
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.11): ಆ ವೃದ್ಧನ ಕುಟುಂಬ ಏಲಕ್ಕಿ ತೋಟವನ್ನೇ ನಂಬಿ ಬದುಕು ದೂಡುತ್ತಿತ್ತು. ಆದರೆ ಇದು ಅರಣ್ಯ ಭೂಮಿ ಎಂದು ವಾದಿಸಿದ ಅರಣ್ಯ ಇಲಾಖೆ ಫಸಲಿದ್ದ ಏಲಕ್ಕಿ ಬೆಳೆಯನ್ನು ಕತ್ತರಿಸಿ ತುಂಡು ತುಂಡು ಮಾಡಿದೆ. ಅರಣ್ಯ ಇಲಾಖೆಯ ದರ್ಪಕ್ಕೆ ವೃದ್ಧನ ಕುಟುಂಬ ಈಗ ಕಣ್ಣೀರಿನಲ್ಲಿ ಕೈತೊಳೆಯುತ್ತಾ ಕಂಗಾಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದ ವೃದ್ಧ ರೈತ ನಾಣಿಯಪ್ಪ ಅವರ ತಂದೆ ಕಾಲದಿಂದಲೂ ಸರ್ವೆ ನಂಬರ್ 33/2 ರಲ್ಲಿ ನಾಲ್ಕು ಎಕರೆಯಲ್ಲಿ ಕಾಫಿ ಮತ್ತು ಏಲಕ್ಕಿ ತೋಟ ಮಾಡಿಕೊಂಡು ಬದುಕುತ್ತಿದ್ದರಂತೆ. ಆದರೆ ಆಗಸ್ಟ್ 19 ರಂದು ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಕ್ಕಿದ್ದಂತೆ ರೈತ ನಾಣಿಯಪ್ಪ ಅವರ ಫಸಲಿಗೆ ಬಂದಿದ್ದ ಏಲಕ್ಕಿ ಮತ್ತು ಕಾಫಿ ತೋಟವನ್ನು ತುಂಡು ತುಂಡಾಗಿ ಕತ್ತರಿಸಿ ನಾಶ ಮಾಡಿದ್ದಾರೆ.
ಈ ಭೂಮಿ ದೇವರ ಕಾಡಾಗಿದ್ದು ಅದನ್ನು ಅತಿಕ್ರಮಿಸಿ ತೋಟ ಮಾಡಲಾಗಿದೆ ಎಂದು ಮಡಿಕೇರಿ ರೇಂಜರ್ ದಿನೇಶ್ ಮತ್ತು ಫಾರೆಸ್ಟರ್ ದರ್ಶಿನಿ ಎಂಬುವರ ತಂಡ ಇಡೀ ತೋಟವನ್ನು ಧ್ವಂಸ ಮಾಡಿದೆ ಎನ್ನಲಾಗಿದೆ. ಇದ್ದ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿರುವ ಈ ವೃದ್ಧ ದಂಪತಿ ಇದೇ ತೋಟವನ್ನು ನಂಬಿ ಬದುಕು ಸಾಗಿಸುತ್ತಿದ್ದರು. ಆದರೆ ಫಸಲಿಗೆ ಬಂದಿದ್ದ ತೋಟವನ್ನುಕಳೆದುಕೊಂಡ ಈ ಕುಟುಂಬ ಈಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಅರಣ್ಯ ಅಧಿಕಾರಿಗಳು ನಮ್ಮ ತೋಟವನ್ನು ಹೀಗೆ ಕಡಿದು ನಾಶ ಮಾಡುವುದಕ್ಕಿಂತ ನಮಗೆ ವಿಷ ಕೊಟ್ಟಿದ್ದರೆ ನೆಮ್ಮದಿಯಾಗಿ ಪ್ರಾಣ ಬಿಡುತ್ತಿದ್ದೆವು ಎಂದು ಕಣ್ಣೀರಿಟ್ಟಿದೆ.
ನಾಣಿಯಪ್ಪ ಅವರ ತೋಟವನ್ನು ಹೀಗೆ ಸರ್ವನಾಶ ಮಾಡಿರುವುದಕ್ಕೆ ರೈತ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಹೀಗೆ ನಾಶ ಮಾಡಿರುವ ಅವರು ಮನುಷ್ಯರಲ್ಲ. ಮನುಷ್ಯತ್ವ ಇರುವ ಯಾರೂ ಇಂತಹ ಹೇಯ ಕೃತ್ಯ ಮಾಡುವುದಿಲ್ಲ. ಕೊಡಗಿನಲ್ಲಿ ರೈತರು ಬದುಕದಂತಹ ಪರಿಸ್ಥಿತಿ ಎದುರಾಗಿದೆ. ಕೊಡಗು ಜಿಲ್ಲೆಯಲ್ಲಿ ಸಿ ಮತ್ತು ಡಿ ಭೂಮಿಯ ಗೊಂದಲದಿಂದಾಗಿ ಲಕ್ಷಾಂತರ ರೈತರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಇದನ್ನು ಬಗೆಹರಿಸಿ ರೈತರ ಭೂಮಿಗೆ ದಾಖಲೆಗಳನ್ನು ಮಾಡಿಕೊಡುವಂತೆ ಆಗಸ್ಟ್ 12 ರಂದು ಸೋಮವಾರಪೇಟೆ ಬಂದ್ ಮಾಡಿ ಪ್ರತಿಭಟಿಸಿದ್ದೆವು.
ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದೆವು. ಇದರಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಕೃತ್ಯ ಎಸಗಿ ರೈತರ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಈ ಕೃತ್ಯ ಎಸಗಿದ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು, ಜೊತೆಗೆ ರೈತ ನಾಣಿಯಪ್ಪ ಅವರಿಗೆ ಆಗಿರುವ ನಷ್ಟಕ್ಕೆ 30 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಮಾತನಾಡಿರುವ ರೈತ ಮುಖಂಡ ಸಜನ್ ಮತ್ತು ಸುರೇಶ್ ಚಕ್ರವರ್ತಿ ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಹದಿನೈದು ದಿನಗಳ ಒಳಗಾಗಿ ರೈತ ನಾಣಿಯಪ್ಪ ಅವರಿಗೆ 30 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ವಿರುದ್ಧ ಮಡಿಕೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಅರಣ್ಯ ಭೂಮಿಯೋ, ಇಲ್ಲ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯೋ. ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಏಕಾಏಕಿ ಕತ್ತಿರಿಸಿ ಹಾಳು ಮಾಡಿರುವ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅನ್ಯಾಯಕ್ಕೆ ಒಳಗಾಗಿರುವ ರೈತ ನಾಣಿಯಪ್ಪ ಕುಟುಂಬಕ್ಕೆ ನೆರವಾಗಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ