
ಬೆಂಗಳೂರು (ಮಾ.31): ಹಣಕಾಸು ವ್ಯವಹಾರದಲ್ಲಿ ತನ್ನ ಪಾಸ್ಪೋರ್ಟ್ ಕಸಿದುಕೊಂಡು ಕಿರುಕುಳ ನೀಡುತ್ತಿರುವ ವ್ಯಕ್ತಿ ವಿರುದ್ಧ ‘ಕರ್ನಾಟಕ ದುಬಾರಿ ಬಡ್ಡಿದರ ವಿಧಿಸುವುದನ್ನು ನಿಷೇಧಿಸುವ ಕಾಯ್ದೆ-2002’ ಅಡಿ ಕ್ರಮ ಜರುಗಿಸಲು ಕೋರಿ ಹಿರಿಯ ನಾಗರಿಕರೊಬ್ಬರು ದಾಖಲಿಸಿರುವ ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ನಗರದ ಹಿರಿಯ ನಾಗರಿಕರೊಬ್ಬರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ದುಂ ಅವರ ಪೀಠ ಈ ನಿರ್ದೇಶನ ನೀಡಿದೆ.
ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಅರ್ಜಿದಾರರ ದೂರು ಪ್ರಾಥಮಿಕವಾಗಿ ಸಂಜ್ಞೇಯ (ಗಂಭೀರ ಸ್ವರೂಪದ) ಅಪರಾಧ ಒಳಗೊಂಡಿದೆ. ಕಾಯ್ದೆಯು ಅತಿಯಾದ ಬಡ್ಡಿ ವಿಧಿಸುವುದು ಮತ್ತು ಬಲವಂತದ ವಸೂಲಿಯನ್ನು ನಿರ್ಬಂಧಿಸುತ್ತದೆ. ಈ ಅಪರಾಧಕ್ಕೆ ಹತ್ತು ವರ್ಷದವರೆಗೆ ಜೈಲು ಮತ್ತು 5 ಲಕ್ಷ ರು.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಅಲ್ಲದೆ, 10 ವರ್ಷಗಳವರೆಗೆ ವಿಸ್ತರಿಸುವ ಜೈಲು ಶಿಕ್ಷೆಗೆ ಅರ್ಹವಾದ ನಿಬಂಧನೆಯನ್ನು ಒಳಗೊಂಡ ಅಂಶಗಳನ್ನು ದೂರುದಾರರು ತಿಳಿಸುತ್ತಿರುವಾಗ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ನಿಷ್ಕ್ರಿಯರಾಗಲು ಸಾಧ್ಯವಿಲ್ಲ. ದೂರಿನ ಕುರಿತು ಕೇವಲ ಪ್ರಾಥಮಿಕ ತನಿಖೆಯನ್ನು ಪರಿಗಣಿಸಲಾಗದು. ಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸುವ ಮಾಹಿತಿ ಸ್ವೀಕರಿಸಿದ ನಂತರ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸುವುದು ಕಡ್ಡಾಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಮೀರಿ ಮುಂದಿನ ಕ್ರಮ ಜರುಗಿಸಲು ತನಿಖಾ ಅಧಿಕಾರಿ ಹಿಂಜರಿಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಪೀಠ, ಯಾವುದೇ ವ್ಯಕ್ತಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ ಅಥವಾ ಸಾಲಗಳನ್ನು ವಸೂಲಿ ಮಾಡಲು ಕಿರುಕುಳ ಅಥವಾ ಬಲವಂತದ ಕ್ರಮ ಅನುಸರಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಸಾಲದಾತರಿಂದ ಸಮಾಜದ ದುರ್ಬಲ ವರ್ಗಗಳ ಶೋಷಣೆ ಪರಿಹರಿಸಲು ತಿದ್ದುಪಡಿ ನಿಬಂಧನೆಯನ್ನು ಶಾಸಕಾಂಗ ಜಾರಿಗೆ ತಂದಿದೆ. ಆದ್ದರಿಂದ ಅರ್ಜಿದಾರರ ದೂರಿನ ಸಂಬಂಧ ಪೊಲೀಸರು ಪ್ರಾಥಮಿಕ ತನಿಖೆಗೆ ವಿಷಯವನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ. ಆ ಮೂಲಕ ವಿಳಂಬ ನೀತಿ ಅನುಸರಿಸುವುದು ತರವಲ್ಲ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಕಾನೂನಿನ ಪ್ರಕಾರ ತನಿಖೆ ಮುಂದುವರಿಸಬೇಕು ಎಂದು ನಿರ್ದೇಶಿಸಿದೆ.
ತಾನು ಓರ್ವ ವ್ಯಕ್ತಿಯೊಂದಿಗೆ ಆರ್ಥಿಕ ವ್ಯವಹಾರ ನಡೆಸುತ್ತಿದ್ದೇನೆ. ಅವರು ತಮ್ಮ ಪಾಸ್ಪೋರ್ಟ್ ಕಸಿದುಕೊಂಡು ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಕರ್ನಾಟಕ ದುಬಾರಿ ಬಡ್ಡಿದರ ವಿಧಿಸುವುದನ್ನು ನಿಷೇಧಿಸುವ ಕಾಯ್ದೆ-2002ರಡಿ ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರು 2025ರ ಡಿ.12ರಂದು ನಗರ ಪೊಲೀಸ್ ಆಯುಕ್ತರು ಹಾಗೂ 2026ರ ಫೆ.27ರಂದು ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ