
ವಿಧಾನ ಪರಿಷತ್: ಮೂರು ತಿಂಗಳೊಳಗೆ 1,715 ಆಂಬ್ಯುಲೆನ್ಸ್ಗಳನ್ನು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮೂಲಕ ಸರ್ಕಾರವೇ ವಹಿಸಿಕೊಂಡು ಸಹಾಯವಾಣಿ ಸಂಖ್ಯೆ 112 ಸಾಫ್ಟ್ವೇರ್ಗೆ ವಿಲೀನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಜೆಡಿಎಸ್ನ ಟಿ.ಎನ್.ಜವರಾಯಿಗೌಡ ಅವರ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪರವಾಗಿ ಉತ್ತರಿಸಿದ ಅವರು,ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಜ್ಯದ 108 ಆರೋಗ್ಯ ಕವಚ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1,715 ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಆಂಬ್ಯುಲೆನ್ಸ್ಗಳ ಕೊರತೆಯಿಲ್ಲ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಪ್ರಕಾರ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 820 ಆಂಬ್ಯುಲೆನ್ಸ್ ಇರಬೇಕು. ಆದರೆ, ಈಗ ರಾಜ್ಯದಲ್ಲಿ 1,715 ಆಂಬ್ಯುಲೆನ್ಸ್ ಕಾರ್ಯಾಚರಣೆ ನಡೆಸುತ್ತಿದ್ದು, ಕೊರತೆ ಎದುರಾಗಿಲ್ಲ. 108 ಆರೋಗ್ಯ ಕವಚ ಯೋಜನೆಯಡಿ 715 ಆಂಬ್ಯುಲೆನ್ಸ್ಗಳಿದ್ದು, ಇತ್ತೀಚೆಗೆ 262 ಆಂಬ್ಯುಲೆನ್ಸ್ ಖರೀದಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಕವಚ ಯೋಜನೆಯಡಿ 715 ಆಂಬ್ಯುಲೆನ್ಸ್ಗಳು ಕೇಂದ್ರೀಕೃತ ಕಮಾಂಡ್ ಕಂಟ್ರೋಲ್ನಲ್ಲಿದ್ದರೆ, ಬಾಕಿ 1000 ಆಂಬ್ಯುಲೆನ್ಸ್ಗಳನ್ನು ಸ್ಥಳೀಯ ಆಸ್ಪತ್ರೆಗಳು ನಿಯಂತ್ರಿಸುತ್ತಿವೆ. ಆರೋಗ್ಯ ಕವಚ ಯೋಜನೆಯಡಿ ಸಿಬ್ಬಂದಿ ಕೊರತೆಯಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಜವರಾಯಿಗೌಡ ಅವರು, ಗ್ರಾಮೀಣ ಭಾಗದಲ್ಲಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ಗಳು ಸಕಾಲಕ್ಕೆ ಸಿಗದೆ ಪ್ರತಿ ವರ್ಷ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಹೀಗಾಗಿ ಪ್ರತಿ ಮೂರ್ನಾಲ್ಕು ಗ್ರಾಮ ಪಂಚಾಯಿತಿಗೊಂದು ಆಂಬ್ಯುಲೆನ್ಸ್ ಸೇವೆ ಒದಗಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ