ಇಲ್ಲೊಂದು ಬೇಲಿಯೇ ಎದ್ದು ಹೊಲ ಮೇಯ್ದಂತ ಘಟನೆ ಬೆಳಕಿಗೆ ಬಂದಿದೆ. ಕಿಡ್ನಾಪ್ ಕೇಸ್ ಒಂದರಲ್ಲಿ ಪಿಎಸ್ ಐ ಓರ್ವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು : ಕಾನೂನು ಪಾಲಿಸಬೇಕಾದ ಪಿಎಸ್ಐ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ್ದು, ಬಂಧನ್ಕೆ ಇದೀಗ ಬಲೆ ಬೀಸಲಾಗಿದೆ. ಕಿಡ್ನಾಪ್ ಕೇಸ್ ನಲ್ಲಿ ಆರೋಪಿಯಾಗಿರುವ ಪಿಎಸ್ಐ ವಿಜಯ್ ರೆಡ್ಡಿ ಬಂಧನಕ್ಕೆ ಬೆಂಗಳೂರು ನಗರ ಎಸಿಪಿ ವಾಸು ಹಾಗೂ ಪೊಲೀಸರ ತಂಡದಿಂದ ಹುಡುಕಾಟ ನಡೆಯುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪಿಎಸ್ಐ ವಿಜಯ್ ರೆಡ್ಡಿ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದು, ಅವರ ಬಗ್ಗೆ ಎಸಿಪಿ ವಾಸು ನೇತೃತ್ವದ ತಂಡ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಆನಂದ್ ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಕರಣ ಹಿನ್ನೆಲೆ : ಮದನ್ ಗೋಪಾಲ್ ಎಂಬ ವ್ಯಕ್ತಿ 2017 ರ ನವೆಂಬರ್ 9 ರಂದು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತರಿಂದ ಕಿಡ್ನಾಪ್ ಆಗಿದ್ದರು.
ಕಿಡ್ನಾಫ್ ಆಗಿದ್ದ ಮದನ್ ಗೋಪಾಲ್ ನನ್ನ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಿಟ್ಟು ಕಿಡ್ನಾಪರ್ಸ್ ಹೋಗಿದ್ದರು. ಈ ವೇಳೆ ಮದನ್ ಗೋಪಾಲ್ ನನ್ನು ಪಿಎಸ್ ಐ ವಿಜಯ್ ರೆಡ್ಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ಮದನ್ ಗೋಪಾಲ್ ವಿರುದ್ದ ಶ್ರೀಗಂಧ ಸಾಗಾಣಿಕೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದರು.
ಜೈಲಿನಲ್ಲಿದ್ದ ಮದನ್ ಗೋಪಾಲ್ ಜಾಮೀನು ಪಡೆದು ಹೊರ ಬಂದು ನಂತರ ಬೆಂಗಳೂರು ಕಮೀಷನರ್ ಮೊರೆ ಹೋಗಿದ್ದರು. ಬಳಿಕ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲು ಮಾಡಿದ್ದು, ಬಳಿಕ ತನಿಖೆಗಿಳಿದಾಗಿ ಪಿಎಸ್ಐ ವಿಜಯ್ ರೆಡ್ಡಿ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು.
ಪ್ರಕರಣ ದಾಖಲಾದ ಬಳಿಕ ಪಿಎಸ್ಐ ವಿಜಯ್ ರೆಡ್ಡಿ ಹಾಗೂ ಕರ್ತವ್ಯ ಲೋಪ ಮಾಡಿರುವ ಆರೋಪದಡಿ ಮುಖ್ಯ ಪೇದೆ ಇನಾಯತ್ ನನ್ನ ಅಮಾನತು ಮಾಡಿ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಆದೇಶ ನೀಡಿದ್ದರು.