
ಬೆಂಗಳೂರು (ಮಾ26): ಎರಡು ದಿನಗಳ ಹಿಂದೆ ತನ್ನ ಆಟೋ ಡಿಕ್ಕಿಯಿಂದ ಸಾವನ್ನಪ್ಪಿದ ಮಹಿಳೆಯ ಮೃತದೇಹವನ್ನು ಕಸದ ರಾಶಿಗೆ ಎಸೆದು ಪರಾರಿಯಾಗಿದ್ದ ಆಟೋ ಚಾಲಕನೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆ ಸಮೀಪದ ಕಪಿಲನಗರದ ನಿವಾಸಿ ಬಸವೇಗೌಡ ಬಂಧಿತನಾಗಿದ್ದು, ಆರೋಪಿಯಿಂದ ಆಟೋ ಜಪ್ತಿ ಮಾಡಲಾಗಿದೆ.
ಕೆಂಗೇರಿ ಉಪನಗರದ ಮುಖ್ಯರಸ್ತೆಯಲ್ಲಿ ಭಾನುವಾರ ರಸ್ತೆ ದಾಟುತ್ತಿದ್ದಾಗ ಆಟೋ ಡಿಕ್ಕಿಯಿಂದ ಸ್ಥಳೀಯ ನಿವಾಸಿ ಕೆಂಪಮ್ಮ (50) ಮೃತಪಟ್ಟಿದ್ದರು. ಈ ಅಪಘಾತದ ಬಳಿಕ ಕಸದ ರಾಶಿಗೆ ಮೃತದೇಹ ಎಸೆದು ಆರೋಪಿ ಪರಾರಿಯಾಗಿದ್ದ. ಈ ಕೃತ್ಯದ ತನಿಖೆಗಿಳಿದ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆತನನ್ನು ಬಂಧಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಮುರುಡೆಗೌಡನಪಾಳ್ಯದ ಬಸವೇಗೌಡ ಅವರು, ತನ್ನ ಕುಟುಂಬದ ಜತೆ ಕಪಿಲನಗರದಲ್ಲಿ ನೆಲೆಸಿದ್ದ. ನಗರದಲ್ಲಿ ಆಟೋ ಓಡಿಸಿಕೊಂಡು ಆತ ಜೀವನ ಸಾಗಿಸುತ್ತಿದ್ದ. ಕೆಂಗೇರಿ ಉಪನಗರದಕ್ಕೆ ಭಾನುವಾರ ರಾತ್ರಿ ಬಾಡಿಗೆಗೆ ಬಂದಿದ್ದ ಬಸವೇಗೌಡ, ಅಲ್ಲಿಂದ ಮನೆಗೆ ಮರಳುವಾಗ ಈ ಅಪಘಾತ ಸಂಭವಿಸಿದೆ.
ಕೆಂಗೇರಿ ಉಪನಗರ ಬಳಿ ರಸ್ತೆ ದಾಟುತ್ತಿದ್ದ ಕೆಂಪಮ್ಮ ಅವರಿಗೆ ಆಟೋ ಡಿಕ್ಕಿಯಾಗಿದೆ. ಕೂಡಲೇ ತನ್ನ ಆಟೋದಲ್ಲೇ ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಚಾಲಕ ಕರೆದೊಯ್ಯಲು ಮುಂದಾಗಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದ ಕೆಂಪಮ್ಮ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ತನ್ನ ಆಟೋದಲ್ಲಿ ತೆಗೆದುಕೊಂಡ ಬಂದ ಚಾಲಕ, ಭಯಗೊಂಡು ರಸ್ತೆ ಬದಿಯ ಕಸದ ರಾಶಿಗೆ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ