
ಬೆಂಗಳೂರು (ಆ.20): ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಪಿಂಚಣಿ ಪಡೆಯಲು ನಿಗದಿಪಡಿಸಲಾಗಿದ್ದ ವಾರ್ಷಿಕ ಕುಟುಂಬದ ಆದಾಯ ಮಿತಿಯನ್ನು ₹32,000 ದಿಂದ ₹1,20,000 (ಒಂದು ಲಕ್ಷದ ಇಪ್ಪತ್ತು ಸಾವಿರ ರೂ.) ಕ್ಕೆ ಹೆಚ್ಚಿಸಿ ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ದಾಖಲೆಗಳ ಪರಿಶೀಲನೆ ವೇಳೆ ಪಿಂಚಣಿ ಕಳೆದುಕೊಂಡಿದ್ದ ಲಕ್ಷಾಂತರ ವೃದ್ಧರು, ವಿಧವೆಯರು ಹಾಗೂ ವಿಕಲಚೇತನರಿಗೆ ಮತ್ತೆ ಮಾಸಿಕ ಪಿಂಚಣಿ ಹಣ ಕೈಸೇರಲಿದೆ.
ರಾಜ್ಯ ಸರ್ಕಾರದ 'ಕುಟುಂಬ' (Kutumba) ತಂತ್ರಾಂಶದಿಂದ ಪಡೆದ ದತ್ತಾಂಶಗಳ ಆಧಾರದ ಮೇಲೆ ಪಿಂಚಣಿ ಪಡೆಯುತ್ತಿದ್ದವರ ಮಾಹಿತಿಯನ್ನು ತಾಳೆ ಮಾಡಿದಾಗ, ರಾಜ್ಯಾದ್ಯಂತ ಸುಮಾರು 23,14,544 ಫಲಾನುಭವಿಗಳ ಪಿಂಚಣಿ ಸಂದೇಹಾಸ್ಪದ ಎಂದು ಕಂಡುಬಂದಿತ್ತು. ಬಳಿಕ ಇವರ ಭೌತಿಕ ಪರಿಶೀಲನೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳು 'ಸಂಯೋಜನೆ ಮೊಬೈಲ್ ಆ್ಯಪ್' ಮೂಲಕ ಪರಿಶೀಲನೆ ನಡೆಸಿದ್ದರು. ಈ ವೇಳೆ ಸೂಕ್ತ ದಾಖಲೆ ಸಲ್ಲಿಸದ, ವಿಳಾಸದಲ್ಲಿ ವಾಸವಿಲ್ಲದ ಹಾಗೂ ನಿಗದಿತ ₹32,000 ಕ್ಕಿಂತ ಹೆಚ್ಚು ಆದಾಯ ಹೊಂದಿದ್ದ ಕಾರಣಕ್ಕೆ ಬರೋಬ್ಬರಿ 18,06,032 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಪರಿಶೀಲನೆ ವೇಳೆ ಬಹುತೇಕ ಅರ್ಹ ಫಲಾನುಭವಿಗಳ ವಾರ್ಷಿಕ ಆದಾಯವು ₹32,000ಕ್ಕಿಂತ ಹೆಚ್ಚು ಮತ್ತು ₹1,20,000ದ ಮಿತಿಯೊಳಗೆ ಇರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಆದಾಯ ಮಿತಿಯನ್ನು ಏರಿಕೆ ಮಾಡಲಾಗಿದೆ.
ಸಂಯೋಜನೆ ಆ್ಯಪ್ ಮೂಲಕ ಪರಿಶೀಲನೆಯ ನಂತರ ₹32,000/- ದಿಂದ ₹1,20,000/- ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಎಲ್ಲಾ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದಿನ ಆದೇಶದವರೆಗೆ ಮುಂದುವರೆಸಲು ಸರ್ಕಾರವು ಆದೇಶಿಸಿದೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲ ಅವರು ನಿರ್ದೇಶನ ನೀಡಿದ್ದು, ₹1.20 ಲಕ್ಷ ಮಿತಿಯೊಳಗಿರುವ ಅರ್ಹ ಫಲಾನುಭವಿಗಳಿಗೆ ತಕ್ಷಣವೇ ಪಿಂಚಣಿ ಹಣ ಬಿಡುಗಡೆ ಮುಂದುವರಿಸಲು ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ