
ಬೆಂಗಳೂರು: ಕರ್ನಾಟಕ ಹೈಕೋರ್ಟ್ ವ್ಯಕ್ತಿಯೊಬ್ಬನ ಮೇಲಿದ್ದ ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಅಪ್ರಾಪ್ತ ಹೆಂಡತಿಯ ಮೇಲೆ ಅತ್ಯಾಚಾರ ಮಾಡಿ ಗರ್ಭವತಿ ಮಾಡಿದ ಆರೋಪ ಗಂಡನ ಮೇಲಿತ್ತು. ಆದರೆ ಕೋರ್ಟ್ ಅಚ್ಚರಿಯ ಆದೇಶ ನೀಡಿದ್ದು, ಪರಸ್ಪರ ಮಾತುಕತೆಯಿಂದ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಯಿದೆ. ಕೋರ್ಟ್ನಲ್ಲಿ ಕಾಲಹರಣ ಮಾಡಿದಂತಾಗುತ್ತದೆ ಮತ್ತು ಕಾನೂನಿನ ದುರ್ಬಳಕೆ ಮಾಡಿದಂತಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮೊಹಮ್ಮದ್ ವಸೀಂ ಎಂಬ ಆರೋಪಿಗೆ ಕೋರ್ಟ್ ರಿಲೀಫ್ ನೀಡಿದೆ. ಆರೋಪಿ ಮತ್ತು ದೂರುದಾರರಿಬ್ಬರೂ ಪ್ರಕರಣವನ್ನು ಕೋರ್ಟ್ ಹೊರಗೆ ಇತ್ಯರ್ಥ ಪಡಿಸಲು ನಿರ್ಧರಿಸಿ ಕೋರ್ಟ್ಗೆ ಮನವಿ ಮಾಡಿದ ಹಿನ್ನೆಲೆ ಈ ಆದೇಶ ನೀಡಲಾಗಿದೆ. ನ್ಯಾಯಮೂರ್ತಿ ಕೆ. ನಟರಾಜನ್ ಅವರ ಏಕ ಸದಸ್ಯ ಪೀಠ ಈ ತೀರ್ಪನ್ನು ನೀಡಿದೆ. ಪ್ರಕರಣದ ಆರೋಪಿ ಮತ್ತು ದೂರುದಾರರು ಇಬ್ಬರೂ ಪ್ರಕರಣವನ್ನು ಕೋರ್ಟ್ ಆಚೆಗೆ ಇತ್ಯರ್ಥಪಡಸಿಕೊಳ್ಳಲು ತೀರ್ಮಾನಿಸಿದ್ದಾರೆ ಹೀಗಿರುವಾಗ ತನಿಖೆ ಮುಂದುವರೆಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದರೆ ಅಕ್ಟೋಬರ್ 12 ರಂದು ಕರ್ನಾಟಕ ಹೈಕೋರ್ಟ್ನ ಇನ್ನೊಂದು ಪೀಠ ಪೋಕ್ಸೊ ಪ್ರಕರಣದಲ್ಲಿ ಇದಕ್ಕೆ ವ್ಯತಿರಿಕ್ತವಾದ ತೀರ್ಪು ನೀಡಿತ್ತು. ಮುಸಲ್ಮಾನ ಸಂಪ್ರದಾಯ ಮತ್ತು ವೈಯಕ್ತಿಕ ಧರ್ಮದ ಕಾನೂನು ಪೋಕ್ಸೊ ಪ್ರಕರಣದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪ್ರಾಪ್ತ ಬಾಲಕಿ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡುವ ವಿವೇಚನೆ ಇರುವುದಿಲ್ಲ. ಆಕೆ ಒಪ್ಪಿದ್ದರೂ, ಒಪ್ಪದಿದ್ದರೂ ಅಪ್ರಾಪ್ತೆಯೊಡಗಿನ ಲೈಂಗಿಕ ಕ್ರಿಯೆಯನ್ನು ಕೋರ್ಟ್ ಪೋಕ್ಸೊ ಕಾಯ್ದೆಯಡಿ ಪರಿಗಣಿಸುತ್ತದೆ ಎಂದು ತೀರ್ಪು ನೀಡಿತ್ತು. ಆದರೆ ಕರ್ನಾಟಕದ ಇನ್ನೊಬ್ಬ ನ್ಯಾಯಮೂರ್ತಿ ಇದಕ್ಕೆ ಈ ಪ್ರಕರಣದ ತೀರ್ಪಿನ ವಿರುದ್ಧವಾದ ನಿಲುವನ್ನು ತೋರಿದ್ದಾರೆ.
ಈ ಪ್ರಕರಣದಲ್ಲಿ ಅಪ್ರಾಪ್ತ ಹೆಂಡತಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ನಂತರ ದೂರುದಾರರು ಪ್ರಕರಣವಂತು ಕೈಬಿಡುವಂತೆ ಮನವಿ ಮಾಡಿದ್ದರು. ಇದನ್ನು ಕೋರ್ಟ್ ಪರಿಗಣಿಸಿ ಪ್ರಕರಣವನ್ನು ರದ್ದುಗೊಳಿಸಿತ್ತು.
ಹಿಂದಿನ ಪ್ರಕರಣದಲ್ಲಿ ಆಗಿದ್ದೇನು?:
ಮೊಹಮದೀಯ ಕಾನೂನು ಪ್ರಕಾರ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬಿದರೆ ಪ್ರೌಢಾವಸ್ಥೆ ಎಂದು ಪರಿಗಣಿಸಿ ಮದುವೆ ಮಾಡಬಹುದು ಎಂಬ ವಾದವನ್ನು ಒಪ್ಪದ ಹೈಕೋರ್ಟ್, ವಿಶೇಷ ಕಾಯ್ದೆಯಾದ ‘ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ’ ಯನ್ನು (ಪೋಕ್ಸೋ) ಯಾವುದೇ ‘ವೈಯಕ್ತಿಕ ಕಾನೂನು’ ಅತಿಕ್ರಮಿಸಲು (ಓವರ್ ರೈಡ್) ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
17 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿಯಾಗಿಸಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಕೆ.ಆರ್.ಪುರದ ಅಲೀಂ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿದ್ಯುತ್ ಸ್ಪರ್ಶದಿಂದ ಆನೆ ಸಾವು: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಮೊಹಮದೀಯ ಕಾನೂನಿನಲ್ಲಿ ಪ್ರೌಢಾವಸ್ಥೆಯನ್ನು ಮದುವೆಗೆ ಪರಿಗಣಿಸಲಾಗುತ್ತದೆ. ಸಾಮಾನ್ಯ ಪ್ರೌಢಾವಸ್ಥೆಯ ವಯಸ್ಸು 15 ವರ್ಷ ಆಗಿದೆ. ಹಾಗಾಗಿ, ಈ ಪ್ರಕರಣದಲ್ಲಿ ಸಂತ್ರಸ್ತೆಗೆ ವಯಸ್ಸು 17 ವರ್ಷ ಆಗಿದೆ. ಅರ್ಜಿದಾರ ಆಕೆಯನ್ನು ಮದುವೆಯಾಗಿದ್ದಾನೆ. ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದ ಪರಿಣಾಮ ಸಂತ್ರಸ್ತೆಯ ಗರ್ಭಿಣಿಯಾಗಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9 ಮತ್ತು 10 ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ವಾದವನ್ನು ಒಪ್ಪದ ನ್ಯಾಯಪೀಠ, ಪೋಕ್ಸೋ ವಿಶೇಷ ಕಾಯ್ದೆಯಾಗಿದೆ. ಈ ಕಾಯ್ದೆಯ ಪ್ರಕಾರ ಲೈಂಗಿಕ ಚಟುವಟಿಕೆ ತೊಡಗಿಸಿಕೊಳ್ಳಲು ಬಾಲಕಿಗೆ 18 ವರ್ಷ ಆಗಿರಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಜಾಮೀನಿಗೆ ಅರ್ಹ:
ಅಲ್ಲದೆ, ಹೀಗಿದ್ದರೂ ಪ್ರಕರಣದ ಸಂತ್ರಸ್ತೆಗೆ 17 ವರ್ಷವಾಗಿದ್ದು, ವಿವಾಹ ವಿಚಾರವನ್ನು ಅರ್ಥಮಾಡಿಕೊಳ್ಳಲು ಸಮರ್ಥಳಾಗಿದ್ದಾಳೆ. ಮದುವೆಗೆ ಆಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ಸಾಕ್ಷ್ಯವಿಲ್ಲ. ಅರ್ಜಿದಾರ ಈಗಾಗಲೇ ಸಂತ್ರಸ್ತೆಯ ಗಂಡ ಆಗಿದ್ದಾನೆ. ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಆತನೇ ವಿಚಾರಣಾ ನ್ಯಾಯಾಲಯಕ್ಕೆ ನೀಡಿದ್ದಾನೆ. ಹಾಗಾಗಿ, ಯಾವುದೇ ಸಾಕ್ಷ್ಯ ನಾಶಪಡಿಸುವಂತಹ ಸನ್ನಿವೇಶ ಉದ್ಭವಿಸುವುದಿಲ್ಲ. ಈಗಾಗಲೇ ಮದುವೆಯಾಗಿರುವುದರಿಂದ ಅರ್ಜಿದಾರನನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಯಾವುದೇ ಅಡಚಣೆ ಇಲ್ಲ. ಸಂತ್ರಸ್ತೆಯು ಗರ್ಭಿಣಿಯಾಗಿದ್ದು, ಆಕೆಯನ್ನು ಅರ್ಜಿದಾರ ಆರೈಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿದೆ.
ಅರ್ಜಿದಾರ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು. ಅಷ್ಟು ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ನಾಶ ಪಡಿಸಬಾರದು. ಪೂರ್ವಾನುಮತಿಯಿಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಬಿಟ್ಟು ತೆರಳಬಾರದು. ಪ್ರಕರಣದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಆದೇಶಿಸಿದೆ.
16ರ ಬಾಲೆ ಮೇಲೆ ಅತ್ಯಾಚಾರ: ಆರೋಪಿಗೆ ಜಾಮೀನು ನಕಾರ
ಬೆಂಗಳೂರು: ಮುಸ್ಲಿಂ ಸಮುದಾಯದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯೊಬ್ಬನಿಗೆ ಹೈಕೋರ್ಟ್ ಇದೇ ವೇಳೆ ಜಾಮೀನು ನಿರಾಕರಿಸಿದ್ದು, ವೈಯಕ್ತಿಕ ಕಾನೂನಿನ ಸೋಗಿನಲ್ಲಿ ಜಾಮೀನು ಕೇಳಲು ಸಾಧ್ಯವಿಲ್ಲ ಎಂದು ನುಡಿದಿದೆ.
ಭ್ರೂಣಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿಗೆ ಹೈಕೋರ್ಟ್ ಆದೇಶ
ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಚಿಕ್ಕಮಗಳೂರಿನ ಫರ್ದೀನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪೋಕ್ಸೋ ಮತ್ತು ಭಾರತೀಯ ದಂಡ ಸಂಹಿತೆ ವಸ್ತುನಿಷ್ಠ ಕಾಯ್ದೆಗಳಾಗಿದೆ. ವೈಯಕ್ತಿಕ ಕಾನೂನು ಮುಂದಿಟ್ಟುಕೊಂಡು ಜಾಮೀನು ಕೇಳಲಾಗದು ಎಂದು ಹೇಳಿದೆ.
ಅರ್ಜಿದಾರ ಪರ ವಕೀಲ, ಪ್ರಕರಣದ ಸಂತ್ರಸ್ತೆಗೆ 16 ವರ್ಷ ತುಂಬಿದೆ. ಮಹಮದೀಯ ಕಾನೂನಿನಲ್ಲಿ 15 ವರ್ಷವನ್ನು ಪ್ರೌಢಾವಸ್ಥೆಯಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ, ಪೋಕ್ಸೋ ಕಾಯ್ದೆ ಅನ್ವಯವಾಗುವುದಿಲ್ಲ. ಅರ್ಜಿದಾರನಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ