಿ ಬೇರೆ ದಾರಿ ಕಾಣದೆ, ಸಂಬಂಧಿಕರೇ ರೋಗಿಯನ್ನು ಮೂರನೇ ಮಹಡಿಯಿಂದ ಎತ್ತಿಕೊಂಡು ಕೆಳಗಿನ ಎಮರ್ಜೆನ್ಸಿ ವಾರ್ಡ್ಗೆ ಓಡಿ ಬಂದಿದ್ದಾರೆ.
ಜಿಲ್ಲಾ ಕೇಂದ್ರದ ದೊಡ್ಡ ಆಸ್ಪತ್ರೆಯಲ್ಲೇ ಕನಿಷ್ಠ ಮೂಲಭೂತ ಸೌಕರ್ಯಗಳಾದ ವ್ಹೀಲ್ ಚೇರ್ ಮತ್ತು ಸ್ಟ್ರೆಚರ್ ಕೊರತೆ ಎದುರಾಗಿರುವುದು ಸಾರ್ವಜನಿಕರ ಮತ್ತು ರೋಗಿಗಳ ಸಂಬಂಧಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ