ಮುಸ್ಲಿಂ ಬೋರ್ಡ್ ಮನವಿ ತಿರಸ್ಕರಿಸಿದ ಹೈಕೋರ್ಟ್, ಹುಬ್ಭಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ!

By Suvarna NewsFirst Published Aug 30, 2022, 5:40 PM IST
Highlights

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ವಿವಾದ ತೀವ್ರ ತಲೆನೋವಾಗಿ ಪರಿಣಮಿಸುತ್ತಿದೆ. ಹುಬ್ಭಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ಬೋರ್ಡ್‌ಗೆ ಹಿನ್ನಡೆಯಾಗಿದೆ. ಹೈಕೋರ್ಟ್ ಗಣೇಶ ಹಬ್ಬಕ್ಕೆ ಅನುಮತಿ ನೀಡಿದೆ.
 

ಬೆಂಗಳೂರು(ಆ.30):  ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಹುಬ್ಬಳ್ಳಿ ಹಾಗೂ ಧಾರವಾಜ ಮಹಾನಗರ ಪಾಲಿಕೆ ನಿರ್ಧಾರವನ್ನು ಪ್ರಶ್ನಿಸಿ ಮುಸ್ಲಿಂ ಬೋರ್ಡ್ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ತರಿಸ್ಕರಿಸಿದೆ. ಇದೇ ವೇಳೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕೋರ್ಟ್ ಅನುಮತಿ ನೀಡಿದೆ. ಈ ಮೂಲಕ ಹಿಂದೂ ಸಂಘಟನೆಗಳ ಹೋರಾಟಕ್ಕೆ ಗೆಲುವು ದಕ್ಕಿದೆ.  ಹಲವು ಸರಣಿ ಸಭೆಗಳನ್ನು ನಡೆಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿತ್ತು. ಇತ್ತೀಚಿಗೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಲ್ಲ ಪಕ್ಷಗಳ ಆಗ್ರಹದ ಮೇರೆಗೆ ಸದನ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ ಮೂವರು ಬಿಜೆಪಿಗರಿದ್ದರೆ, ಇಬ್ಬರು ಕಾಂಗ್ರೆಸ್ಸಿಗರಿದ್ದರು. ನಾಲ್ಕಾರು ಬಾರಿ ಸಭೆ ನಡೆದರೂ ಕಾಂಗ್ರೆಸ್‌ ಸದಸ್ಯರು ಭಾಗಿಯಾಗಿರಲಿಲ್ಲ. ಈ ಸಮಿತಿ ನೀಡಿದ ವರದಿ ಆಧರಿ ಕಾನೂನು ತಜ್ಞರು ಸೇರಿದಂತೆ ಹಲವರನ್ನು ಸಂಪರ್ಕಿಸಿ ಚರ್ಚಿಸಿ ಪಾಲಿಕೆ ಅನುಮತಿ ನೀಡಿತ್ತು. ಆದರೆ ಈ ನಿರ್ಧಾರವನ್ನು ಪ್ರಶ್ನಿಸಿ ಮುಸ್ಲಿಮ್ ಬೋರ್ಡ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಮುಸ್ಲಿಮ್ ಮನವಿಯನ್ನು ತರಿಸ್ಕರಿಸಿದೆ. ಜೊತೆಗೆ ಗಣೇಶ ಹಬ್ಬಕ್ಕೆ ಅನುಮತಿ ನೀಡಿದೆ.

ಹುಬ್ಬಳ್ಳಿ ಈದ್ಗಾ ಮೈದಾನ ಮಹಾನಗರ ಪಾಲಿಕೆಯ ಆಸ್ತಿ. ಇಲ್ಲಿ ಎರಡು ದಿನ ಮುಸ್ಲಿಮ ಸಮಾಜ ಬಾಂಧವರಿಗೆ ಪ್ರಾರ್ಥನೆ ಮಾಡಲು ಅವಕಾಶವಿದೆ. ಇನ್ನುಳಿದ 363 ದಿನ ಪೂರ್ಣವಾಗಿ ಪಾಲಿಕೆಯ ಆಡಳಿತಕ್ಕೊಳಪಟ್ಟಿದೆ. ಎರಡು ದಿನ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಯಾವುದೇ ಬಗೆಯ ಸಮಸ್ಯೆಯಾಗದು. ಕಾನೂನನ್ನು ಮೀರಿ ಅನುಮತಿಯನ್ನೇನೂ ಕೊಟ್ಟಿಲ್ಲ. ಕಾನೂನು ತಜ್ಞರ ಅಭಿಪ್ರಾಯಪಡೆದುಕೊಂಡೇ ಅನುಮತಿ ಕೊಡಲಾಗಿದೆ. ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮೇಯರ್‌ ಈರೇಶ ಅಂಚಟಗೇರಿ ತಿಳಿಸಿದ್ದರು. ಆದರೆ ಈ ನಿರ್ಧಾರ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣಾಗಿತ್ತು. 

ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್, ಕಾಂಗ್ರೆಸ್‌ ವಿರೋಧ ಮಾಡಿಲ್ಲ ಎಂದ ಮೇಯರ್

ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಆಸಕ್ತಿ ಕೋರಿ ಆರು ಅರ್ಜಿಗಳು ಬಂದಿವೆ. ಭಗತ್‌ ಸಿಂಗ್‌ ಸೇವಾ ಸಮಿತಿ, ಹಿಂದೂ ಜಾಗರಣ ವೇದಿಕೆ, ರಾಣಿಚೆನ್ನಮ್ಮ (ಈದ್ಗಾ) ಮೈದಾನ ಗಜಾನನ ಉತ್ಸವ ಸಮಿತಿ, ಗಜಾನನ ಮಹಾಮಂಡಳ, ಶ್ರೀರಾಮಸೇನೆ ಸೇರಿದಂತೆ ಆರು ಸಂಘಟನೆಗಳು ಮುಂದೆ ಬಂದಿವೆ. ಇವುಗಳಲ್ಲಿ ಒಂದು ಸಂಘಟನೆಗೆ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು. ಅದನ್ನು ಮಂಗಳವಾರ ನಿರ್ಧರಿಸಲಾಗುವುದು ಎಂದು ಮೇಯರ್‌ ಈರೇಶ ಅಂಚಟಗೇರಿ ತಿಳಿಸಿದ್ದರು. 

ಬೆಂಗಳೂರು ಈದ್ಗಾ ಮೈದಾನದಲ್ಲಿನ ಗಣೇಶೋತ್ಸವ ಆಚರಣೆ ಕುರಿತು ವಿಚಾರಣೆ ಸದ್ಯ ಸುಪ್ರೀಂ ಕೋರ್ಟ‌ನಲ್ಲಿ ನಡೆಯುತ್ತಿದೆ. ಕೆಲವೇ ಹೊತ್ತಲ್ಲಿ ಈ ಕುರಿತು ಮಹತ್ವದ ಆದೇಶ ಹೊರಬೀಳಲಿದೆ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಕೇಸ್, ಮುಖ್ಯ ನ್ಯಾಯಮೂರ್ತಿಗೆ ಪ್ರಕರಣ ವರ್ಗಾಯಿಸಿದ ದ್ವಿಸದಸ್ಯ ಪೀಠ!

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಪಾಲಿಕೆಯೂ ಸೂಕ್ತ ನಿರ್ಣಯ ಕೈಗೊಂಡಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸೌಹಾರ್ದಯುತವಾಗಿ ಆಚರಣೆಗೆ ಸಂಬಂಧಪಟ್ಟಂತೆ ನಿರ್ಣಯ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

click me!