ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಇಂದು ?

By Kannadaprabha NewsFirst Published Jul 4, 2023, 8:10 AM IST
Highlights

ವಿಪಕ್ಷ ನಾಯಕನಿಲ್ಲದೇ ಆರಂಭವಾದ ವಿಧಾನಮಂಡಲದ ಅಧಿವೇಶನ ಎರಡನೇ ದಿನವಾದ ಮಂಗಳವಾರವೂ ಇದೇ ಸಂಪ್ರದಾಯವನ್ನು ಮುಂದುವರೆಸುವ ಸಾಧ್ಯತೆ ಇದೆ. ಕಾರಣ, ಮಂಗಳವಾರವೂ ರಾಜ್ಯ ವಿಧಾನಸಭೆಗೆ ನೂತನ ಪ್ರತಿಪಕ್ಷ ನಾಯಕನನ್ನು ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆ ಕ್ಷೀಣವಾಗಿದೆ. ಇದಕ್ಕೆ ಕಾರಣವಾಗಿರುವುದು, ದೆಹಲಿಯಿಂದ ಆಗಮಿಸಬೇಕಿದ್ದ ವೀಕ್ಷಕರ ಆಗಮನದಲ್ಲಿನ ವಿಳಂಬ.

ಬೆಂಗಳೂರು (ಜು.4) :  ವಿಪಕ್ಷ ನಾಯಕನಿಲ್ಲದೇ ಆರಂಭವಾದ ವಿಧಾನಮಂಡಲದ ಅಧಿವೇಶನ ಎರಡನೇ ದಿನವಾದ ಮಂಗಳವಾರವೂ ಇದೇ ಸಂಪ್ರದಾಯವನ್ನು ಮುಂದುವರೆಸುವ ಸಾಧ್ಯತೆ ಇದೆ. ಕಾರಣ, ಮಂಗಳವಾರವೂ ರಾಜ್ಯ ವಿಧಾನಸಭೆಗೆ ನೂತನ ಪ್ರತಿಪಕ್ಷ ನಾಯಕನನ್ನು ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆ ಕ್ಷೀಣವಾಗಿದೆ. ಇದಕ್ಕೆ ಕಾರಣವಾಗಿರುವುದು, ದೆಹಲಿಯಿಂದ ಆಗಮಿಸಬೇಕಿದ್ದ ವೀಕ್ಷಕರ ಆಗಮನದಲ್ಲಿನ ವಿಳಂಬ.

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ಪಕ್ಷದ ವೀಕ್ಷಕರಾಗಿ ರಾಷ್ಟ್ರೀಯ ಮುಖಂಡರಾದ ವಿನೋದ್‌ ತಾವಡೆ ಮತ್ತು ಮನ್‌ಸುಖ್‌ ಮಾಂಡವಿಯಾ(Vinod tawde and Mansukh mandaviya) ಅವರು ಸೋಮವಾರವೇ ಆಗಮಿಸಬೇಕಿತ್ತು. ಆದರೆ, ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಇಬ್ಬರೂ ಮುಖಂಡರು ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ?: ಬೊಮ್ಮಾಯಿ ಹೆಸರು ಮುಂಚೂಣಿಯಲ್ಲಿ

ಬಳಿಕ ಅವರಿಬ್ಬರೂ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆ ಅಭಿಪ್ರಾಯ ಆಧರಿಸಿ ಯಾರು ಸೂಕ್ತ ಎಂಬುದರ ಬಗ್ಗೆ ದೆಹಲಿಯ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ. ಹೆಸರು ಅಂತಿಮಗೊಂಡಲ್ಲಿ ಬುಧವಾರ ಬೆಳಗ್ಗೆ ಅಧಿವೇಶನದ ಕಲಾಪ ಆರಂಭವಾಗುವ ಮೊದಲು ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಆ ಬಳಿಕವೇ ಆಯ್ಕೆ ಸಂಬಂಧ ವರಿಷ್ಠರು ಇಬ್ಬರು ವೀಕ್ಷಕರನ್ನು ಕಳುಹಿಸಿಕೊಡುವ ತೀರ್ಮಾನವಾಗಿತ್ತು.

ಬಿಜೆಪಿ ಶಾಸಕಾಂಗ ನಾಯಕನ ಆಯ್ಕೆಗೆ ಅಂತಿಮ ಕಸರತ್ತು

ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿ ನೀಡಲಿದ್ದಾರೆ. ಅದನ್ನು ಆಧರಿಸಿ ಪ್ರತಿಪಕ್ಷ ನಾಯಕನ ಆಯ್ಕೆಗೆ ನಿರ್ಧರಿಸಲಾಗಿದೆ ಎಂದು ಖುದ್ದು ಯಡಿಯೂರಪ್ಪ ಅವರೇ ಹೇಳಿದ್ದರು.

click me!