
ಕನ್ನಡಪ್ರಭ ವಾರ್ತೆ ಬೆಂಗಳೂರು(ಜು.19): ಕುವೆಂಪು ವಿರಚಿತ ನಾಡಗೀತೆಗೆ ‘ಬೌದ್ಧರುದ್ಯಾನ’ ಎಂಬ ಪದ ಸೇರ್ಪಡೆಗೆ ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರು, ಸಾಂಸ್ಕೃತಿಕ ಚಿಂತಕರ ಸಂಘ-ಸಂಸ್ಥೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಸೇರ್ಪಡೆಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಿರುವುದಕ್ಕೆ ವಿವಿಧ ಸಂಘ-ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿರುವುದು ಖಂಡನೀಯ. ರಾಷ್ಟ್ರಕವಿ ಕುವೆಂಪು ಎಂದಿಗೂ ಧರ್ಮ ವಿರೋಧಿಯಾಗಿರಲಿಲ್ಲ. ಸರ್ವಜನಾಂಗದ ಶಾಂತಿಗಾಗಿ ಸಾಹಿತ್ಯ ರಚನೆ ಮಾಡಿದವರು ಎಂದು ಒಕ್ಕೂಟದ ಅಧ್ಯಕ್ಷ ರಂಗೋತ್ರಿ ಕುಮಾರ್ ಹೇಳಿದ್ದಾರೆ.
ಕುವೆಂಪು ಅವರು ಇಂದು ಬದುಕಿದಿದ್ದರೆ ‘ಬೌದ್ಧರುದ್ಯಾನ’ ಪದದ ಸೇರ್ಪಡೆಗೆ ಖಂಡಿತ ಒಪ್ಪುತ್ತಿದ್ದರು. ಹೊರಗಿನಿಂದ ಬಂದ ಕ್ರೈಸ್ತ, ಹಿಂದೂ, ಮುಸಲ್ಮಾನ ಧರ್ಮಗಳಿಗೆ ನಾಡಗೀತೆಯಲ್ಲಿ ಸ್ಥಾನ ಇರುವಾಗ, ಇಲ್ಲಿನ ಮೂಲ ನಿವಾಸಿಗಳಾಗಿ ಇಡೀ ‘ವಿಶ್ವದಾದ್ಯಾಂತ ಇದ್ದ ಮೊದಲ ಧರ್ಮವಾದ ‘ಬೌದ್ದಧರ್ಮಕ್ಕೆ ಸ್ಥಾನ ಕೊಡುತ್ತಿದ್ದರು ಎಂಬುದು ನಮ್ಮ ಅಭಿಪ್ರಾಯ.
ಅಲ್ಪಸಂಖ್ಯಾತರ ಧರ್ಮದ ರಕ್ಷಣೆ ಮಾಡಬೇಕೆಂದು ಮತ್ತು ಎಲ್ಲರೂ ಬಾಳಬೇಕೆಂದು ನಮ್ಮ ಸಂವಿಧಾನ ಪೀಠಿಕೆ ಹೇಳಿದೆ. ಹೀಗಾಗಿ ನಾಡಗೀತೆಗೆ ‘ಬೌದ್ಧರುದ್ಯಾನ’ ಪದದ ಸೇರ್ಪಡೆ ಆಗಲೇಬೇಕು. ಸರ್ಕಾರದ ತೀರ್ಮಾನವನ್ನು ನಾವು ಒಕ್ಕೊರಲಿನಿಂದ ಬೆಂಬಲಿಸುತ್ತೆವೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎ.ಆರ್.ಗೋವಿಂದ ಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ