
ಬೆಂಗಳೂರು (ಮೇ.16): ಅಶ್ವಗಂಧ ಸಸ್ಯದ ಎಲೆಗಳು ಅಥವಾ ಅದರ ಬೇರುಗಳ ಸಾರವನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದನ್ನು ನಿಷೇಧಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಫಾಸಿ) ನೀಡಿರುವ ಸಲಹೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ನಿಷೇಧದ ಪ್ರಕಟಣೆ ಹೊರಡಿಸಿದ್ದ ಎಫ್ಎಸ್ಎಸ್ಎಐ ಕ್ರಮವನ್ನು ಪ್ರಶ್ನಿಸಿ ‘ಸಾಮಿ-ಸಬಿನ್ಸಾ ಗ್ರೂಪ್ ಲಿಮಿಟೆಡ್’ ಮತ್ತು ‘ಕೆರ್ರಿ ಇಂಕ್’ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ ಮತ್ತು ‘ಫಾಸಿ’ಗೆ ಸೂಚನೆ ನೀಡಿ ವಿಚಾರಣೆಯನ್ನು ಜೂ.8ಕ್ಕೆ ಮುಂದೂಡಿದೆ. ಅಲ್ಲದೆ, 2026ರ ಏಪ್ರಿಲ್ 16ರಂದು ಹೊರಡಿಸಲಾದ ಈ ವಿವಾದಿತ ಸಲಹಾ ಪ್ರಕಟಣೆ ಅರ್ಜಿದಾರರಿಗೆ ಮಾತ್ರ ಸೀಮಿತವಾಗಿ ಮುಂದಿನ ವಿಚಾರಣೆಯವರೆಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಅಶ್ವಗಂಧದ ಎಲೆಗಳಲ್ಲಿ ‘ವಿಥಾಫೆರಿನ್-ಎ’ ಎಂಬ ಅಂಶ ಹೆಚ್ಚಿರುತ್ತದೆ. ಇದು ಯಕೃತ್ ಹಾಗೂ ಜೀರ್ಣಾಂಗಕ್ಕೆ ತೊಂದರೆ ನೀಡಲಿದೆ. ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿತ್ತು. ಇದೇ ಕಾರಣದಿಂದ ಆಯುಷ್ ಸಚಿವಾಲಯವು ಅಶ್ವಗಂಧದ ಬಳಕೆ ಮಾಡದಂತೆ ನಿರ್ದೇಶನ ನೀಡಿತ್ತು. ಅದರ ಆಧಾರದಲ್ಲಿ ಫಾಸಿ ಸಲಹಾ ಪ್ರಕಟಣೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ಈ ಕಂಪನಿಗಳು ಕಳೆದ 30 ವರ್ಷಗಳಿಂದಲೂ ಅಶ್ವಗಂಧದಿಂದ ತಮ್ಮ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿವೆ. ಈವರೆಗೆ ಯಾವುದೇ ಗಂಭೀರ ಸುರಕ್ಷತಾ ಸಮಸ್ಯೆಗಳು ಕಂಡುಬಂದಿಲ್ಲ. ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ಮಾನದಂಡಗಳ ಪ್ರಕಾರ ಎಲೆಗಳು ಸೇರಿ ಸಸ್ಯದ ಬೇರುಗಳು ಮತ್ತು ಸಾರಗಳಿಂದ ಅಶ್ವಗಂಧ ಉತ್ಪನ್ನ ಸಿದ್ಧಪಡಿಸಲಾಗುತ್ತಿದೆ ಎಂದು ವಾದಿಸಿದರು.
ಅಲ್ಲದೆ, 2016ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳಿಗೆ ಅಧಿಕೃತ ತಿದ್ದುಪಡಿ ತರದೆ, ಕೇವಲ ಒಂದು ‘ಸಲಹಾ ಪತ್ರ’ದ ಮೂಲಕ ಯಾವುದೇ ಪದಾರ್ಥದ ಬಳಕೆ ನಿಷೇಧಿಸಲು ಸಾಧ್ಯವಿಲ್ಲ. ಈ ಸಲಹೆಯಿಂದ ಅರ್ಜಿದಾರರ ಕಂಪನಿಯ ಉತ್ಪಾದನೆ ಮತ್ತು ರಫ್ತಿನ ಮೇಲೆ ಭಾರಿ ಪರಿಣಾಮ ಬೀರಲಿದ್ದು, ವ್ಯವಹಾರಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ. ಹಾಗಾಗಿ, ಸಲಹಾ ಪ್ರಕಟಣೆ ರದ್ದತಿಗೆ ಅರ್ಹವಾಗಿದೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ