
ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷದ (human wildlife conflict) ಪ್ರಕರಣಗಳಲ್ಲಿ ಶೇ. 183ರಷ್ಟು ಭಾರೀ ಏರಿಕೆ ಕಂಡಿರುವುದು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಆತಂಕದ ವಿಷಯವಾಗಿದೆ. 2019ರಲ್ಲಿ ನೂರಕ್ಕೂ ಕಡಿಮೆ ಘಟನೆಯಿಂದ ಆರಂಭವಾದ ಈ ಉಲ್ಬಣ 2024ರ ಅಂತ್ಯದ ವೇಳೆಗೆ ಸಾವಿರಾರು ಪ್ರಕರಣಗಳವರೆಗೆ ಏರಿಕೆ ಕಂಡಿದ್ದು, ವಿಶೇಷವಾಗಿ ದಕ್ಷಿಣ ಪಶ್ಚಿಮ ಘಟ್ಟಗಳ (southern Western Ghats) ಪ್ರದೇಶಗಳಲ್ಲಿ ಈ ಸಂಘರ್ಷ ಹೆಚ್ಚು ಸಂಭವಿಸುತ್ತಿದೆ.
ಇತ್ತೀಚೆಗೆ ‘ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್’ (Indian Society of Remote Sensing) ಜರ್ನಲ್ನಲ್ಲಿ ಪ್ರಕಟವಾದ "ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿನ ಮಾನವ-ವನ್ಯಜೀವಿ ಸಂಘರ್ಷದ ತಾಣಗಳ ಭೌಗೋಳಿಕ ಗುರುತಿಸುವಿಕೆ" (‘Geospatial Identification of Human-Wildlife Conflict Hotspots in the Southern Western Ghats) ಎಂಬ ಅಧ್ಯಯನವು 2019 ರಿಂದ 2023ರ ಅವಧಿಯಲ್ಲಿ 34,000ಕ್ಕೂ ಹೆಚ್ಚು ಸಂಘರ್ಷ ಘಟನೆಗಳನ್ನು ಕರ್ನಾಟಕದಲ್ಲಿ ದಾಖಲಿಸಿದೆ. ಕರ್ನಾಟಕ ಹಾಗೂ ತೆಲಂಗಾಣದ ಹಲವು ಪ್ರಮುಖ ಸಂಸ್ಥೆಗಳ ತಜ್ಞರು ಈ ಸಂಶೋಧನೆ ನಡೆಸಿದ್ದು, ಭವಿಷ್ಯದ ನಿರ್ವಹಣಾ ತಂತ್ರಗಳಿಗೆ ಅಗತ್ಯವಾದ ದಿಕ್ಕು ಮತ್ತು ಆಳವಾದ ಒಳನೋಟಗಳನ್ನು ನೀಡಿದೆ.
ಈ ಅವಧಿಯಲ್ಲಿ ಸರ್ಕಾರವು ಬಲಿಪಶುಗಳಿಗೆ ಒಟ್ಟು ₹27 ಕೋಟಿ ಪರಿಹಾರ ಹಣ ವಿತರಿಸಿದೆ. ಅಧ್ಯಯನದ ಪ್ರಕಾರ, ಸಂಘರ್ಷಗಳಲ್ಲಿ 17 ಪ್ರಭೇದಗಳ ಪ್ರಾಣಿಗಳು ಭಾಗಿಯಾಗಿದ್ದು, ಶೇ. 98 ರಷ್ಟು ಪ್ರಕರಣಗಳು ಆನೆ, ಹುಲಿ ಹಾಗೂ ಚಿರತೆಗಳಿಂದ ಸಂಭವಿಸಿದ್ದವು. ಇತರ ಘಟನೆಗಳಲ್ಲಿ ಕಾಡುಹಂದಿ, ಗೌರ್, ಚುಕ್ಕೆ ಜಿಂಕೆ, ನವಿಲು ಮತ್ತು ಕರಡಿ ಮೊದಲಾದ ಪ್ರಾಣಿಗಳು ಭಾಗವಹಿಸಿದ್ದವು.
ಮಾನ್ಯವಾದ ನಂಬಿಕೆಯ ಪ್ರಕಾರ ವನ್ಯಜೀವಿಗಳು ಬೇಸಿಗೆಯಲ್ಲಿ ಆಹಾರ ಹಾಗೂ ನೀರಿಗಾಗಿ ಮಾನವ ವಸಾಹತುಗಳಿಗೆ ನುಸುಳುತ್ತವೆ ಎನ್ನಲಾಗುತ್ತಿತ್ತು. ಆದರೆ ಅಧ್ಯಯನದ ಪ್ರಕಾರ ಶೇ. 30.9 ಸಂಘರ್ಷಗಳು ಜುಲೈ-ಸೆಪ್ಟೆಂಬರ್ನ ಮಳೆಗಾಲದಲ್ಲಿ ಸಂಭವಿಸಿವೆ ಮತ್ತು ಶೇ. 29.4 ಪ್ರಕರಣಗಳು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ನಡೆದಿವೆ.
ಇದಕ್ಕೆ ಪ್ರಮುಖ ಕಾರಣವೆಂದರೆ ಲಂಟಾನಾ ಕ್ಯಾಮರಾ ಹಾಗೂ ಸೆನ್ನಾ ಸ್ಪೆಕ್ಟಾಬಿಲಿಸ್ ಎಂಬ ಆಕ್ರಮಣಕಾರಿ ಸಸ್ಯಜಾತಿಗಳ ದಟ್ಟತೆಯು ಪ್ರಾಣಿಗಳ ಚಲನೆಗೆ ಅಡ್ಡಿಯಾಗುವುದಲ್ಲದೆ ಅವುಗಳಿಗೆ ಆಹಾರದ ಕೊರತೆಯನ್ನೂಂಟುಮಾಡುತ್ತಿದೆ. ಹಿಂದಿನ ಕಾಲದಲ್ಲಿ ಬೆಳೆಯಲಾಗುತ್ತಿದ್ದ ಏಕಸಂಸ್ಕೃತಿ ತೋಟಗಳು ಕೂಡ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ ಎಂದು ಸಂಶೋಧಕರಾದ ಜಿ.ಎಂ. ಪವಿತ್ರಾ ತಿಳಿಸಿದ್ದಾರೆ.
ಅಧಿಕ ಸಂಘರ್ಷಗಳು ಕೃಷಿ ಭೂಮಿಗಳು, ತೋಟಗಳು ಅಥವಾ ತೋಟಗಾರಿಕಾ ಪ್ರದೇಶಗಳಲ್ಲಿ ಸಂಭವಿಸುತ್ತಿವೆ. ಆನೆಗಳಿಂದ ಸಂಭವಿಸಿರುವ ಹಾನಿಯು ಶೇ. 97.8 ರಷ್ಟು ಬೆಳೆ ನಾಶಕ್ಕೆ ಕಾರಣವಾಗಿದ್ದು, ಗೌರ್ಗಳಿಂದ ಶೇ. 1.4ರಷ್ಟು ಹಾನಿಯಾಗಿದೆ.
ಮಾನವ ವಸಾಹತುಗಳಿಗೆ 100 ಮೀ. ರಿಂದ 500 ಮೀ.ದೊಳಗಿನ ಅಂತರದಲ್ಲಿ 5,000ಕ್ಕೂ ಹೆಚ್ಚು ಘಟನೆಗಳು ವರದಿಯಾಗಿವೆ. ಆನೆಗಳು ಎಲ್ಲಾ ಅಂತರದಲ್ಲೂ ಕಾಣಿಸಿಕೊಂಡರೂ, ಹುಲಿ ಮತ್ತು ಚಿರತೆಗಳಂತಹ ಮಾಂಸಾಹಾರಿಗಳು 100 ಮೀ.ದೊಳಗಿನ ವಸಾಹತುಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವುದಾಗಿ ಅಧ್ಯಯನ ತಿಳಿಸಿದೆ.
ರಸ್ತೆಗಳ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ವನ್ಯಜೀವಿಗಳ ನೈಸರ್ಗಿಕ ಚಲನೆಗೆ ತೊಂದರೆ ಉಂಟುಮಾಡುತ್ತಿವೆ. ಕಾರಿಡಾರ್ ಪ್ರದೇಶಗಳಲ್ಲಿ ಬೆಳೆ ಬೆಳೆಯುವುದರಿಂದ ಆಹಾರ ಲಭ್ಯತೆ ಹೆಚ್ಚಾಗಿ ಪ್ರಾಣಿಗಳು ಆ ಪ್ರದೇಶಗಳಿಗೆ ಆಕರ್ಷಿತವಾಗುತ್ತಿವೆ. ಇದರಿಂದ ಸಂಘರ್ಷದ ಪ್ರಮಾಣ ಹೆಚ್ಚಾಗಿದೆ.
ಆನೆಗಳು ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ (750-1000 ಮೀ.) ಹೆಚ್ಚು ಕಾಣಿಸಿಕೊಂಡರೆ, ಹುಲಿ ಹಾಗೂ ಚಿರತೆಗಳಂತಹ ಮಾಂಸಾಹಾರಿಗಳು ಅರಣ್ಯ ಅಂಚು ಹಾಗೂ ಕಡಿಮೆ ಎತ್ತರದ ಪ್ರದೇಶಗಳಲ್ಲಿ (500-750 ಮೀ.) ಹೆಚ್ಚು ಚಟುವಟಿಕೆ ನಡೆಸಿರುವುದು ಅಧ್ಯಯನದಲ್ಲಿ ಬಹಿರಂಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ