ಮಾವನ ತಿಥಿ ಮಾಡಲು ಅಳಿಯಗೆ ಕೋರ್ಟ್‌ ಪೆರೋಲ್‌!

Kannadaprabha News, Ravi Janekal |   | Kannada Prabha
Published : Oct 13, 2025, 02:51 PM IST
Karnataka High Court parole for convict

ಸಾರಾಂಶ

ಕೊಲೆ ಪ್ರಕರಣದ ಸಜಾಬಂಧಿಗೆ, ಮಾವನ ಮರಣದ ಅಂತಿಮ ವಿಧಿ-ವಿಧಾನಗಳಲ್ಲಿ ಭಾಗವಹಿಸಲು ಹೈಕೋರ್ಟ್ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ. ಜೈಲು ಕೈಪಿಡಿಯಲ್ಲಿ ಅವಕಾಶವಿಲ್ಲದಿದ್ದರೂ, ಅನಾರೋಗ್ಯಪೀಡಿತ ಪತ್ನಿಗೆ ಆಸರೆಯಾಗಲು ಮತ್ತು ಮಾನವೀಯ ನೆಲೆಯಲ್ಲಿ ನ್ಯಾಯಾಲಯ ಈ ವಿಶೇಷ ಆದೇಶವನ್ನು ನೀಡಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಅ.13) : ಮಾವನ ಮರಣಕ್ಕೆ ಪೆರೋಲ್‌ ನೀಡಲು ಜೈಲಿನ ಕೈಪಿಡಿಯಲ್ಲಿ ಅವಕಾಶ ಇಲ್ಲದಿದ್ದರೂ, ತಂದೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಅನಾರೋಗ್ಯಪೀಡಿತ ಪತ್ನಿಗೆ ನೆರವಾಗಲು, ಹೆಣ್ಣು ಕೊಟ್ಟ ತಂದೆಯ ತಿಥಿ ಹಾಗೂ ಅಂತಿಮ ವಿಧಿ-ವಿಧಾನ ಪೂರೈಸಲು ಕೊಲೆ ಕೇಸಲ್ಲಿ ಸಜಾ ಬಂಧಿಯಾಗಿರುವ ವ್ಯಕ್ತಿಗೆ 15 ದಿನಗಳ ಪೆರೋಲ್‌ ನೀಡುವಂತೆ ಜೈಲಧಿಕಾರಿಗಳಿಗೆ ಆದೇಶಿಸಿ ಹೈಕೋರ್ಟ್‌ ಮಾನವೀಯತೆ ಮೆರೆದಿದೆ.

ಜೈಲು ಕೈಪಿಡಿಯ ಕಾರಣ ನೀಡಿ ಪತ್ನಿಯ ತಂದೆಯ (ಮಾವ) ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೊಲೆ ಪ್ರಕರಣದಲ್ಲಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ನವೀನ್‌ಗೆ ತುರ್ತು ಪೆರೋಲ್‌ ನೀಡಲು ಜೈಲಧಿಕಾರಿಗಳು ನಿರಾಕರಿಸಿದ್ದರು. ಇದರಿಂದ ತಂದೆಯ ಅಂತಿಮ ವಿಧಿ-ವಿಧಾನ ಮಾಡಲು ಪತಿಯನ್ನು ಪೆರೋಲ್‌ ಮೇಲೆ ಬಿಡುಗಡೆಗೊಳಿಸಲು ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸುವಂತೆ ಕೋರಿ ಹಾಸನದ ಚನ್ನರಾಯಪಟ್ಟಣದ ನಿವಾಸಿ ಚೈತ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಭ್ರಷ್ಟಾಚಾರ ಕಾಯ್ದೆ ಸಹಕಾರಿ ನೌಕರಗೂ ಅನ್ವಯ: ಹೈಕೋರ್ಟ್

ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರ ಪೀಠ, ನವೀನ್‌ಗೆ ಅ.10ರಿಂದ ಅನ್ವಯವಾಗುವಂತೆ ತುರ್ತು ಪೆರೋಲ್‌ ಮೇಲೆ 15 ದಿನಗಳ ಕಾಲ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದೆ.

ಅಲ್ಲದೆ, ಪೆರೋಲ್‌ ಅವಧಿಯಲ್ಲಿ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು. ಪೆರೋಲ್‌ ಅವಧಿಯಲ್ಲಿ ಯಾವುದೇ ಕ್ರಿಮಿನಲ್‌ ಅಪರಾಧದಲ್ಲಿ ಭಾಗಿಯಾಗಬಾರದು ಎಂದು ನವೀನ್‌ಗೆ ಹೈಕೋರ್ಟ್‌ ಷರತ್ತನ್ನೂ ವಿಧಿಸಿದೆ.

ಪತ್ರ ಬರೆದರೂ ಪರಿಗಣಿಸಿಲ್ಲ:

ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಡಿ.ಮೋಹನ್‌ ಕುಮಾರ್‌ ವಾದ ಮಂಡಿಸಿ, ಸೆ.27ರಂದು ಚೈತ್ರಾ ತಂದೆ ಅಂದರೆ ನವೀನ್‌ ಮಾವ ಸಾವಿಗೀಡಾಗಿದ್ದರು. ಮಾವನನ್ನು ಕೊನೆಯ ಬಾರಿ ನೋಡಲು, ಅಂತಿಮ ವಿಧಿ-ವಿಧಾನ ನೆರವೇರಿಸಲು ತುರ್ತು ಪೆರೋಲ್‌ ಮೇಲೆ ನವೀನ್‌ನನ್ನು 15 ದಿನಗಳ ಕಾಲ ಬಿಡುಗಡೆ ಮಾಡಬೇಕು ಎಂದು ಕೋರಿ ಜೈಲು ಅಧೀಕ್ಷಕರಿಗೆ ಚೈತ್ರಾ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಅದನ್ನು ಪರಿಗಣಿಸಿಲ್ಲ ಮತ್ತು ನವೀನ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿಲ್ಲ. ಕರ್ನಾಟಕ ಕಾರಾಗೃಹಗಳ ಅಧಿನಿಯಮಗಳು-1974ರ ನಿಯಮ 191(1) ಅನ್ವಯ ಕೈದಿಯ ಕುಟುಂಬದ ಯಾವುದೇ ಸದಸ್ಯರು, ಹತ್ತಿರದ ಸಂಬಂಧಿ ಅನಾರೋಗ್ಯದಿಂದ ನರಳುತ್ತಿದ್ದರೆ ಅಥವಾ ಸಾವು ಸಂಭವಿಸಿದರೆ. ಸಜಾ ಕೈದಿಯನ್ನು ತುರ್ತು ಪೆರೋಲ್‌ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ ಎಂದು ವಿವರಿಸಿದರು.

ಅಲ್ಲದೆ, ಮಾವ ಮೃತರಾದರೆ ಅಳಿಯನಾದ ಸಜಾಬಂಧಿಗೆ ಪೆರೋಲ್‌ ನೀಡುವ ಅವಕಾಶ ಜೈಲಿನ ಕೈಪಿಡಿಯಲ್ಲಿಲ್ಲ ಎಂಬುದಾಗಿ ಜೈಲಾಧಿಕಾರಿಗಳು ಹೇಳುತ್ತಿದ್ದಾರೆ. ಚೈತ್ರಾ ಅವರು ತಂದೆಯನ್ನು ಕಳೆದುಕೊಂಡಿದ್ದಾರೆ. ಅವರ ಕುಟುಂಬ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಆಕೆಗೆ ಪತಿಯ ಬೆಂಬಲ, ನೆರವಿನ ಅಗತ್ಯವಿದೆ. ಚೈತ್ರಾ ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪತ್ನಿಯನ್ನು ಸಂತೈಸಲು, ಆರೈಕೆ ಮಾಡಲು ಮತ್ತು ಆಕೆಯ ವೈದ್ಯಕೀಯ ಖರ್ಚು-ವೆಚ್ಚ ಭರಿಸಲು ಮತ್ತು ಮಾವನ ತಿಥಿ ಸೇರಿ ಇತರೆ ಅಂತಿಮ ವಿಧಿ-ವಿಧಾನ ಪೂರೈಸಲು ನವೀನ್‌ ಮನೆಯಲ್ಲಿರುವುದು ಅನಿವಾರ್ಯ. ಹೀಗಾಗಿ, ಆತನನ್ನು 30 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಇದನ್ನೂ ಓದಿ: ವಿಚ್ಛೇದನ ಆಗಿದ್ದರೂ ಪುತ್ರಿಯ ಪೋಷಣೆ ತಂದೆ ಕರ್ತವ್ಯ: ಹೈಕೋರ್ಟ್, ಏನಿದು ಪ್ರಕರಣ?

ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕೈಪಿಡಿ-2021ರ ನಿಯಮ ಪ್ರಕಾರ ಕೈದಿಯ ಅಜ್ಜ-ಅಜ್ಜಿ, ತಂದೆ-ತಾಯಿ, ಪತ್ನಿ, ಸ್ವಂತ ಮಗ-ಮಗಳು, ಮೊಮ್ಮಗ-ಮೊಮ್ಮಗಳು, ಸಹೋದರ-ಸಹೋದರಿ ಸಾವಿಗೀಡಾದರೆ, ಗಂಭೀರ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದರೆ ಪೆರೋಲ್‌ ಮೇಲೆ ಬಿಡುಗಡೆ ಮಾಡಬಹುದು. ಪ್ರಕರಣದಲ್ಲಿ ಪತ್ನಿಯ ತಂದೆ ಸಾವಿಗೀಡಾಗಿದ್ದು, ಪೆರೋಲ್‌ ಕೋರಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.

ಈ ವಾದ ಒಪ್ಪದ ನ್ಯಾಯಪೀಠ, ನವೀನ್‌ ಅವರ ಮಾವ ಅಂದರೆ ಹತ್ತಿರದ ಸಂಬಂಧಿ ಸಾವಿಗೀಡಾಗಿದ್ದಾರೆ. ಅದನ್ನು ಪರಿಗಣಿಸಿ ಪೆರೋಲ್‌ ಮೇಲೆ ತುರ್ತಾಗಿ ನವೀನ್‌ ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕಿದೆ ಎಂದು ಜೈಲಧಿಕಾರಿಗಳಿಗೆ ನಿರ್ದೇಶಿಸಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!